ಕಾರವಾರ ಜೈಲು ಸೇರಿದ ಕೈದಿಗಳು ಕರಕುಶಲ ವಸ್ತುಗಳ ತಯಾರಿಕಾ ತರಬೇತಿ ಪಡೆದಿದ್ದು, ಅದರ ಮೂಲಕ ಆದಾಯಗಳಿಸುತ್ತಿದ್ದಾರೆ. ಇಲ್ಲಿರುವ 25 ಕೈದಿಗಳು ಜೈಲಿನ ಚೌಕಟ್ಟಿನೊಳಗೆ ಕುಳಿತು ಕೌಶಲ್ಯ ಆಧಾರಿತ ತರಬೇತಿ ಮುಗಿಸಿದ್ದಾರೆ.
ಜೈಲು ಎಂದರೆ ಕೇವಲ ಶಿಕ್ಷೆ ನೀಡುವ ಸ್ಥಳವಲ್ಲ. ಅದು ಅಪರಾಧಿಗಳನ್ನು ಸನ್ಮಾರ್ಗಕ್ಕೆ ತರುವ ಸುಧಾರಣಾ ಗೃಹ ಎಂದು ಭಾವಿಸಲಾಗುತ್ತದೆ. ಕಾರಾಗೃಹಗಳಲ್ಲಿ ಕೈದಿಗಳ ಮನಃ ಪರಿವರ್ತನೆಗಾಗಿ ಹಮ್ಮಿಕೊಳ್ಳಲಾಗುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿವೆ. ಕಾರವಾರದ ಜಿಲ್ಲಾ ಕಾರಾಗೃಹದಲ್ಲಿಯೂ ನಕಾರಾತ್ಮಕ ಯೋಚನೆ ದೂರ ಮಾಡುವುದಕ್ಕಾಗಿ ಕೌಶಲ್ಯ ತರಬೇತಿ ಆಯೋಜಿಸಲಾಗಿದ್ದು, ಅಲ್ಲಿ ಪರಿಣಿತಿಪಡೆದ ಕೈದಿಗಳು ಬಗೆ ಬಗೆಯ ವಸ್ತು ತಯಾರಿಸಿದ್ದಾರೆ. ಸದ್ಯ ಕಾರಾಗೃಹದಲ್ಲಿ ಪರಿಸರ ಸ್ನೇಹಿ ಕೈಚೀಲಗಳು, ಗೃಹೋಪಯೋಗಿ ವಸ್ತುಗಳು, ಮಣ್ಣಿನ ಕಲಾಕೃತಿಗಳು ಹಾಗೂ ಆಕಷÀðಕ ವರ್ಣಚಿತ್ರಗಳು ಸಿದ್ಧವಾಗಿದೆ. ಆ ವಸ್ತುಗಳೆಲ್ಲವೂ ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆ ಪ್ರವೇಶಿಸಿ ಪೈಪೋಟಿ ನೀಡುತ್ತಿವೆ.
ಸಾಮಾನ್ಯವಾಗಿ ಜೈಲುಗಳಲ್ಲಿ ದೈಹಿಕ ಶ್ರಮಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ಸದ್ಯ ಅದರ ಜೊತೆ ಕಾರವಾರದ ಕೈದಿಗಳು ಪರಿಸರ ಸ್ನೇಹಿ ಮತ್ತು ಕಲಾತ್ಮಕ ವಸ್ತುಗಳನ್ನು ತಯಾರಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಇಲ್ಲಿ ಪರಿಸರ ಸ್ನೇಹಿ ಬಟ್ಟೆ ಮತ್ತು ಕಾಗದದ ಚೀಲಗಳು, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ವಿವಿಧ ಗಾತ್ರದ ಮತ್ತು ವಿನ್ಯಾಸದ ಸುಂದರವಾದ ಬಟ್ಟೆಯ ಬ್ಯಾಗುಗಳಿದ್ದು, ಅವು ದಿನನಿತ್ಯದ ಬಳಕೆಗೆ ಹಾಗೂ ಕಚೇರಿ ಬಳಕೆಗೆ ಯೋಗ್ಯವಾಗಿವೆ. `ಈ ಸುಧಾರಣಾ ಪ್ರಕ್ರಿಯೆಯಿಂದಾಗಿ ಕೈದಿಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತಿದ್ದು, ನಿರಂತರ ಕೆಲಸದಲ್ಲಿ ತೊಡಗುವುದರಿಂದ ಅವರ ಮಾನಸಿಕ ಒತ್ತಡ, ಖಿನ್ನತೆ ಮತ್ತು ಆಕ್ರೋಶ ಕಡಿಮೆಯಾಗುತ್ತಿದೆ’ ಎಂಬುದು ಕಾರಾಗೃಹ ಅಧಿಕಾರಿ ಹೇಮವತಿ ಅವರ ನುಡಿ.
`ಕೈದಿಗಳು ತಯಾರಿಸುವ ಈ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇದರಿಂದ ಅವರು ಜೈಲಿನಲ್ಲಿದ್ದೂ ತಮ್ಮ ಕುಟುಂಬಕ್ಕೆ ಆರ್ಥಿಕ ಆಸರೆಯಾಗಲು ಸಾಧ್ಯವಾಗುತ್ತದೆ. ಅಲ್ಲದೇ ಅವರು ಜೈಲಿನಿಂದ ಬಿಡುಗಡೆಯಾದಾಗ ಶೂನ್ಯದಿಂದ ಹೊಸ ಜೀವನ ಆರಂಭಿಸಲು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.