ದೊಡ್ಡ ಕಂಪನಿಯಲ್ಲಿ ಉತ್ತಮ ಹುದ್ದೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಬೊಪ್ಪನಳ್ಳಿಯ ಗೌರೀಶ ನಾಯ್ಕ ಅವರು ಹುಸರಿ ಕಾನಕೊಪ್ಪದ ವಿವೇಕ ದೇವಾಡಿಗ ಹಾಗೂ ಕೃಷ್ಣ ದೇವಾಡಿಗ ಅವರಿಗೆ 3 ಲಕ್ಷ ರೂ ಕೊಟ್ಟಿದ್ದಾರೆ. ಮೂರು ತಿಂಗಳಿನಲ್ಲಿ ಮರಳಿ ಕೊಡುವುದಾಗಿ ಹೇಳಿದ್ದ ಆ ಅಪ್ಪ-ಮಗ ಹಣ ಮರಳಿಸದೇ ಮೋಸ ಮಾಡಿದ್ದಾರೆ.
ಶಿರಸಿಯ ಬೊಪ್ಪನಳ್ಳಿಯ ಗೌರೀಶ ಪ್ರಭಾಕರ ನಾಯ್ಕ ಅವರು ವಾಸವಾಗಿದ್ದಾರೆ. 26 ವರ್ಷದ ಅವರು ವ್ಯಾಪಾರಿಯಾಗಿದ್ದು, ಟ್ರೇಡಿಂಗ್ ಕುರಿತು ಅಪಾರ ಆಸಕ್ತರಾಗಿದ್ದಾರೆ. ಹೀಗಾಗಿ ಟ್ರೇಡಿಂಗ್ ಕಂಪನಿಯಲ್ಲಿ ಉದ್ಯೋಗ ಮಾಡಲು ಅವರು ಸಾಕಷ್ಟು ಕಂಪನಿಗಳ ಬಾಗಿಲು ಬಡಿದಿದ್ದಾರೆ. ಇದಕ್ಕಾಗಿ ಅನೇಕ ಬಾರಿ ಗೌರೀಶ ನಾಯ್ಕ ಅವರು ಬೆಂಗಳೂರಿಗೂ ಹೋಗಿ ಬಂದಿದ್ದಾರೆ. ಹೀಗೆ ಬೆಂಗಳೂರಿಗೆ ಹೋಗಿ ಬರುವಾಗ ಅವರಿಗೆ ಹುಸರಿ ಕಾನಕೊಪ್ಪದ ವಿವೇಕ ದೇವಾಡಿಗ ಹಾಗೂ ಅವರ ತಂದೆ ಕೃಷ್ಣ ದೇವಾಡಿಗ ಅವರು ಪರಿಚಯವಾಗಿದ್ದಾರೆ.
ಅವರೆಲ್ಲರೂ ಸೇರಿ ಮಾತನಾಡುವಾಗ ಗೌರೀಶ ನಾಯ್ಕ ಅವರು ಟ್ರೇಡಿಂಗ್ ಕಂಪನಿಯ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುವ ಆಸೆ ಬಿಚ್ಚಿಟ್ಟಿದ್ದಾರೆ. ಆಗ, ವಿವೇಕ ದೇವಾಡಿಗ ಅವರು `ತಮ್ಮ ತಂದೆಗೆ ದೊಡ್ಡ ಕಂಪನಿ ಗೊತ್ತಿದೆ’ ಎಂದು ಹೇಳಿದ್ದಾರೆ. ಕೃಷ್ಣ ದೇವಾಡಿಗ ಅವರು ಅದಕ್ಕೆ ತಲೆಯಾಡಿಸಿ, `ಹಣ ಕೊಟ್ಟರೆ ಕೆಲಸ ಆಗುತ್ತದೆ’ ಎಂದಿದ್ದಾರೆ. ಇದಕ್ಕೆ ಒಪ್ಪಿದ ಗೌರೀಶ ನಾಯ್ಕ ಅವರು ಮೊದಲು 50 ಸಾವಿರ ರೂಪಾಯಿಯಂತೆ ಎರಡು ಸಲ ಹಾಗೂ ನಂತರ 1 ಲಕ್ಷ ರೂಪಾಯಿಯಂತೆ ಎರಡು ಸಲ ಫೋನ್ ಪೇ ಮಾಡಿದ್ದಾರೆ. `ಈ ಹಣವನ್ನು ಮರಳಿ ಕೊಡಬೇಕು’ ಎಂಬ ಕಂಡಿಶನ್ ಹಾಕಿ ಕೊಟ್ಟಿದ್ದಾರೆ.
ಆದರೆ, ವಿವೇಕ ದೇವಾಡಿಗ ಹಾಗೂ ಕೃಷ್ಣ ದೇವಾಡಿಗ ಅವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಮೂರು ತಿಂಗಳ ಒಳಗೆ ಹಣ ಮರಳಿಸುವುದಾಗಿ ಹೇಳಿದ ಅವರು ಹಾಗೇ ನಡೆದುಕೊಂಡಿಲ್ಲ. ತಮಗಾದ ಮೋಸದ ಬಗ್ಗೆ ಗೌರೀಶ ನಾಯ್ಕ ಅವರು ಕೋರ್ಟಿನ ಮೊರೆ ಹೋಗಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.