ಪರಿಸರ ಅಸಮತೋಲನಕ್ಕೆ ಕಾರಣವಾಗುವ ಅಕೇಶಿಯಾ ಗಿಡ ನಾಟಿ ನಿಷೇಧಿಸಿ 10 ವರ್ಷ ಕಳೆದಿದ್ದು, ಅದಾಗಿಯೂ ಅರಣ್ಯ ನಡುತೋಪುಗಳಲ್ಲಿ ಹೊಸದಾಗಿ ನೆಟ್ಟ ಅಕೆಶಿಯಾ ಗಿಡಗಳು ಕಾಣಿಸುತ್ತಿವೆ. ಸರ್ಕಾರಿ ಆದೇಶ ಹಾಗೂ ಕಾನೂನು ಮೀರಿ ಅಕೇಶಿಯಾ ಬಗ್ಗೆ ಅಧಿಕಾರಿಗಳು ಆಸಕ್ತಿವಹಿಸಿದ್ದಾರೆ.
ಅಕೇಶಿಯಾ ಮತ್ತು ನೀಲಗಿರಿ ಸಸ್ಯ ಪ್ರಭೇಧಗಳಿಂದ ಆಗುವ ಹಾನಿಯ ಬಗ್ಗೆ ಅಂದಾಜಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಿನ ಅರಣ್ಯ ಸಚಿವ ರಮಾನಾಥ ರೈ ಅವರ ಜೊತೆ ಚರ್ಚಿಸಿ, ಈ ಬಗೆಯ ಗಿಡ ನಾಟಿ ನಿಷೇಧಿಸಿದ್ದರು. ಆ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದಕ್ಕಾಗಿ ಶಾಸಕಾಂಗ ಸಭೆ ನಡೆಸಿ ಮಸೂಧೆ ಮಂಡಿಸಿದ್ದರು. ಅದಾಗಿಯೂ, ಅರಣ್ಯಾಧಿಕಾರಿಗಳಿಗೆ ಅಕೇಶಿಯಾ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ನಿಷೇಧ ಜಾರಿಯಾಗಿ 10 ವರ್ಷ ಕಳೆದರೂ ಅಕೇಶಿಯಾ ಗಿಡ ನಾಟಿ ಮುಂದುವರೆದಿದ್ದು, ಈಗಲೂ ನಿಷೇಧಿತ ಗಿಡ ನಾಟಿಗೆ ಅಧಿಕಾರಿಗಳು ಆಸಕ್ತಿವಹಿಸಿರುವ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಗಮನಸೆಳೆದಿದ್ದಾರೆ.
`ಅವೈಜ್ಞಾನಿಕ ನಡುತೋಪುಗಳ ನಿರ್ಮಾಣದಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತಿದೆ. ಮಲೆನಾಡಿನಲ್ಲಿ ಕಾಡು ಜಾತಿಯ ಮರಗಳ ಬದಲಿಗೆ ಅಕೇಶಿಯಾ, ನೀಲಗಿರಿ ನೆಡುತೋಪು ಮಾಡುವುದರಿಂದ ಸದಾ ಹಸಿರು ಬಣ್ಣದ ಕಾಡಿನ ಪ್ರಮಾಣ ಕಡಿಮೆಯಾಗಲಿದ್ದು, ಪಶ್ಚಿಮ ಘಟ್ಟದ ಪರಿಸರಕ್ಕೆ ಅವು ಮಾರಕವಾಗಲಿದೆ. ಅಕೇಶಿಯಾ ಕಾಡು ನಾಶ ಮಾಡುತ್ತದೆ. ಜೊತೆಗೆ ಉದುರಿದ ಎಲೆಗಳು ಜಮೀನಿನ ಫಲವತ್ತತೆ ಕುಂಟಿತಗೊಳಿಸುತ್ತಿದೆ. ತೆರದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅತಂರ್ಜಲ ಮಟ್ಟ ಕುಸಿತಕ್ಕೆ ಆ ಗಿಡ ಕಾರಣವಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.