ಕನಸಿನಲ್ಲಿ ಬರುತ್ತಿದ್ದ ಕಾಡು ಪ್ರಾಣಿಗಳಿಗೆ ಹೆದರಿದ ವ್ಯಕ್ತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಕೊನೆಯುಸಿರೆಳೆದಿದ್ದಾರೆ. ವಿಷ ಸೇವಿಸಿದ ನಂತರ ನರಳಾಡುತ್ತಿದ್ದ ಜೊಯಿಡಾದ ಸಂತೋಷ ದೇವಳಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಜೊಯಿಡಾದ ಕಸಾಂಬಾದಲ್ಲಿ ಸಂತೋಷ ಶಾಂತರಾಮ ದೇವಳಿ (39) ಅವರು ವಾಸವಾಗಿದ್ದರು. ಕಟ್ಟಡ ಕಾರ್ಮಿಕರಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಗೌಂಡಿ ಕೆಲಸ ಮಾಡುವಲ್ಲಿ ಸಂತೋಷ ದೇವಳಿ ಅವರು ಪರಿಣಿತರಾಗಿದ್ದರು. ಹೀಗಿರುವಾಗ ಅವರ ಮನಸ್ಸು ಚಂಚಲವಾಗಿದ್ದು, ಮಾನಸಿಕವಾಗಿ ಕುಗ್ಗಿದ್ದರು. ರಾತ್ರಿ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ಮಲಗಿದ್ದವರು ದಿಢೀರ್ ಆಗಿ ಎದ್ದು `ಕಾಡು ಪ್ರಾಣಿಗಳು ಬೆನ್ನಟ್ಟುತ್ತಿವೆ’ ಎನ್ನುತ್ತಿದ್ದರು.
ಮನೆಯಲ್ಲಿ ಎಲ್ಲರೂ ಮಲಗಿದಾಗ ಕತ್ತಲಿನಲ್ಲಿ ಗೋಡೆ ನೋಡುತ್ತಿದ್ದ ಸಂತೋಷ ದೇವಳಿ ಅವರು ಅಲ್ಲಿಯೂ `ಕಾಡು ಪ್ರಾಣಿಗಳಿವೆ’ ಎಂದು ಕೂಗುತ್ತಿದ್ದರು. ಕರಡಿ, ಹುಲಿಯಂಥ ಜೀವಿಗಳನ್ನು ತಾವೇ ಕಲ್ಪಿಸಿಕೊಳ್ಳುತ್ತಿದ್ದರು. ಆ ಪ್ರಾಣಿಗಳಿಂದ ಆಕ್ರಮಣಕ್ಕೆ ಒಳಗಾದವರ ಹಾಗೇ ಭಾವಿಸಿ ಆಘಾತಕ್ಕೊಳಗಾಗುತ್ತಿದ್ದರು. ಮನೆಯ ಗೋಡೆಗಳ ಮೇಲೆಯೂ ಕಾಡು ಪ್ರಾಣಿಗಳು ಕಾಣುತ್ತಿರುವುದಾಗಿ ಅವರು ಪತ್ನಿ ಶಿಲ್ಪಾ ದೇವಳಿ ಅವರಲ್ಲಿ ಹೇಳಿದ್ದರು. ತಡರಾತ್ರಿಯ ವಿಚಿತ್ರ ವರ್ತನೆ ನೋಡಿದ ಶಿಲ್ಪಾ ದೇವಳಿ ಅವರು ಪತಿಯನ್ನು ಸಮಾಧಾನ ಮಾಡಿ ಮಲಗಿಸುತ್ತಿದ್ದರು. ಆದರೆ, ನಿತ್ಯವೂ ಅದೇ ಮುಂದುವರೆದಿತ್ತು. ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ಸಂತೋಷ ದೇವಳಿ ಅವರನ್ನು ಸರಿಯಾದ ಜೀವನದ ಕಡೆ ಸಾಗಿಸುವ ಪ್ರಯತ್ನ ಮುಂದುವರೆದಿತ್ತು.
ಕಾಡು ಪ್ರಾಣಿಗಳ ಬಗ್ಗೆ ಆತಂಕದಲ್ಲಿದ್ದ ಸಂತೋಷ ದೇವಳಿ ಅವರು ಅದೇ ಹೆದರಿಕೆಯಲ್ಲಿ ಜೂನ್ 24ರಂದು ಗದ್ದೆಗೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದ್ದರು. ಅವರನ್ನು ಉಳಿಸಿಕೊಳ್ಳುವುದಕ್ಕಾಗಿ ಶಿಲ್ಪಾ ದೇವಳಿ ಅವರು ಆಸ್ಪತ್ರೆಗೆ ಕರೆದೊಯ್ದರು. ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಜೂನ್ 28ರಂದು ಅವರು ಸಾವನಪ್ಪಿದರು. ಪತಿ ಸಾವಿನ ಸುದ್ದಿ ಕೇಳಿ ಶಿಲ್ಪಾ ದೇವಳಿ ಅವರು ಕಣ್ಣೀರು ಹಾಕಿದರು.