ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು `ತಮಗೆ ಸಿದ್ದಗಂಗಾ ಮಠದ ಶ್ರೀಗಳೇ ಪ್ರೇರಣೆ’ ಎಂದು ಪುನರುಚ್ಚರಿಸಿದ್ದಾರೆ. ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ `ಸಿದ್ದಗಂಗಾ ಶ್ರೀಗಳ ಸಮಾಜಮುಖಿ ಕಾರ್ಯಗಳಿಂದ ಪ್ರೇರೇಪಿತರಾಗಿ ತಾವು ಸಮಾಜ ಸೇವೆ ನಡೆಸುತ್ತಿದ್ದೇನೆ’ ಎಂದವರು ಹೇಳಿದ್ದು, ಈ ವರ್ಷವೂ ಅದೇ ಮಾತುಗಳನ್ನಾಡಿದ್ದಾರೆ.
ಶಿರಸಿ ಬದನಗೋಡು ಬಳಿಯ ಸಂತೊಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಅವರು ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಈ ವೇಳೆ ಊರಿನವರು ಅವರನ್ನು ಗೌರವಿಸಿದರು. `ಸಿದ್ದಗಂಗಾ ಮಠದ ಶ್ರೀಗಳು ಅನ್ನ, ಅಕ್ಷರ, ಆಶ್ರಯ ಚಿಂತನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿಸಹಿತ ಶಿಕ್ಷಣ ನೀಡಿದ್ದಾರೆ. ಅಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಅವರ ಸಮಾಜ ಸೇವೆಗಳು ನಮಗೆ ದಾರಿದೀಪವಾಗಿದೆ’ ಎಂದು ಅವರು ಹೇಳಿದ್ದಾರೆ. `ಶ್ರೀಗಳ ಪ್ರೇರಣೆಯಿಂದ 150ಕ್ಕೂ ಅಧಿಕ ಶಾಲೆಗಳಿಗೆ ಶುದ್ಧ ನೀರಿನ ಘಟಕ ಒದಗಿಸಿದ್ದೇವೆ’ ಎಂದಿದ್ದಾರೆ.
ಗ್ರಾಮಸ್ಥರಾದ ಯುವರಾಜ್ ಗೌಡ ಅವರು ಮಾತನಾಡಿ `ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಯನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. ಅನಂತಮೂರ್ತಿ ಅವರಿಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸಗಳನ್ನು ಮಾಡಲು ಶಕ್ತಿ ಸಿಗಲಿ’ ಎಂದು ಹಾರೈಸಿದರು. ಪ್ರಮುಖರಾದ ಮಾರುತಿ ಎನ್ ಸಾಳುಂಕೆ, ಶಾಲೆಯ ಎಸ್ ಎಂ ಸಿ ಅಧ್ಯಕ್ಷ ರವಿ ಬೋರಳ್ಳಿ, ಬದನಗೋಡು ಗ್ರಾಮ ಪಂಚಾಯತಿ ಪಿಡಿಓ ಟಿ ಪಿ ಲಂಬಾಣಿ, ಶಿವಪ್ಪ ದುರ್ಗಪ್ಪ ಬೋವಿವಡ್ಡರ್ ಇದ್ದರು.