ಕುಮಟಾ ಊರಕೇರಿಯ ಪ್ರಸನ್ನ ಮುಕ್ರಿ ಅವರು ರಿಕ್ಷಾ ಓಡಿಸಿಕೊಂಡು ಬದುಕು ನಡೆಸುತ್ತಿದ್ದು, `ಮುಕ್ರಿ ಸಮುದಾಯದವರು ಇಲ್ಲಿ ರಿಕ್ಷಾ ನಿಲ್ಲಿಸುವ ಹಾಗಿಲ್ಲ’ ಎಂದು ಮೂವರು ತಾಕೀತು ಮಾಡಿದ್ದಾರೆ. ರಿಕ್ಷಾ ಸಂಘದವರ ಸಲಹೆಪಡೆದ ಪ್ರಸನ್ನ ಮುಕ್ರಿ ಅವರು ಸಿದ್ದನಬಾವಿಯ ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕುಮಟಾದ ಊರಕೇರಿಯಲ್ಲಿ ಪ್ರಸನ್ನ ಜಟ್ಟಿ ಮುಕ್ರಿ ಅವರು ವಾಸವಾಗಿದ್ದಾರೆ. 24 ವರ್ಷದ ಅವರು ರಿಕ್ಷಾ ಓಡಿಸಿಯೇ ಕುಟುಂಬ ಸಲಹುತ್ತಿದ್ದಾರೆ. ಕುಮಟಾ ಬಸ್ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣದಲ್ಲಿ ಅವರು ಪ್ರಯಾಣಿಕರಿಗಾಗಿ ಕಾದು, ಸೇವೆ ನೀಡುತ್ತಿದ್ದಾರೆ. ಆದರೆ, ಸಿದ್ಧನಬಾವಿಯ ಶಂಕರ್ ದಾಮು ಉಪ್ಪಾರ್, ಗಣಪತಿ ಮಾದೇವ್ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಸೇರಿ ಪ್ರಸನ್ನ ಮುಕ್ರಿ ಅವರಿಗೆ ಸಮಸ್ಯೆ ಮಾಡುತ್ತಿದ್ದಾರೆ.
ಜೂನ್ 19ರಂದು ಸಂಜೆ ಕುಮಟಾ ಹೊಸ ಬಸ್ ನಿಲ್ದಾಣ ಬಳಿಯ ರಿಕ್ಷಾ ನಿಲ್ದಾಣದಲ್ಲಿ ಪ್ರಸನ್ನ ಮುಕ್ರಿ ಹಾಗೂ ಆ ಮೂವರಿಗೆ ವಾಗ್ವಾದ ನಡೆದಿದೆ. `ಈ ರಿಕ್ಷಾ ನಿಲ್ದಾಣ ನಮ್ಮ ಜಾತಿಯವರಿಗೆ ಸೇರಿದ್ದು, ಇಲ್ಲಿ ಮುಕ್ರಿ ಜನ ರಿಕ್ಷಾ ನಿಲ್ಲಿಸುವ ಹಾಗಿಲ್ಲ’ ಎಂದು ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರು ಹೇಳಿದ್ದಾರೆ. `ಮುಕ್ರಿ ಜಾತಿಗೆ ಹೊಸ ರಿಕ್ಷಾ ನಿಲ್ದಾಣ ಮಾಡಿಕೊಂಡು ಅಲ್ಲಿಯೇ ರಿಕ್ಷಾ ನಿಲ್ಲಿಸಬೇಕು’ ಎಂದು ಪ್ರಸನ್ನ ಮುಕ್ರಿ ಅವರಿಗೆ ತಾಕೀತು ಮಾಡಿದ್ದಾರೆ. `ನಾನು ಇಲ್ಲೇ ರಿಕ್ಷಾ ಇಟ್ಟರೆ ಏನು ತೊಂದರೆ?’ ಎಂದು ಪ್ರಸನ್ನ ಮುಕ್ರಿ ಅವರು ಕೇಳಿದ್ದಾರೆ. ಆಗ ಆ ಎದುರುದಾರರು `ನಿನ್ನ ಮುಟ್ಟಿದರೆ ಸ್ನಾನ ಮಾಡಬೇಕು. ರಿಕ್ಷಾ ತೆಗೆಯದಿದ್ದರೆ ಬೆಂಕಿ ಹಚ್ಚುವೆ’ ಎಂದು ಬೆದರಿಸಿದ್ದಾರೆ. ಜೊತೆಗೆ ಪ್ರಸನ್ನ ಮುಕ್ರಿ ಅವರನ್ನು ದೂಡಿ, `ರಿಕ್ಷಾ ಇಲ್ಲಿಟ್ಟರೆ ತಲೆ ಒಡೆಯುವೆ’ ಎಂದು ಹೆದರಿಸಿದ್ದಾರೆ.
ತಾಲೂಕು ಹಾಗೂ ಜಿಲ್ಲಾ ರಿಕ್ಷಾ ಸಂಘದವರ ಬಳಿ ಈ ವಿಷಯದ ಬಗ್ಗೆ ಪ್ರಸನ್ನ ಮುಕ್ರಿ ಅವರು ಹೇಳಿದ್ದಾರೆ. ಅವರೆಲ್ಲರ ಸಲಹೆ ಮೇರೆಗೆ ಆ ಮೂವರ ವಿರುದ್ಧವೂ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.