ಉತ್ತರ ಕನ್ನಡ ಜಿಲ್ಲೆಯ ಉದ್ದಗಲಕ್ಕೂ ಮಳೆ ಜೋರಾಗಿದೆ. ಈ ಹಿನ್ನಲೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜುಲೈ 1ರಿಂದ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರಿಗೆ ಎಚ್ಚರಿಕೆವಹಿಸಲು ಸೂಚಿಸಿದೆ. ಮುಂದಿನ ಒಂದು ವಾರಗಳ ಕಾಲ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಗಳಿರುವ ಬಗ್ಗೆ ಹವಾಮಾನ ಇಲಾಖೆಯೂ ಮಾಹಿತಿ ನೀಡಿದೆ. ಅದರಲ್ಲಿಯೂ ಈ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಸುರಿಯಲಿದೆ.
ಜುಲೈ 2 ಹಾಗೂ ಜುಲೈ 5, 6 ಹಾಗೂ 7ರಂದು ಭಾರೀ ಪ್ರಮಾಣದಲ್ಲಿ ಮಳೆ ಬೀಳುವ ಮುನ್ಸುಚನೆ ಸಿಕ್ಕಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ ಸಾಕಷ್ಟು ಮುನ್ನಚ್ಚರಿಕಾ ಕ್ರಮ ಅನುಸರಿಸಲಾಗಿದೆ. ಜುಲೈ 3 ಹಾಗೂ 4ರಂದು ಮಳೆ ಕೊಂಚ ಬಿಡುವು ನೀಡುವ ಲಕ್ಷಣವಿರುವ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ 204.5ಮಿಲೀ ಮೀಟರ್ ಮಳೆಯಾಗುವ ಸಾಧ್ಯತೆಗಳಿವೆ.
ಮಳೆ ಪ್ರಮಾಣ ಅಧಿಕವಿರುವ ಕಾರಣ ಕೆರೆ, ನದಿ ಹಾಗೂ ಸಮುದ್ರ ತೀರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಕೋರಲಾಗಿದೆ. ಮಳೆ ಹಾಗೂ ಸಿಡಿಲಿನ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆಗಳಿಂದ ದೂರವಿರಬೇಕು ಎಂದು ಸರ್ಕಾರ ಸೂಚಿಸಿದೆ. ಅಪಾಯಕಾರಿ ಮರ ಹಾಗೂ ಶಿಥಿಲಗೊಂಡ ಕಟ್ಟಡಗಳ ಆಶ್ರಯ ಪಡೆಯದಂತೆಯೂ ಮನವಿ ಮಾಡಲಾಗಿದೆ.