ಯಲ್ಲಾಪುರದ ಬಾಲಕಿಯೊಬ್ಬರ ಮೇಲೆ ಭಟ್ಕಳದಲ್ಲಿ ಅತ್ಯಾಚಾರ ನಡೆದಿದೆ. ನೊಂದವರಿಗೆ ನೆರವು ನೀಡಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.
ಬೆoಗಳೂರು ಬಳಿಯ ರಾಮನಗರದ ಅಭಿನಂದನ ಗೌಡ ಅವರು ಪೊಲೀಸ್ ಅಧಿಕಾರಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯಲ್ಲಿ ಅವರು ಪಿಸೈ ಆಗಿ ಕೆಲಸ ಮಾಡುತ್ತಿದ್ದಾರೆ. ಯಲ್ಲಾಪುರದ ಬಾಲಕಿಯೊಬ್ಬರನ್ನು ಅಭಿನಂದನ ಗೌಡ ಅವರು ಪರಿಚಯಿಸಿಕೊಂಡಿದ್ದು, ತಮ್ಮ ಅಧಿಕಾರ ಬಳಸಿ ಅವರಿಗೆ ಸಹಾಯ ಮಾಡುವ ಆಶ್ವಾಸನೆ ನೀಡಿದ್ದಾರೆ. ಅನೇಕ ಬಾರಿ ಆ ಬಾಲಕಿಗೆ ಫೋನ್-ಮೆಸೆಜ್ ಮಾಡಿದ್ದಾರೆ. ಜೊತೆಗೆ ಆ ಬಾಲಕಿಗೆ ಆಗಾಗ ಖರ್ಚಿಗೆ ದುಡ್ಡು ಕೊಟ್ಟು ಅವರ ಸ್ನೇಹ ಸಂಪಾದಿಸಿದ್ದಾರೆ.
2026ರ ಮೇ 31ರಂದು ಹೊನ್ನಾವರದ ಅಪ್ಸರಕೊಂಡದಲ್ಲಿ ಅಭಿನಂದನ ಗೌಡ ಅವರ ತಂಗಿ ಮಗಳ ಹುಟ್ಟು ಹಬ್ಬ ನಡೆದಿದೆ. ಆ ಸಂಭ್ರಮದಲ್ಲಿ ಭಾಗವಹಿಸುವಂತೆ ಅಭಿನಂದನ ಗೌಡ ಅವರು ಯಲ್ಲಾಪುರದ ಬಾಲಕಿಯನ್ನು ಆಮಂತ್ರಿಸಿದ್ದಾರೆ. ಹೊನ್ನಾವರಕ್ಕೆ ಬಂದ ಬಾಲಕಿಯನ್ನು ಅಭಿನಂದನ ಗೌಡ ಅವರೇ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ವಿವಿಧ ಕಡೆ ಸುತ್ತಾಡಿಸಿದ್ದಾರೆ. ನಂತರ ಅವರ ಆ ಬಿಳಿ ಬಣ್ಣದ ಕಾರು ಭಟ್ಕಳದ ಕಡೆ ಹೋಗಿದ್ದು, ಭಟ್ಕಳದ KSRTC ಬಸ್ ನಿಲ್ದಾಣ ಬಳಿಯ Royal Oak Lodge ಲಾಡ್ಜ್ ಮುಂದೆ ನಿಂತಿದೆ.
ಆ ಬಾಲಕಿ ಜೊತೆ 3ನೇ ಪ್ಲೋರಿಗೆ ಹೋದ ಅಭಿನಂದನ ಗೌಡ ಅವರು ಅಲ್ಲಿ 202ರ ಕೊಠಡಿ ಬಾಡಿಗೆಗೆ ಪಡೆದಿದ್ದಾರೆ. ಆ ರೂಮಿನೊಳಗೆ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಆಕೆ ಅಪ್ರಾಪ್ತೆ ಎಂಬ ಅರಿವಿದ್ದರೂ ಅತ್ಯಾಚಾರ ಮಾಡಿದ್ದಾರೆ. ಇದರಿಂದ ನೋವು ಅನುಭವಿಸಿದ ಬಾಲಕಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಸಹಾಯ ಮಾಡುವುದಾಗಿ ನಂಬಿಸಿ ವಿಶ್ವಾಸಗಳಿಸಿ ಲೈಂಗಿಕವಾಗಿ ಬಳಸಿಕೊಂಡ ಪಿಸೈ ಅಭಿನಂದನ ಗೌಡ ಅವರ ವಿರುದ್ಧ ದೂರು ನೀಡಿದ್ದಾರೆ.
ಜುಲೈ 4ರ ರಾತ್ರಿ 11ಗಂಟೆಗೆ ಭಟ್ಕಳ ಪೊಲೀಸರಿಗೆ ಈ ವಿಷಯ ಗೊತ್ತಾಗಿದ್ದು, ತಮ್ಮದೇ ಇಲಾಖೆ ಪಿಸೈ ವಿರುದ್ಧ ಅವರು ಕಾನೂನು ಕ್ರಮ ಜರುಗಿಸಿದ್ದಾರೆ. ಬಾಲಕಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದ ಪಿಐ ದಿವಾಕರ ಪಿ ಎಂ ಅವರು ಅಭಿನಂದನ ಗೌಡ ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಡಿವೈಎಸ್ಪಿ ಗಿರೀಶ್ ಬಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.