ಬನವಾಸಿಯ ಮದನ್ ಆರರ್ ಕುಟುಂಬದವರು ಪ್ರೀತಿಯಿಂದ ಸಾಕಿದ್ದ ಹಸುವೊಂದು ಕಟುಕರ ಪಾಲಾಗಿದೆ. ಶಿವಮೊಗ್ಗದಿಂದ ಅಡಿಕೆ ವ್ಯಾಪಾರಕ್ಕೆ ಬಂದಿದ್ದ ಮಹಮದ್ ವಾಸೀನ್ ಅವರೇ ದಾವಣಗೆರೆಯ ಚಾಲಕ ಮಹಮದ್ ಇಸ್ಮಾಯಲ್ ಅವರ ಜೊತೆ ಸೇರಿ ಆಕಳು ಕದ್ದಿರುವುದು ಗೊತ್ತಾಗಿದೆ.
ಶಿರಸಿ ತಾಲೂಕಿನ ಬನವಾಸಿಯ ಸೊರಬಾ ರಸ್ತೆಯಲ್ಲಿ ಮದನ್ ಮಂಜುನಾಥ ಆರರ್ ಅವರು ವಾಸವಾಗಿದ್ದಾರೆ. 29 ವರ್ಷದ ಅವರು ಕೃಷಿ ಜೊತೆ ಹೈನುಗಾರಿಕೆಯನ್ನು ಸಹ ಅತ್ಯಂತ ನಿಷ್ಠೆಯಿಂದ ಮಾಡಿಕೊಂಡಿದ್ದಾರೆ. ಮದನ್ ಆರರ್ ಅವರ ಮನೆಯಲ್ಲಿ 5 ಹಸು ಹಾಗೂ ಮೂರು ಕರುಗಳಿವೆ. ಮದನ್ ಅವರ ತಂದೆ ಮಂಜುನಾಥ್ ಆರರ್ ಅವರು ನಿತ್ಯವೂ ಅವುಗಳನ್ನು ಮೇವಿಗೆ ಬಿಟ್ಟು, ಸಂಜೆ ಕೊಟ್ಟಿಗೆಗೆ ತಂದು ಕಟ್ಟುತ್ತಾರೆ.
ಹೀಗಿರುವಾಗ, ಮೇ 20ರಂದು ಮದನ್ ಆರರ್ ಅವರು ತಾವು ಸಾಕಿದ ಎಲ್ಲಾ ಹಸುಗಳನ್ನು ಹಿತ್ತಿಲಲ್ಲಿ ಮೇವಿಗೆ ಬಿಟ್ಟಿದ್ದರು. ಸಂಜೆ ಆಕಳು ಹಾಗೂ ಕರು ಮನೆಗೆ ಬಂದಿದ್ದು, ಒಂದು ಹಸು ಮಾತ್ರ ಮನೆ ಮುಂದಿನ ರಸ್ತೆಯಲ್ಲಿ ಮಲಗಿತ್ತು. ಆ ಹಸುವನ್ನು ಮನೆಗೆ ಹೊಡೆದುಕೊಂಡು ಬಂದರೂ ಅದು ತಪ್ಪಿಸಿಕೊಂಡು ಮತ್ತೆ ರಸ್ತೆ ಕಡೆ ಹೊರಟಿತ್ತು. ಆ ರಾತ್ರಿ ಸಾಕಷ್ಟು ಪ್ರಯತ್ನಿಸಿದರೂ ಹಸು ಬರಲಿಲ್ಲ. ಹೀಗಾಗಿ ಆ ದಿನ ಮದನ್ ಆರರ್ ಅವರು ರಸ್ತೆ ಅಂಚಿನಲ್ಲಿಯೇ ಹಸು ಮಲಗಲು ಬಿಟ್ಟಿದ್ದರು.
ಮರುದಿನ ಬೆಳಗ್ಗೆ 6.30ಕ್ಕೆ ಹೋಗಿ ನೋಡಿದಾಗ ಅಲ್ಲಿ ಹಸು ಕಾಣಲಿಲ್ಲ. ಕೊಟ್ಟಿಗೆಗೆ ಸಹ ಹಸು ಬಂದಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. 50 ಸಾವಿರ ರೂ ಬೆಲೆಯ 8 ವರ್ಷ ಪ್ರಾಯದ ಹಸು ಕಾಣದ ಕಾರಣ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದು, ಕೊರಳಿನಲ್ಲಿ ಗಂಟೆಯಿದ್ದ ಹಸುವನ್ನು ಸಹ ಕಳ್ಳರು ಶಬ್ದ ಬಾರದ ರೀತಿ ಅಪಹರಿಸಿದ್ದರು. ಆ ಹಸುವನ್ನು ಹುಡುಕಿಕೊಡುವಂತೆ ಮದನ್ ಆರರ್ ಅವರು ಬನವಾಸಿ ಪೊಲೀಸರ ಮೊರೆ ಹೋಗಿದ್ದರು.
ಹಸು ಕಾಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಅದರ ತನಿಖೆಗೆ ಒಂದು ವಿಶೇಷ ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಶಿರಸಿ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರನ್ನು ವಿಶ್ವಾಸಕ್ಕೆಪಡೆದು ವೃತ್ತ ನಿರೀಕ್ಷಕ ಸಂಪತ್ ಈ ಸಿ ಅವರಿಗೆ ಈ ಪ್ರಕರಣದ ಜವಾಬ್ದಾರಿವಹಿಸಿದರು. ಪಿಸೈ ಮಹಂತೇಶ ಕುಂಬಾರ್, ರವೀಂದ್ರ ಬೀರಾದರ್ ಅವರ ಜೊತೆ ಪೊಲೀಸ್ ಸಿಬ್ಬಂದಿ ಮಣಿಮಲ್ಲನ್ ಮೇಸ್ತಿ, ಅಬ್ದುಲ್ ಸಮನ್ ಅನ್ಸಾರಿ, ಬಸವರಾಜ ಜಾಡರ್, ಮಂಜಪ್ಪ ಪಿ, ರಾಜೇಶ ಪಿ ಎಂ, ಜಗದೀಶ ಕೆ ಒಟ್ಟಾಗಿ ಕಾರ್ಯಾಚರಣೆಗಿಳಿದರು.
ಇದನ್ನೂ ಓದಿ: ಆ ದಿನದ ಹಸು ಕಳ್ಳತನ ಗೊತ್ತಾಗಿದ್ದು ಹೇಗೆ? ಗಂಟೆ ಕಟ್ಟಿದ ಆಕಳು ಕಳ್ಳರ ಪಾಲು!
ಕಪ್ಪು ಮುಖದ ಮೇಲೆ ಬಿಳಿ ಮಚ್ಚೆಯಿರುವ ಆಕಳು ಹುಡುಕಿ ಹೊರಟ ಪೊಲೀಸರಿಗೆ ಮೊದಲು ದಾವಣಗೆರೆ ಚೆನ್ನಗೇರಿಯ ಚಾಲಕ ಮಹಮದ್ ಇಸ್ಮಾಯಲ್ ಮಹಮದ್ ಅನ್ಸಾರ್ (20) ಅವರು ಸಿಕ್ಕಿ ಬಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶಿವಮೊಗ್ಗ ಭದ್ರಾವತಿಯ ಅಡಿಕೆ ವ್ಯಾಪಾರಿ ಮಹಮದ್ ವಾಸೀನ್ ಮಹಮದ್ ಯಾಸಿನ್ (26) ಅವರ ಜೊತೆ ಸೇರಿ ಆಕಳು ಕದ್ದಿರುವುದನ್ನು ಒಪ್ಪಿಕೊಂಡರು. ಅವರಿಬ್ಬರನ್ನು ಬಂಧಿಸಿದ ಪೊಲೀಸರು ಆಕಳ ಸಾಗಾಣಿಕೆಗೆ ಬಳಸಿದ ಟಾಟಾ ಇಂಟ್ರಾ ಗಾಡಿಯನ್ನು ಜಪ್ತು ಮಾಡಿದರು.