ಕಳೆದ ಮೂರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಂಬ್ ಸ್ಪೋಟದ ಸುದ್ದಿ ಜೋರಾಗಿದೆ. ಹಳಿಯಾಳದಲ್ಲಿನ ಮನೆ ಸ್ಪೋಟ ಹಾಗೂ ಅಂಕೋಲಾ ಯುವಕ ಬಾಂಬ್ ಸ್ಪೋಟಿಸಿಕೊಂಡು ಸಾವನಪ್ಪಿರುವ ವಿಷಯದ ನಡುವೆ ದಶಕದ ಹಿಂದೆ ಯಲ್ಲಾಪುರದ ವ್ಯಕ್ತಿಯೊಬ್ಬರು ಗೋವಾಗೆ ಭಾರೀ ಪ್ರಮಾಣದ ಸ್ಪೋಟಕವನ್ನು ಅಕ್ರಮವಾಗಿ ಸಾಗಿಸಿದ ವಿಷಯವೂ ಮುನ್ನೆಲೆಗೆ ಬಂದಿದೆ.
ಜೂನ್ 22ರ ನಸುಕಿನಲ್ಲಿ ಹಳಿಯಾಳ ಕಾಳಗಿನಕೊಪ್ಪದ ವಸಂತ ಕೋರವರ್ ಅವರ ಮನೆಯಲ್ಲಿ ಬಾಂಬ್ ಸ್ಪೋಟವಾಗಿತ್ತು. ವಸಂತ ಕೋರವರ್ ಅವರು ಮನೆಯಲ್ಲಿಯೇ ಹಲವು ಬಾಂಬ್ ಇರಿಸಿಕೊಂಡಿದ್ದು, ಸ್ಪೋಟದ ನಂತರ ಇನ್ನಿತರ ಬಾಂಬುಗಳನ್ನು ಕೆರೆ ಬಳಿ ಎಸೆದು ಪರಾರಿಯಾಗಿದ್ದರು. ಸ್ಪೋಟದ ರಭಸಕ್ಕೆ ವಸಂತ ಕೋರವರ್ ಅವರ ಮನೆ ಮುರಿದಿದ್ದು, ಅಕ್ಕಪಕ್ಕದ ಮನೆಯವರು ಹಾನಿ ಅನುಭವಿಸಿದ್ದರು. ಅದಾದ ನಂತರ ಹುಬ್ಬಳ್ಳಿಯಲ್ಲಿ ಅಡಗಿದ್ದ ವಸಂತ ಕೋರವರ್ ಅವರನ್ನು ದಾಂಡೇಲಿ, ಹಳಿಯಾಳ ಹಾಗೂ ರಾಮನಗರ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ ಬಂಧಿಸಿದ್ದರು. ನಂತರ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಮನೇಶ್ವರ ಕೋರವರ್ ಸಹ ಸಿಕ್ಕಿಬಿದ್ದಿದ್ದರು.
ಜೂನ್ 27ರಂದು ಅಂಕೋಲಾದ ನಾಗೇಂದ್ರ ಗೌಡ ಅವರು ತಮ್ಮ ಬ್ಯಾಗಿನಲ್ಲಿ ಬಾಂಬ್ ಹಾಕಿಕೊಂಡು ಎಲ್ಲಡೆ ಓಡಾಡಿದ್ದರು. ಬೆಂಗಳೂರಿಗೆ ಹೋಗಿದ್ದ ನಾಗೇಂದ್ರ ಗೌಡ ಅವರು ರಮ್ಯಾ ಎಂಬಾತರನ್ನು ಬೆದರಿಸಿ ಕಾರಿನಲ್ಲಿ ಅಂಕೋಲಾಗೆ ಕರೆತರುವ ಪ್ರಯತ್ನ ಮಾಡಿದ್ದು, ತುಮಕೂರಿನ ಬಳಿ ಅವರಿಬ್ಬರ ನಡುವೆ ಜಗಳವಾದಾಗ ಬಾಂಬ್ ಸ್ಪೋಟಿಸಿದ್ದರು. ಇದರಲ್ಲಿ ನಾಗೇಂದ್ರ ಗೌಡ ಅವರು ಸಜೀವ ದಹನವಾಗಿದ್ದು, ರಮ್ಯಾ ಹಾಗೂ ಆ ಕಾರಿನ ಚಾಲಕ ಪ್ರವೀಣ ಅವರು ಕಾರಿನಿಂದ ಹಾರಿ ಜೀವ ಉಳಿಸಿಕೊಂಡಿದ್ದರು.
