ಟ್ರಾಫಿಕ್ ದಂಡ ಪಾವತಿಸುವಂತೆ ನಕಲಿ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ ವಂಚಕರು ಆಂಬುಲೆನ್ಸ್ ಚಾಲಕರೊಬ್ಬರಿಂದ 2 ಲಕ್ಷ ರೂಪಾಯಿಗೂ ಅಧಿಕ ಹಣ ದೋಚಿದ್ದಾರೆ. ನಕಲಿ ಅಪ್ಲಿಕೇಶನ್ ಡೌನ್ಲೌಡ್ ಮಾಡಿದ ಸುರೇಶ ನರಸಪ್ಪ ಕುಡಗಡಿ ಅವರು ಹಣ ಕಳೆದುಕೊಂಡಿದ್ದಾರೆ.
ಜೋಯಿಡಾ ತಾಲೂಕಿನ ರಾಮನಗರದ ಜೆಡ್ಪಿ ಕ್ವಾರ್ಟರ್ಸ್ನಲ್ಲಿ ವಾಸವಾಗಿರುವ ಸುರೇಶ ಕುಡಗಡಿ ಅವರಿಗೆ ಸೆ 11ರಂದು ತಾನು ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್ಗೆ ಟ್ರಾಫಿಕ್ ವೈಲೇಶನ್ ಆಗಿದೆ ಎಂದು ತಿಳಿಸುವ ವಾಟ್ಸ್ಆ್ಯಪ್ ಸಂದೇಶ ಬಂದಿತ್ತು. ಆಂಬ್ಯುಲೆನ್ಸ್ ಮೇಲ್ವಿಚಾರಕರಿ ಗುರುರಾಜ ನಾಯಕ ಅವರಿಗೆ ಬಂದಿದ್ದ ಸಂದೇಶವನ್ನು ಅವರು ಸುರೇಶ ಕುಡಗಡಿ ಅವರಿಗೆ ಫಾರ್ವರ್ಡ್ ಮಾಡಿದ್ದರು.
ಸಂದೇಶದಲ್ಲಿದ್ದ ಲಿಂಕ್ ಮೂಲಕ ದಂಡ ಪಾವತಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಸುರೇಶ ಲಿಂಕ್ ಕ್ಲಿಕ್ ಮಾಡಿದಾಗ ಕ್ರೋಮ್ ಬ್ರೌಸರ್ನಲ್ಲಿ ಮತ್ತೊಂದು ವೆಬ್ಪುಟ ತೆರೆದುಕೊಂಡಿದ್ದು, ಅದರ ಮೂಲಕ ‘Next Parivahan’ ಹೆಸರಿನ ಅಪ್ಲಿಕೇಶನ್ ಡೌನ್ಲೋಡ್ ಆಯಿತು. ಅಪ್ಲಿಕೇಶನ್ ತೆರೆದಾಗ ಯಾವುದೇ ಮಾಹಿತಿ ಕಾಣಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅವರು ಅದೇ ದಿನ ಬೆಳಗಾವಿಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದ್ದರು.
ಆಂಬ್ಯುಲೆನ್ಸ್ ವಿರುದ್ಧ ಯಾವುದೇ ಟ್ರಾಫಿಕ್ ವೈಲೇಶನ್ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ ಬಳಿಕ ಇದು ಸೈಬರ್ ವಂಚಕರು ಕಳುಹಿಸಿರುವ ನಕಲಿ ಲಿಂಕ್ ಆಗಿರಬಹುದು ಎಂಬ ಅನುಮಾನ ಮೂಡಿತು. ಕೂಡಲೇ ಮೊಬೈಲ್ನಲ್ಲಿದ್ದ ಅಪ್ಲಿಕೇಶನ್ನ್ನು ಅನ್ಇನ್ಸ್ಟಾಲ್ ಮಾಡಿದರು.
ಆದರೆ, ಎರಡು ದಿನಗಳ ಬಳಿಕ ವಂಚನೆಯ ಬಲೆಗೆ ಸಿಲುಕಿರುವುದು ಬೆಳಕಿಗೆ ಬಂದಿತು. ಸೆ 14ರಂದು ಒಟ್ಟೂ ಮೂರು ಕ್ರೆಡಿಟ್ ಕಾರ್ಡ್ಗಳಿಂದ ಒಟ್ಟು 2,19,855 ರೂ ಹಣ ವಂಚನೆಯಾಗಿರುವುದು ಗೊತ್ತಾಯಿತು.
ಕೂಡಲೇ ಅವರು ಮೂರು ಕ್ರೆಡಿಟ್ ಕಾರ್ಡ್ಗಳ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ಆನ್ಲೈನ್ ವಂಚನೆಯ ಕುರಿತು ಮಾಹಿತಿ ನೀಡಿ ಕಾರ್ಡ್ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಅಲ್ಲದೆ 1930 ಸೈಬರ್ ಕ್ರೈಂ ಹೆಲ್ಪ್ಲೈನ್ಗೆ ಕರೆ ಮಾಡಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಿಂದ ನಡೆದ ವಂಚನೆಯ ಕುರಿತು ದೂರು ನೀಡಿದ್ದಾರೆ. ಸೆ.15ರಂದು ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ನಡೆದ ವಂಚನೆಯ ಬಗ್ಗೆಯೂ ವರದಿ ಮಾಡಿದ್ದಾರೆ.
ಟ್ರಾಫಿಕ್ ದಂಡದ ಹೆಸರಿನಲ್ಲಿ ಬಂದ ನಕಲಿ ಲಿಂಕ್ನ್ನು ಕ್ಲಿಕ್ ಮಾಡಿದ ಬಳಿಕ ಕ್ರೆಡಿಟ್ ಕಾರ್ಡ್ಗಳಿಂದ ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ವಂಚನೆಗೆ ಬಳಸಿದ ಲಿಂಕ್ ಹಾಗೂ ಹಣ ವರ್ಗಾವಣೆಯಾದ ಖಾತೆಗಳ ಕುರಿತು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಜೊಯಿಡಾದ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.