ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ದಿಢೀರ್ ಆಗಿ ನಗರಸಭೆಗೆ ಭೇಟಿ ನೀಡಿದ್ದು, ಅಲ್ಲಿನ ಅಧಿಕಾರಿ-ಸಿಬ್ಬಂದಿಯ ಬೆವರಿಳಿಸಿದ್ದಾರೆ. ದಕ್ಷತೆಯಿಂದ ಕೆಲಸ ಮಾಡಿದ ಅಧಿಕಾರಿ-ಸಿಬ್ಬಂದಿ ಕರೆದು ನೀತಿ ಪಾಠ ಮಾಡಿದ್ದಾರೆ.
ನಗರಸಭೆ ವಿರುದ್ಧ ಸಾಕಷ್ಟು ದೂರು ಬಂದ ಹಿನ್ನಲೆ ಮಂಗಳವಾರ ಭೀಮಣ್ಣ ನಾಯ್ಕ ಅವರು ಅಲ್ಲಿಗೆ ಭೇಟಿ ನೀಡಿದರು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ನಡೆಸಿದ ಅವರು ವಿವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ತಾಕೀತು ಮಾಡಿದರು. ನಗರಸಭೆಯ ವಿವಿಧ ವಿಭಾಗಗಳಿಗೆ ತೆರಳಿ ಅಲ್ಲಿನ ಕಾರ್ಯವೈಖರಿಯನ್ನು ಗಮನಿಸಿದರು.
ಸಾರ್ವಜನಿಕರು ಸಲ್ಲಿಸಿರುವ ಖಾತಾ ಬದಲಾವಣೆ, ನಿರಾಕ್ಷೇಪಣಾ ಪತ್ರ, ಕಟ್ಟಡ ನಿರ್ಮಾಣ ಪರವಾನಿಗೆ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿಪಡೆದರು. ಕಡತ ವಿಲೇವಾರಿ ನಿಧಾನವಾಗಿರುವುದಕ್ಕೆ ಕಾರಣಗಳನ್ನು ಪ್ರಶ್ನಿಸಿದರು. ಸಣ್ಣ-ಪುಟ್ಟ ಕೆಲಸಗಳಿಗೂ ಜನ ದಿನವಿಡೀ ಕಾಯುವ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. `ಜನರ ಜೊತೆ ಸೌಜನ್ಯದಿಂದ ವರ್ತಿಸಬೇಕು. ಕಾಲಮಿತಿಯಲ್ಲಿ ಕೆಲಸ ಮಾಡಿಕೊಡಬೇಕು’ ಎಂದು ಸೂಚಿಸಿದರು.
`ಎಜಂಟರಿಗೆ ಇಲ್ಲಿ ಕೆಲಸ ಇಲ್ಲ. ಯಾವುದೇ ಮಧ್ಯವರ್ತಿಗಳ ಮೂಲಕ ಸರ್ಕಾರಿ ಕೆಲಸ ನಡೆಯಬಾರದು’ ಎಂದು ಸಹ ಭೀಮಣ್ಣ ನಾಯ್ಕ ಅವರು ಹೇಳಿದರು. ಕೆಲಸದ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.