ಈ ಎರಡು ಪ್ರಕರಣದ ಬೆನ್ನಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಂಬ್ ಸಿಗುವ ಬಗ್ಗೆ ಖಾತ್ರಿಯಾಗಿದ್ದು, ಪೊಲೀಸರು ಆ ಬಾಂಬ್ ಮೂಲ ಹುಡುಕಲು ಹೊರಟಿದ್ದಾರೆ. ದಶಕದ ಹಿಂದೆ ಯಲ್ಲಾಪುರದ ಅಂಗಡಿ ಮಾಲಕರೊಬ್ಬರು ನೆರೆ ರಾಜ್ಯ ಗೋವಾಗೆ ದಾಖಲೆಗಳಿಲ್ಲದೇ ಸ್ಪೋಟಕ ಸಾಗಾಟ ಮಾಡಿದ ಪ್ರಕರಣವೂ ಇದೀಗ ಮುನ್ನಲೆಗೆ ಬಂದಿದೆ. ಕೋಟ್ಯಂತರ ರೂ ಮೌಲ್ಯದ ಸ್ಪೋಟಕವನ್ನ ಗೋವಾಗೆ ಸಾಗಿಸಿದ ಪ್ರಕರಣದಲ್ಲಿ ಆರೋಪಿ ಜೈಲು ಶಿಕ್ಷೆ ಅನುಭವಿಸಿ, ಊರಿಗೆ ಮರಳಿದ್ದರೂ ತನಿಖೆ ಆಧಾರದಲ್ಲಿ ಹಳೆಯ ಪ್ರಕರಣದ ಬಗ್ಗೆಯೂ ವಿಚಾರಣೆ ನಡೆದಿದೆ. ಜೊತೆಗೆ ಜಿಲ್ಲೆಯ ಅನೇಕ ಕಡೆ ವನ್ಯಜೀವಿ ಹತ್ಯೆ, ಅಕ್ರಮ ಮೀನುಗಾರಿಕೆಗೆ ಕದ್ದು-ಮುಚ್ಚಿ ಸ್ಪೋಟಕಗಳನ್ನು ಬಳಸಲಾಗುತ್ತದೆ. ವಿವಿಧ ಗಣಿಗಾರಿಕಾ ಪ್ರದೇಶದಲ್ಲಿಯೂ ಸ್ಪೋಟಕಗಳನ್ನು ಬಳಸಲಾಗುತ್ತಿದೆ. ವಿವಿಧ ಹಳ್ಳಿಗಳಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗಾಗಿ ನೆರೆ ಜಿಲ್ಲೆಗಳಿಂದ ಕೆಲವರು ಸ್ಪೋಟಕ ತರುತ್ತಿದ್ದು, ಅದೇ ಸ್ಪೋಟಕ ಬಳಸಿ ಬಾಂಬ್ ಸಿದ್ಧಪಡಿಸಲಾಗಿತ್ತಾ? ಎನ್ನುವುದರ ಬಗ್ಗೆಯೂ ತನಿಖೆ ಶುರುವಾಗಿದೆ.
ನಿನ್ನೆ ಪೊಲೀಸ್ ತಂಡವೊoದು ಯಲ್ಲಾಪುರಕ್ಕೆ ಆಗಮಿಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಿಸಿದೆ. ಹಳಿಯಾಳದಲ್ಲಿಯೂ ಪೊಲೀಸರು ಬಾಂಬ್ ಪತ್ತೆಯಾದ ಸ್ಥಳದ ಮೇಲೆ ನಿಗಾವಿರಿಸಿದ್ದಾರೆ. ಅಂಕೋಲಾದ ರಾಜನಗುಳಿ ಹೆಬ್ಬುಳ ಗ್ರಾಮದ ನಾಗೇಂದ್ರ ಗೌಡ ಅವರ ಮನೆ, ಸಮೀಪದ ಚಹಾ ಅಂಗಡಿಗೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ವಿವಿಧ ತನಿಖಾ ತಂಡದವರು ಸಹ ಸದ್ಯ ಬಾಂಬ್ ಕುರಿತಾಗಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದು, ಈವರೆಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಬ್ಯಾಗಿನಲ್ಲಿ ಬಾಂಬ್ ಹಾಕಿಕೊಂಡಿದ್ದ ನಾಗೇಂದ್ರ ಗೌಡ ಅವರು ಹೆಬ್ಬುಳದ ಆಸ್ವಾಸ್ ಹೋಟೆಲ್ನಲ್ಲಿ ಊಟದ ಪಾರ್ಸೆಲ್ ಪಡೆದು ಬಳಿಕ ಖಾಸಗಿ ಬಸ್ ಹತ್ತುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.