ಜುಲೈ 10ರಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 65 ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅದರ ಅಂಗವಾಗಿ ಜುಲೈ 12ರಂದು ಬಿಜೆಪಿ ರೈತಮೋರ್ಚಾದವರು ಆರೋಗ್ಯ ಶಿಬಿರವನ್ನು ಆಯೋಜಿಸಿದ್ದಾರೆ.
ಸಿದ್ದಾಪುರದ ಹಾರ್ಸಿಕಟ್ಟಾದಲ್ಲಿ ಭಾನುವಾರ ಈ ಶಿಬಿರ ನಡೆಯಲಿದೆ. ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9ಗಂಟೆಯಿAದ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದೆ’ ಎಂದವರು ತಿಳಿಸಿದ್ದಾರೆ. `ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಪ್ರತಿನಿಧಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯ ವೈದ್ಯಕೀಯ ಮೂಲಸೌಕರ್ಯಗಳಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಮುಖ್ಯವಾಗಿ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು 142 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ 250 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಅನಂತಮೂರ್ತಿ ಹೆಗಡೆ ಅವರು ಬಣ್ಣಿಸಿದ್ದಾರೆ.
`ಹಾರ್ಸಿಕಟ್ಟಾ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ಕೊರತೆಯಿರುವುದನ್ನು ಮನಗಂಡು ಈ ಸಮಾಜಮುಖಿ ಶಿಬಿರವನ್ನು ಆಯೋಜಿಸಲಾಗಿದೆ. ಗಂಭೀರ ಕಾಯಿಲೆಗಳು ಬಂದ ಮೇಲೆ ಚಿಕಿತ್ಸೆಗಾಗಿ ಅಲೆಯುವುದಕ್ಕಿಂತ ಮುಂಜಾಗ್ರತೆಯಾಗಿ ಇಂತಹ ಶಿಬಿರಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಬದುಕಿನ ದೃಷ್ಟಿಯಿಂದ ಅತ್ಯಂತ ಉತ್ತಮ’ ಎಂದವರು ಹೇಳಿದ್ದಾರೆ. `ಈ ಉಚಿತ ಶಿಬಿರದಲ್ಲಿ ಶಿರಸಿಯ ಪ್ರಸಿದ್ಧ ಟಿ ಎಸ್ ಎಸ್ ಆಸ್ಪತ್ರೆ, ಮಾರಿಕಾಂಬಾ ಆಸ್ಪತ್ರೆ ಹಾಗೂ ಜೋಶಿ ಆಸ್ಪತ್ರೆಗಳ ನುರಿತ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಜನರಲ್ ಮೆಡಿಸಿನ್ ತಜ್ಞ ಜೆ ಬಿ ಕಾರಂತ, ಯೂರಾಲಜಿ ಸೂಪರ್ ಸ್ಪೆಷಲಿಸ್ಟ್ ಗಜಾನನ ಭಟ್ಟ, ಸ್ತ್ರೀರೋಗ ತಜ್ಞ ಶ್ರೀಧರ ವೈದ್ಯ, ಮಕ್ಕಳ ತಜ್ಞ ಆಶಿಶ್ ಜನ್ನು, ಚರ್ಮರೋಗ ತಜ್ಞೆ ಪ್ರಜ್ಞಾ ಜನ್ನು, ಕಣ್ಣಿನ ಸ್ಪೆಷಲಿಸ್ಟ್ ಹರ್ಷ ನಾಡಗೇರ್, ಕ್ಯಾನ್ಸರ್ ತಜ್ಞೆ ಮಮತಾ ಹೆಗಡೆ ಹಾಗೂ ಶಾರದಾ ಸತೀಶ್ ಸೇರಿದಂತೆ ವಿವಿಧ ವೈದ್ಯಕೀಯ ವಿಭಾಗಗಳ ನುರಿತ ತಜ್ಞರು ರೋಗಿಗಳಿಗೆ ನೇರ ಸಲಹೆ ನೀಡಲಿದ್ದಾರೆ’ ಎಂದವರು ಹೇಳಿದ್ದಾರೆ.
ಇದರೊಂದಿಗೆ `ಶಿರಸಿಯ ಎಂ ಎಂ ಜೋಶಿ ಗಣೇಶ ನೇತ್ರಾಲಯದ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಬೆಂಗಳೂರಿನ ಭಾರತೀಯ ಕ್ಯಾನ್ಸರ್ ಸೊಸೈಟಿ ಮತ್ತು ಅಸ್ಮಿತೆ ಫೌಂಡೇಶನ್ ವೈದ್ಯರ ತಂಡದಿAದ ಮಹಿಳೆಯರಿಗಾಗಿ ವಿಶೇಷವಾಗಿ ಸ್ತನ ಕ್ಯಾನ್ಸರ್ ಸೇರಿದಂತೆ ಉಚಿತ ಕ್ಯಾನ್ಸರ್ ಸ್ಕ್ರೀನಿಂಗ್ ನಡೆಯಲಿದೆ. ಶಿಬಿರದಲ್ಲಿ ಉಚಿತವಾಗಿ ಬಿಪಿ ಹಾಗೂ ಶುಗರ್ ಪರೀಕ್ಷೆ ನಡೆಸಿ ಅಗತ್ಯವಿರುವ ಕೆಲವು ಪ್ರಮುಖ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ’ ಎಂದವರು ತಿಳಿಸಿದ್ದಾರೆ. ಪ್ರದೀಪ್ ಹೆಗಡೆ, ಶಿವಕುಮಾರ ಕೊಂಡ್ಲಿ, ವಿನಾಯಕ ನಾಯ್ಕ ಉಪಸ್ಥಿತರಿದ್ದರು.