`ಅನುದಾನಿತ ಶಾಲೆ ಶಿಕ್ಷಕರು ಹಾಗೂ ಸರ್ಕಾರಿ ಶಾಲೆ ಶಿಕ್ಷಕರ ನಡುವಿನ ತಾರತಮ್ಯ ನೀತಿ ಬಗೆಹರಿಸಬೇಕು’ ಎಂದು ಆಗ್ರಹಿಸಿ ಯಲ್ಲಾಪುರದ ಮಾಧ್ಯಮಿಕ ನೌಕರರ ಸಂಘದವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇನ್ನೂ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಅವರು ಆಗ್ರಹಿಸಿದ್ದಾರೆ.
`2006ರ ಏಪ್ರಿಲ್ 1ರ ಮುಂಚೆ ಅನುದಾನಿತ ಶಾಲೆಗಳಲ್ಲಿ ನೇಮಕಾತಿ ಹೊಂದಿ 2006ರ ನಂತರ ಅನುದಾನಕ್ಕೆ ಒಳಪಟ್ಟಿರುವಂಥ ಶಿಕ್ಷಕರಿಗೆ ಹಿಂದಿನ ಸೇವೆಯನ್ನು ಪರಿಗಣಿಸಿ ಓ ಪಿ ಎಸ್ ಯೋಜನೆ ಜಾರಿಗೊಳಿಸಬೇಕು. ಪ್ರಣಾಳಿಕೆಯಲ್ಲಿ ಸೂಚಿಸಿದ ಪ್ರಕಾರ ಓ ಪಿ ಎಸ್ ಜಾರಿಗೊಳಿಸಲು ಬಸವರಾಜ ಹೊರಟ್ಟಿ ಅವರ ಕಾಲ್ಪನಿಕ ವೇತನದ ಮೇಲಿನ ವರದಿ ಜಾರಿ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. `ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುವ ಜ್ಯೋತಿ ಸಂಜೀವಿನಿ ಹಾಗೂ ಇನ್ನಿತರ ಆದೇಶಗಳನ್ನು ಯಥಾವತ್ತಾಗಿ ನಮಗೂ ಜಾರಿ ಮಾಡಬೇಕು. ಅನುದಾನಿತ ಮತ್ತು ಸರಕಾರಿ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಾರತಮ್ಯವಿಲ್ಲದ ಹಾಗೇ ಕಾರ್ಯಕ್ರಮ ಆಯೋಜಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಮಲೆನಾಡಿನ ಪ್ರದೇಶಗಳ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅನುಪಾತವನ್ನು ಕಡಿಮೆಗೊಳಿಸಿದ ಬಗ್ಗೆಯೂ ಆಕ್ಷೇಪಿಸಿದ್ದಾರೆ.
ಮಾಧ್ಯಮಿಕ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯ ಎಂ ರಾಜಶೇಖರ ಅವರು ಮಾತನಾಡಿ, `30 ವರ್ಷಕ್ಕೂ ಹೆಚ್ಚಿನ ಅವಧಿಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು ನಿವೃತ್ತಿ ವೇಳೆ ಬರಿಗೈಯಲ್ಲಿ ಮನೆಗೆ ಕಳುಹಿಸುವುದು ಸರಿಯಲ್ಲ. ಸರ್ಕಾರ ಮಲತಾಯಿ ಧೋರಣೆ ಬಿಟ್ಟು ಎಲ್ಲರಿಗೂ ಸಮಾನ ನ್ಯಾಯ ಕೊಡಬೇಕು’ ಎಂದು ಹೇಳಿದರು. ತಾಲೂಕ ಸಮಿತಿಯ ಅಧ್ಯಕ್ಷÀ ವಿನಾಯಕ ಹೆಗಡೆ, ಕಾರ್ಯದರ್ಶಿ ಶರಣಬಸವ ಬೇವಿನಕಟ್ಟಿ ಇತರರು ಈ ವೇಳೆ ಹಾಜರಿದ್ದು ನ್ಯಾಯಕ್ಕಾಗಿ ಪಟ್ಟು ಹಿಡಿದರು.