ಸಿಬ್ಬಂದಿ ನೇಮಕಾತಿ, ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸುವಿಕೆ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸುಧಾರಣೆ ವಿಷಯವಾಗಿ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳ ನಡುವೆ ಸರ್ಕಾರ ಅನೇಕ ಬಗೆಯ ತಾರತಮ್ಯ ಮಾಡುತ್ತಿದೆ. ಈ ತಾರತಮ್ಯ ನೀತಿ ಶೈಕ್ಷಣಿಕ ವಲಯದಲ್ಲಿನ ಅಸಮಧಾನಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿವೆ. ಆ ಸಂಸ್ಥೆಯವರು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅನೇಕ ಹಂತಗಳ ಹೋರಾಟವನ್ನು ಮಾಡಿದ್ದಾರೆ. ಆದರೆ, ಪ್ರತಿ ಬಾರಿ ಭರವಸೆ ಮಾತ್ರ ಸಿಗುತ್ತಿದೆಯೇ ವಿನ: ಸಮಸ್ಯೆ ಪರಿಹಾರ ಆಗುತ್ತಿಲ್ಲ. ಪರಿಣಾಮ ಅನೇಕರ ಬದುಕಿಗೆ ಬೆಳಕು ತೋರಿದ ಶೈಕ್ಷಣಿಕ ಸಂಸ್ಥೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆ ಅನುದಾನಿತ ಶಾಲೆಗಳ ಉಳಿವಿಗಾಗಿ ಅನೇಕ ವರ್ಷಗಳಿಂದ ಶಾಲೆಯವರು ಹೋರಾಟ ನಡೆಸುತ್ತಿದ್ದು, ಸದ್ಯ ಇನ್ನೊಂದು ಹಂತದ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಶಿಕ್ಷಕರ ಹಕ್ಕುಗಳ ರಕ್ಷಣೆ ವಿಷಯವಾಗಿಯೂ ಈ ಬಾರಿ ಹೋರಾಟ ನಡೆಯಲಿದೆ. ಜುಲೈ 18ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದವರು ಪ್ರತಿಭಟನೆಗೆ ಕರೆ ನೀಡಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾದ ಶಿಕ್ಷಕರ ಈ ಹೋರಾಟಕ್ಕೆ ಎಲ್ಲಡೆ ಬೆಂಬಲವ್ಯಕ್ತವಾಗುತ್ತಿದೆ.
ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಲ್ ಎಮ್ ಹೆಗಡೆ ಅವರು ಹೋರಾಟದ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. `ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರವಾದ ಸೇವೆ ಸಲ್ಲಿಸಿದ ಅನುದಾನಿತ ಶಿಕ್ಷಣ ಸಂಸ್ಥೆಗಳು ಇಂದು ವಿವಿಧ ಕಾರಣಗಳಿಂದ ಮತ್ತು ಸರ್ಕಾರದ ಮಲತಾಯಿ ಧೋರಣೆಯಿಂದ ಮುಚ್ಚುತ್ತಿರುವದು ಖಂಡನೀಯ’ ಎಂದವರು ಹೇಳಿದ್ದಾರೆ. `ಇಂಥ ಶಾಲೆಗಳಲ್ಲಿ 2015ರ ನಂತರ ಖಾಲಿಯಾದ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಹುದ್ದೆ ಖಾಲಿಯಾದ ದಿನದಿಂದಲೇ ಭರ್ತಿ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು. ಆ ಹುದ್ದೆ ಭರ್ತಿಯಾಗುವವರೆಗೆ ಸರ್ಕಾರವೇ ಅತಿಥಿ ಶಿಕ್ಷಕರನ್ನು ನೇಮಿಸಬೇಕು. ಅನುದಾನಿತ ಪ್ರೌಢಶಾಲೆಗಳಲ್ಲಿ ಬೋಧಕೇತರ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಬೇಕು. ಗುಡ್ಡಗಾಡು, ಕರಾವಳಿ, ಗಡಿನಾಡು, ಮಲೆನಾಡು ಪ್ರದೇಶಗಳಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು 1:15ಕ್ಕೆ ಇಳಿಸಬೇಕು’ ಎಂದವರು ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ.
ಅದರೊಂದಿಗೆ `2006ರ ನಂತರ ನೇಮಕಗೊಂಡು ನಿವೃತ್ತರಾದ ಅನುದಾನಿತ ಶಾಲಾ ಶಿಕ್ಷಕರಿಗೆ ಪಿಂಚಣಿ ಕೊಡಬೇಕು. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಿಕ್ಷಕರಿಗೂ ಒಂದೇ ಆದೇಶದಲ್ಲಿ ನೀಡಬೇಕು. ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. 1995ರ ನಂತರ ಆರಂಭವಾದ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆಗಳಿಗೆ ವೇತನಾನುದಾನ ಮಂಜೂರು ಮಾಡಬೇಕು. ಶೇ 100ರ ಫಲಿತಾಂಶಪಡೆದ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೂ ಸರ್ಕಾರಿ ಶಾಲೆಗಳಂತೆ ಗೌರವ ಸಂಭಾವನೆ ನೀಡಬೇಕು’ ಎಂದು ಎಂದವರು ಆಗ್ರಹಿಸಿದ್ದಾರೆ. ಜೊತೆಗೆ `ಅನುದಾನಿತ ಮತ್ತು ಅನುದಾನರಹಿತ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯ ಎಲ್ಲ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಸ್ಯಾಟ್ಸ್, ಯೂಡೈಸ್ ಅಪ್ಡೇಟ್ ಶುಲ್ಕವನ್ನು ಅನುದಾನಿತ/ಅನುದಾನ ರಹಿತ ಶಾಲೆ ವಿದ್ಯಾರ್ಥಿಗಳಿಗೂ ನೀಡಬೇಕು. ಎಸ್ಎಸ್ಎಲ್ಸಿ ಪೂರ್ವ ಪರೀಕ್ಷೆ ಪ್ರಶ್ನೆಪತ್ರಿಕೆ ಮುದ್ರಣ ಶುಲ್ಕವನ್ನು ಎಲ್ಲಾ ಶಾಲೆಗಳಿಗೂ ನೀಡಬೇಕು. ಶಾಲಾ ನಿರ್ವಹಣಾ ಶುಲ್ಕವನ್ನು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸುಧಾರಣೆಗಾಗಿ ಹೊಸ ಕೆಪಿಎಸ್ ಮತ್ತು ಪಿಎಂಶ್ರೀ ಶಾಲೆ ತೆರೆಯುವಾಗ 3ಕಿಮೀ ವ್ಯಾಪ್ತಿಯಲ್ಲಿ ಅನುದಾನಿತ ಶಾಲೆ ಇಲ್ಲವೆಂದು ಖಾತರಿಪಡಿಸಿಕೊಳ್ಳಬೇಕು. ದ್ವಿಭಾಷಾ ನೀತಿಯನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು. ಅಕ್ಷರ ದಾಸೋಹ, ಕ್ಷೀರ ಭಾಗ್ಯ, ಮೊಟ್ಟೆ-ಬಾಳೆಹಣ್ಣು ಯೋಜನೆಗಳನ್ನು ಶಿಕ್ಷಕರ ಹೊರತು ಪ್ರತ್ಯೇಕವಾಗಿ ನಿರ್ವಹಿಸಬೇಕು. ಸರ್ವರ್ ಸಮಸ್ಯೆ ಸೇರಿ ಇನ್ನಿತರ ತಾಂತ್ರಿಕ ವಿಧಾನಗಳನ್ನು ಸರಳೀಕರಣಮಾಡಬೇಕು. ಪರೀಕ್ಷಾ ಪದ್ಧತಿಯನ್ನು ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಏಕರೂಪ ಪದ್ದತಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ. `ಮಳೆಗಾಲದ ತೊಂದರೆ ಹಿನ್ನೆಲೆಯಲ್ಲಿ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿಯನ್ನು ಪ್ರತಿ 2 ವರ್ಷಕ್ಕೊಮ್ಮೆ ನಡೆಸಬೇಕು’ ಎಂದು ಸಹ ಹೇಳಿದ್ದಾರೆ. ಸಂಘಟನೆಯ ಜಿಲ್ಲಾ ಅಧ್ಯಕ್ಷ ಪ್ರಭಾಕರ ಬಂಟ, ಕಾರವಾರ ತಾಲೂಕು ಅಧ್ಯಕ್ಷ ಜೈ ರಂಗನಾಥ, ಅಂಕೋಲಾ ಘಟಕದ ಗಣಪತಿ ನಾಯಕ, ಎಂಡಿ ಕುಂಶಿ, ಸಂದೀಪ್ ರಾಣೆ, ಹಿಂದೂ ಹೈಸ್ಕೂಲ್ ಮುಖ್ಯಾಧ್ಯಾಪಕ ಆರ್ ವಿ ದೇಶಬಂಡಾರಿ, ಶಮಿಂದ್ರ ನಾಯಕ, ಗಣೇಶ ಬಿಷ್ಟಣ್ಣನವರ, ಸಂಜಯ ನಾಯ್ಕ, ಮಹದೇವ ರಾಣೆ ಇತರರು ಇದ್ದರು.