ಯಲ್ಲಾಪುರದ ಆನಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಗವಾದ ಶಿಕ್ಷಕರಿಗೆ ಬೀಳ್ಕೊಡುಗೆ ಜೊತೆ ಸಾಧಕರಿಗೆ ಸನ್ಮಾನ ನಡೆದಿದೆ. ಈ ಕ್ಲಸ್ಟರ್’ನಿಂದ ವರ್ಗವಾದ ಪ್ರತಿಭಾ ನಾಯಕ್ , ಜಿ ಕೆ ಭಟ್ಟ, ಮಂಗಲಾ ನಾಯಕ, ಸಣ್ಣಪ್ಪ ಭಾಗ್ವತ, ಶಿವರಾಮ ಕೋಮಾರ ಅವರ ಜೊತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಾದ ಮಾರುತಿ ಆಚಾರಿ ಹಾಗೂ ಸುಬ್ರಾಯ ಭಟ್ಟ ಅವರನ್ನು ಊರಿನ ಜನ ಗೌರವಿಸಿದ್ದಾರೆ.
ಯಲ್ಲಾಪುರದ ಆನಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಈ ಕಾರ್ಯಕ್ರಮ ನಡೆದಿದೆ. ಆನಗೋಡ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಶಾಲಾ ಮೇಲುಸ್ತುವಾರಿ ಜೊತೆ ಶಾಲಾ ಆಡಳಿತ ಮಂಡಳಿಯವರು ಸೇರಿ ಕಾರ್ಯಕ್ರಮ ನಡೆಸಿದ್ದಾರೆ. ಆನಗೋಡ ಶಾಲೆಯಲ್ಲಿ 9 ವರ್ಷಗಳ ಕಾಲ ಪ್ರತಿಭಾ ನಾಯಕ ಅವರು ಕೆಲಸ ನಿರ್ವಹಿಸಿದ್ದು, ಅವರ ಸೇವೆಯನ್ನು ಮಕ್ಕಳು ಹಾಗೂ ಪೋಷಕರು ಸ್ಮರಿಸಿದ್ದಾರೆ. ಗುರುವಂದನೆ ಸಲ್ಲಿಸಿ ಅವರನ್ನು ಬೀಳ್ಕೊಟ್ಟಿದ್ದಾರೆ. ಈ ವೇಳೆ ಶಾಲೆಯಲ್ಲಿ ಕಳೆದ ದಿನಗಳನ್ನು ನೆನೆದು ಪ್ರತಿಭಾ ನಾಯಕ ಅವರು ಭಾವುಕರಾಗಿದ್ದಾರೆ.
ಎಸ್ಡಿಎಂಸಿ ಅಧ್ಯಕ್ಷ ನಾಗೇಂದ್ರ ಭಟ್ಟ ಅವರು ಈ ವೇಳೆ ಮಾತನಾಡಿದ್ದು, `ಶಾಲೆಯ ಮೂಲಸೌಕರ್ಯ ವೃದ್ಧಿ, ಶೈಕ್ಷಣಿಕ ವಾತಾವರಣ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಹಿತರಕ್ಷಣೆಯಲ್ಲಿ ಶಿಕ್ಷಕರು ಹಾಗೂ ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿದ್ದಾರೆ. ಅವರ ಜೊತೆ ಊರಿನವರು ಸಹಕಾರ ನೀಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಜಿ. ಜಿ ಭಟ್ಟ ದಿವಾಕರಮನೆ ಜಿ ಜಿ ಭಟ್ಟ ಕೈಶೆಟ್ಟಿಮನೆ ಅವರು ಶಾಲೆಯ ಶ್ರೇಯಸ್ಸಿಗೆ ಸಹಾಯ ಮಾಡುತ್ತಿರುವುದನ್ನು ಸ್ಮರಿಸಿದರು. ಶಾಲೆಯ ಪ್ರಗತಿಗೆ ಕೈ ಜೋಡಿಸುವ ದಾಮೋದರ ಗಾಂವ್ಕರ್ ಶಂಭುಮನೆ ಅವರ ಸೇವೆಯನ್ನು ನೆನಪಿಸಿದರು.
`ಸರ್ಕಾರಿ ಶಾಲೆಯಾಗಿರುವ ಆನಗೋಡಿನಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಖಾಸಗಿ ಶಾಲೆಗಳಿಗೂ ಈ ಸರ್ಕಾರಿ ಶಾಲೆ ಪೈಪೋಟಿ ನೀಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಪಾಲಕರು ಹೆಚ್ಚಿನ ಪ್ರಯೋಜನಪಡೆಯಬೇಕು’ ಎಂದು ಸಿಆರ್ಪಿ ಚಂದ್ರಹಾಸ ನಾಯಕ ಅವರು ಹೇಳಿದರು. ಜೊತೆಗೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದವರನ್ನು ಅವರು ಅಭಿನಂದಿಸಿದರು.
ಶಿಕ್ಷಣ ಇಲಾಖೆಯಿಂದ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್ ತಾರಿಕೊಪ್ಪ, ಬಿಆರ್ಸಿ ಸಮನ್ವಯಾಧಿಕಾರಿ ಸಂತೋಷ್ ಜಿಗಳೂರು, ಪ್ರೌಢ ವಿಭಾಗದ ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ ಎನ್, ಪ್ರಾಥಮಿಕ ವಿಭಾಗದ ಇಸಿಓ ಸುಧಾಕರ್ ನಾಯಕ ಅವರು ಕಾರ್ಯಕ್ರಮದಲ್ಲಿದ್ದರು. ಶಿಕ್ಷಕಿ ಸೌಮ್ಯಶ್ರೀ ಹಾನಗಲ್ ನಿರೂಪಿಸಿದರು., ಶ್ರೀಧರ ಮಡಿವಾಳ, ಸುನಿತಾ ಭಂಡಾರಿ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು.