ಕಳಲೆಯನ್ನ ತಡಿದ ದಿನವೇ ತಿನ್ನಬಾರದು ಅಂತ ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ಆದರೆ ಯಾಕೆ ಗೊತ್ತಾ ? ಮುಂಗಾರು ಆರಂಭವಾದರೆ ಸಾಕು, ಮಲೆನಾಡಿನ ಕಾಡುಗಳಲ್ಲಿ ಬಿದಿರಿನ ಬುಡದಿಂದ ಮೃದುವಾದ ಕಳಲೆಗಳು ತಲೆ ಎತ್ತಲಾರಂಭಿಸುತ್ತವೆ. ಕೆಲವೇ ವಾರಗಳ ಕಾಲ ದೊರೆಯುವ ಈ ಕಳಲೆಗಾಗಿ ಗ್ರಾಮೀಣ ಜನರು ಕಾಡಿನತ್ತ ಹೆಜ್ಜೆ ಹಾಕುತ್ತಾರೆ. ಮಾರುಕಟ್ಟೆಗಳಲ್ಲೂ ಕಳಲೆಯ ರಾಶಿ ಕಾಣಸಿಗುತ್ತದೆ. ಪಲ್ಯ, ಹುಳಿ, ಸಾಂಬಾರ್, ಉಪ್ಪಿನಕಾಯಿ. ಹೀಗೆ ಹಲವು ಬಗೆಯ ಖಾದ್ಯಗಳಲ್ಲಿ ಕಳಲೆಗೆ ವಿಶೇಷ ಸ್ಥಾನವಿದೆ. ಆದರೆ ಕಳಲೆಯ ವಿಷಯದಲ್ಲಿ ಮಲೆನಾಡಿನ ಹಿರಿಯರು ಕಿತ್ತ ತಕ್ಷಣ ಕಳಲೆ ತಿನ್ನಬಾರದು ಎನ್ನುವ ನಿಯಮ ಪಾಲಿಸುತ್ತಾರೆ.
ಇದು ಕೇವಲ ಸಂಪ್ರದಾಯವಲ್ಲ, ಅದರ ಹಿಂದೆ ಆರೋಗ್ಯ ರಕ್ಷಣೆಯ ವೈಜ್ಞಾನಿಕ ಕಾರಣವೂ ಇದೆ. ತಾಜಾ ಕಳಲೆಯಲ್ಲಿ ಸಯಾನೋಜೆನಿಕ್ ಗ್ಲೈಕೋಸೈಡ್ಗಳು ಎಂಬ ನೈಸರ್ಗಿಕ ಸಂಯುಕ್ತಗಳಿರುತ್ತವೆ. ಕಳಲೆಯನ್ನು ಕಚ್ಚಾ ಅಥವಾ ಸರಿಯಾಗಿ ಸಂಸ್ಕರಿಸದೇ ತಿಂದರೆ, ಈ ಸಂಯುಕ್ತಗಳು ದೇಹದಲ್ಲಿ ಹೈಡ್ರೋಜನ್ ಸಯನೈಡ್ ಎಂಬ ವಿಷಕಾರಿ ಅಂಶವನ್ನು ಬಿಡುಗಡೆ ಮಾಡುತ್ತವೆ. ಅದರ ಪರಿಣಾಮವಾಗಿ ವಾಕರಿಕೆ, ವಾಂತಿ, ಹೊಟ್ಟೆನೋವು, ತಲೆಸುತ್ತು, ತಲೆನೋವು ಹಾಗೂ ಅಜೀರ್ಣದಂತಹ ತೊಂದರೆಗಳು ಕಾಣಿಸಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳೂ ಉಂಟಾಗಲಿದೆ.
ಇದೇ ಕಾರಣಕ್ಕೆ ಮಲೆನಾಡಿನ ಮನೆಗಳಲ್ಲಿ ಕಳಲೆಯನ್ನು ಕಿತ್ತ ತಕ್ಷಣ ಅಡುಗೆ ಮಾಡುವುದಿಲ್ಲ. ಮೊದಲು ಅದರ ಗಟ್ಟಿಯಾದ ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸುತ್ತಾರೆ. ಬಳಿಕ ಎರಡು ಅಥವಾ ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿಡುತ್ತಾರೆ. ಈ ಅವಧಿಯಲ್ಲಿ ಪ್ರತಿದಿನ ನೀರನ್ನು ಬದಲಾಯಿಸುವ ಪದ್ಧತಿಯೂ ಇದೆ. ಕೆಲವರು ಮೊದಲು ಚೆನ್ನಾಗಿ ಕುದಿಸಿ ಆ ನೀರನ್ನು ಸಂಪೂರ್ಣವಾಗಿ ಬಿಸಾಡುತ್ತಾರೆ. ಈ ಪ್ರಕ್ರಿಯೆಯಿಂದ ವಿಷಕಾರಿ ಅಂಶಗಳು ಬಹುತೇಕ ಹೊರಹೋಗುತ್ತವೆ. ಜೊತೆಗೆ ಕಳಲೆಯ ಕಹಿತನವೂ ಕಡಿಮೆಯಾಗಿ ರುಚಿ ಹೆಚ್ಚುತ್ತದೆ.
ಆಧುನಿಕ ವಿಜ್ಞಾನ ಇಂದು ಹೇಳುತ್ತಿರುವ ಸಂಗತಿಯನ್ನು ಮಲೆನಾಡಿನ ಜನರು ಹಲವು ತಲೆಮಾರುಗಳ ಹಿಂದೆಯೇ ತಮ್ಮ ಅನುಭವದಿಂದ ಅರಿತುಕೊಂಡಿದ್ದರು. ಅದಕ್ಕಾಗಿಯೇ “ನೆನೆಸದ ಕಳಲೆ ಊಟಕ್ಕೆ ಬೇಡ” ಎಂಬ ಎಚ್ಚರಿಕೆಯನ್ನು ಹಿರಿಯರು ನೀಡುತ್ತಿದ್ದರು. ಆ ಕಾಲದಲ್ಲಿ ವೈಜ್ಞಾನಿಕ ಹೆಸರು ಗೊತ್ತಿರದಿದ್ದರೂ, ಸರಿಯಾಗಿ ಸಂಸ್ಕರಿಸದ ಕಳಲೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅರಿವು ಅವರ ಬದುಕಿನ ಅನುಭವದಿಂದಲೇ ಬಂದಿತ್ತು.
ಕಳಲೆ ಆರೋಗ್ಯಕ್ಕೂ ಉತ್ತಮ ಆಹಾರವಾಗಿದೆ. ಇದರಲ್ಲಿ ನಾರಿನಾಂಶ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ವಿಟಮಿನ್ಗಳು ಹಾಗೂ ಹಲವು ಖನಿಜಾಂಶಗಳಿವೆ. ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೊರಿಯನ್ನು ಹೊಂದಿರುವುದರಿಂದ ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಅದರ ಎಲ್ಲ ಪ್ರಯೋಜನಗಳು ದೊರೆಯಬೇಕಾದರೆ ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ಸೇವಿಸುವುದು ಅತ್ಯಗತ್ಯ.
ಹೀಗಾಗಿ ಕಳಲೆ ಪ್ರಕೃತಿಯ ಅಮೂಲ್ಯ ಕೊಡುಗೆ ಸರಿ, ಆದರೆ ಅದನ್ನು ಕಿತ್ತ ತಕ್ಷಣ ತಿನ್ನುವ ಆಹಾರವಲ್ಲ. ಎರಡು–ಮೂರು ದಿನ ನೀರಿನಲ್ಲಿ ನೆನೆಸಿ ಅಥವಾ ಚೆನ್ನಾಗಿ ಕುದಿಸಿ ವಿಷಕಾರಿ ಅಂಶಗಳನ್ನು ತೆಗೆದ ನಂತರವೇ ಅದು ಸುರಕ್ಷಿತ ಮತ್ತು ಆರೋಗ್ಯಕರ ಆಹಾರವಾಗುತ್ತದೆ. ಪ್ರಕೃತಿಯ ಕೊಡುಗೆಯನ್ನು ಸವಿಯುವಾಗ ಪ್ರಕೃತಿಯ ನಿಯಮವನ್ನೂ ಪಾಲಿಸಿದರೆ ಮಾತ್ರ ಅದರ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯ.