ಪ್ರೇಮ ವೈಪಲ್ಯದ ಕಾರಣ ಬಾಂಬ್ ಸಿಡಿಸಿ ಪ್ರೇಯಸಿ ಕೊಲ್ಲಲು ಸಂಚು ರೂಪಿಸಿದ್ದ ಅಂಕೋಲಾದ ನಾಗೇಂದ್ರ ಗೌಡ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಬಾಂಬ್ ಖರೀದಿಸಿದ್ದು ಖಚಿತವಾಗಿದೆ. 60ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ನಾಲ್ವರನ್ನು ವಶಕ್ಕೆಪಡೆದಿದ್ದಾರೆ.
ಬೆಂಗಳೂರಿಗೆ ಹೋಗಿದ್ದ ನಾಗೇಂದ್ರ ಗೌಡ ಅವರು ತಮ್ಮ ಪ್ರೇಯಸಿ ರಮ್ಯಾ ಅವರನ್ನು ಅಪಹರಿಸಿ ಅಂಕೋಲಾ ಕಡೆ ತರುವ ಪ್ರಯತ್ನ ಮಾಡಿದ್ದು, ತುಮಕೂರಿನ ಬಳಿ ಬಾಂಬ್ ಸಿಡಿಸಿದ್ದರು. ಅವರಿದ್ದ ಕಾರು ಸ್ಪೋಟವಾಗಿದ್ದು, ಕಾರಿನಲ್ಲಿದ್ದ ನಾಗೇಂದ್ರ ಗೌಡ ಅವರು ಸಜೀವ ದಹನವಾಗಿದ್ದರು. ಈ ವೇಳೆ ಚಾಲಕ ಪ್ರವೀಣ ಹಾಗೂ ರಮ್ಯಾ ಅವರು ಕಾರಿನಿಂದ ಹಾರಿ ಜೀವ ಉಳಿಸಿಕೊಂಡಿದ್ದರು. ಸದ್ಯ ರಮ್ಯಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಪೊಲೀಸರು ಅವರ ಹೇಳಿಕೆಯನ್ನುಪಡೆದಿದ್ದಾರೆ.
ನಾಗೇಂದ್ರ ಗೌಡ ಅವರ ಮನೆ ಶೋಧ ನಡೆಸಿದ ಪೊಲೀಸರಿಗೆ ಅಲ್ಲಿ ಮಹತ್ವದ ಸುಳಿವು ಸಿಕ್ಕಿಲ್ಲ. ನಾಗೇಂದ್ರ ಗೌಡ ಅವರ ಸ್ನೇಹಿತರನ್ನು ವಿಚಾರಿಸಿದಾಗಲೂ ಆತನ ವ್ಯಾಘ್ರ ಸ್ವರೂಪದ ಬಗ್ಗೆ ಮಾತನಾಡಿಲ್ಲ. ಅದಾಗಿಯೂ ಬೆಂಬಿಡದೇ ಓಡಾಡಿದ ಪೊಲೀಸರು ಜಿಲ್ಲೆಯ ಅನೇಕ ಕಡೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಸಿಕ್ಕ ಸುಳಿವಿನ ಆಧಾರದಲ್ಲಿ ನಾಲ್ವರನ್ನು ವಶಕ್ಕೆಪಡೆದಿದ್ದಾರೆ.
ಗೋಕರ್ಣ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ಅಂಕೋಲಾ ಮತ್ತು ತುಮಕೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಹೊನ್ನಾವರದ ಚಂದಾವರ ಮೂಲದ ಒಬ್ಬ ಹಾಗೂ ಸರಳೆಬೈಲಿನ ಮೂವರು ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ನಾಗೇಂದ್ರ ಗೌಡ ಅವರು ಖರೀದಿಸುವ ಮುನ್ನ ಮಾರಾಟಗಾರರೊಂದಿಗೆ ಮೊಬೈಲ್ನಲ್ಲಿ ಯಾವುದೇ ಮಾತುಕತೆ ನಡೆಸಿರಲಿಲ್ಲ. ಹೀಗಾಗಿ, ನಾಗೇಂದ್ರ ಗೌಡ ಹಾಗೂ ಸಹಚರರ ಫೋನ್ ಮಾಹಿತಿ ಪರಿಶೀಲಿಸಿದಾಗ ಅಂಥ ಯಾವ ಸಂವಹನವೂ ಸಿಕ್ಕಿರಲಿಲ್ಲ. ಯಾವುದೇ ಡಿಜಿಟಲ್ ಸುಳಿವು ಸಿಗದ ಹಾಗೇ ಪ್ಲಾನ್ ಮಾಡಿ ಬಾಂಬ್ ಖರೀದಿಸಿದ್ದು ಗೊತ್ತಾಗಿದೆ. ಖುದ್ದಾಗಿ ಚಂದಾವರಕ್ಕೆ ಹೋಗಿದ್ದ ನಾಗೇಂದ್ರ ಗೌಡ ಅಲ್ಲಿ ಮಾರಾಟಗಾರರನ್ನು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿ, ಮೂರು ಬಾಂಬ್ ಖರೀದಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಈ ಹಿಂದೆಯೂ ಮೀನು ಶಿಕಾರಿಗಾಗಿ ನಾಗೇಂದ್ರ ಗೌಡ ಅವರು ಅದೇ ಮಾರಾಟ ಜಾಲದವರಿಂದ ಬಾಂಬ್ ಖರೀದಿಸಿದ ಮಾಹಿತಿಯೂ ಸಿಕ್ಕಿದೆ.
ಇಲ್ಲಿ ತಯಾರಾಗುವ ನಾಡಬಾಂಬ್ಗಳ ತೀವ್ರತೆಯು ಅದರಲ್ಲಿ ಬಳಸಲಾಗುವ ನೈಟ್ರೇಟ್ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ನೈಟ್ರೇಟ್ ಹೆಚ್ಚಿದ್ದಷ್ಟೂ ಸ್ಫೋಟದ ತೀವ್ರತೆ ಭೀಕರವಾಗಿರುತ್ತದೆ. ಮುಖ್ಯವಾಗಿ ಕಾಡು ಹಂದಿಗಳ ಬೇಟೆಗಾಗಿ ಕೋಳಿ ಮಾಂಸದೊಳಗೆ ಈ ನಾಡಬಾಂಬ್ಗಳನ್ನು ಸುತ್ತಿ ಇಡಲಾಗುತ್ತದೆ. ಆಹಾರ ಅರಸಿ ಬರುವ ಹಂದಿಗಳು ಇದನ್ನು ಅಗಿಯುತ್ತಿದ್ದಂತೆ ಉಂಟಾಗುವ ಒತ್ತಡಕ್ಕೆ ಬಾಂಬ್ ಒಮ್ಮೆಲೇ ಬ್ಲಾಸ್ಟ್ ಆಗುತ್ತದೆ. ಈ ಭೀಕರ ಸ್ಫೋಟಕ್ಕೆ ಪ್ರಾಣಿಯ ಮುಖ ಹಾಗೂ ತಲೆ ಭಾಗ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪುತ್ತದೆ. ಅಂಥಹುದೇ ಬಾಂಬ್ ಬಳಸಿ ನಾಗೇಂದ್ರ ಗೌಡ ಕಾರು ಸ್ಪೋಟಿಸಿ ಆತ್ಮಹತ್ಯೆಗೆ ಶರಣಾದ ಅನುಮಾನಗಳಿವೆ.