ಜನ ಸಾಮಾನ್ಯರ ಜನ ಜೀವನಕ್ಕೆ ಸಮಸ್ಯೆ ಉಂಟಾಗಲಿರುವ ಕಸ್ತೂರಿ ರಂಗನ್ ವರದಿಗೆ ವಿರೋಧವ್ಯಕ್ತಪಡಿಸಿ ಶಿರಸಿಯಲ್ಲಿ ಸೆಪ್ಟೆಂಬರ್ 5ರಂದು ಜಾಥಾ ನಡೆಯಲಿದೆ. ಮಲೆನಾಡಿನ ವಿವಿಧ ಭಾಗಗಳಲ್ಲಿ ಜಾಥಾ ಪೂರ್ವಬಾವಿ ಸಭೆ ನಡೆದಿದ್ದು, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಜಾಥಾಗೆ ಜನರನ್ನು ಆಮಂತ್ರಿಸುತ್ತಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿರುವ ಅಂಚಿನಲ್ಲಿರುವ 567 ಹಳ್ಳಿಗಳನ್ನ ಸೂಕ್ಷ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಜಿಲ್ಲೆಯ 138 ಗ್ರಾಮ ಪಂಚಾಯತದಲ್ಲಿನ ಕೃಷಿಕರು ಹಾಗೂ ಅರಣ್ಯವಾಸಿಗಳಿಗೆ ಆತಂಕ ಎದುರಾಗಿದೆ. ಈ ಬಗ್ಗೆ ಮಲೆನಾಡಿನ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ. `ಕಸ್ತೂರಿ ರಂಗನ್ ವರದಿಯ 7ನೇ ಅಧಿಸೂಚನೆಗೆ ಲಿಖಿತ ಆಕ್ಷೇಪ ಪತ್ರವನ್ನ ಸೆ 5ರಂದು ಶಿರಸಿಯಲ್ಲಿ ಜರುಗುವ ಆಕ್ಷೇಪ ಪತ್ರ ಸಲ್ಲಿಸುವ ಅಭಿಯಾನದಲ್ಲಿ ಸಲ್ಲಿಸಬೇಕು. ಪ್ರತಿ ಮನೆಗೆ ಒಬ್ಬರಂತೆ ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದವರು ಮನವಿ ಮಾಡಿದ್ದಾರೆ.
`ಈ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ವರದಿಯ ವಾಸ್ತವಿಕತೆ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ವರದಿ ನೀಡುವುದು ಅವಶ್ಯಕ’ ಎಂದು ಜಿ ಪಂ ಮಾಜಿ ಸದಸ್ಯೆ ಶೋಭಾ ನಾಯ್ಕ ಅವರು ಹೇಳಿದ್ದಾರೆ. ಶಿರಸಿಯ ಹುತ್ಗಾರದಲ್ಲಿ ಈ ದಿನ ನಡೆದ ಜಾಗೃತ ಸಭೆಯಲ್ಲಿ ಹಿರಿಯ ಧುರೀಣರಾದ ಕೃಷ್ಣ ಶೆಟ್ಟಿ, ಯುವ ಧುರೀಣರಾದ ವಿನೋದ ಸಾವಂತ, ನಾಗರಾಜ ಮುಕ್ರಿ ಇತರರು ಭಾಗವಹಿಸಿದ್ದರು.