ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ. ಈ ಅಧ್ಯಕ್ಷ ಸ್ಥಾನ ಆಯ್ಕೆಗಾಗಿ ಎಐಸಿಸಿ ಹಾಗೂ ಕೆಪಿಸಿಸಿ ಸಮೀಕ್ಷಾ ತಂಡಗಳು ಜಿಲ್ಲೆಗೆ ಆಗಮಿಸಿ ಸಮೀಕ್ಷೆ ಶುರು ಮಾಡಿವೆ. ರಾಷ್ಟಿಯ ಕಾಂಗ್ರೆಸ್ ಪಕ್ಷದ ವೀಕ್ಷಕಿ ರೋಸಲಿನ್ ಟರ್ಕೆ ಅವರು ಜಿಲ್ಲೆಗೆ ಆಗಮಿಸಿ, ಅನೇಕರ ಅರ್ಜಿ ಸ್ವೀಕರಿಸುತ್ತಿದ್ದಾರೆ. ಈ ಎಲ್ಲದರ ನಡುವೆ `ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಶಾಸಕರಾಗುವ ಅವಕಾಶವಿಲ್ಲ’ ಎಂಬ ಹಳೆಯ ನಿಯಮವನ್ನೇ ಈ ಬಾರಿಯೂ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅನೇಕ ನಿಬಂಧನೆಗಳಿವೆ. ಅದೇ ನಿಬಂಧನೆಗಳು ಉತ್ತರ ಕನ್ನಡ ಜಿಲ್ಲೆಗೂ ಅನ್ವಯವಾಗಲಿದೆ. ಅದರಲ್ಲಿ ಮುಖ್ಯವಾಗಿ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸುವವರು ಶಾಸಕ ಸ್ಥಾನಕ್ಕೆ ಟಿಕೆಟ್ ಕೇಳುವ ಹಾಗಿಲ್ಲ. ಅದರೊಂದಿಗೆ ಜಿಲ್ಲಾಧ್ಯಕ್ಷರಾಗುವವರ ವಿರುದ್ಧ ಯಾವುದೇ ಕ್ರಿಮಿನಕ್ ಕೇಸ್ ಇರುವಂತಿಲ್ಲ. ಜಿಲ್ಲಾಧ್ಯಕ್ಷರಾಗಬಯಸುವವರು ವಿದ್ಯಾವಂತರಾಗಬೇಕಿದ್ದು, ರಾಜಕೀಯಹೊರತುಪಡಿಸಿಯೂ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಂಪರ್ಕವನ್ನು ಹೊಂದಿರಬೇಕು. ಜೊತೆಗೆ ಪೂರ್ಣಾವಧಿಗಳ ಕಾಲ ಪಕ್ಷದ ಚಟುವಟಿಕೆ ನಡೆಸಲು ಬದ್ಧರಾಗಿರಬೇಕು. ಈ ಎಲ್ಲಾ ಹಿನ್ನಲೆ ಪರಿಶೀಲಿಸಿ ಮೊದಲ ಹಂತದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಟ್ಟು ಆರು ಜನರ ಹೆಸರನ್ನು ರಾಷ್ಟಿಯ ಕಾಂಗ್ರೆಸ್ ಪಕ್ಷದ ವೀಕ್ಷಕರು ಶಿಫಾರಸ್ಸು ಮಾಡಲಿದ್ದಾರೆ.
ಆ ಆರು ಜನರಲ್ಲಿ ಸಹ ಅನೇಕ ಮೀಸಲಾತಿ ವರ್ಗಗಳಿವೆ. ಎರಡು ಹೆಸರುಗಳು ಸಾಮಾನ್ಯ, ಒಂದು ಹೆಸರು ಒಬಿಸಿ, ಒಬ್ಬ ಮಹಿಳೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಸಮುದಾಯಕ್ಕೆ ಸೇರಿದ ಒಬ್ಬರ ಹೆಸರು ಶಿಫಾರಸ್ಸು ಪಟ್ಟಿ ಸೇರಲಿದೆ. ಇದರೊಂದಿಗೆ ಪಕ್ಷದ ವೀಕ್ಷಕರು ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಪ್ರತಿ ಆಕಾಂಕ್ಷಿಯೂ ಕಾರ್ಯಕರ್ತರ ಜೊತೆಗೆಹೊಂದಿರುವ ಸಂಬoಧದ ಬಗ್ಗೆಯೂ ಅವರು ಚರ್ಚೆ ನಡೆಸಲಿದ್ದಾರೆ. ಅದೆಲ್ಲದರ ಆಧಾರದಲ್ಲಿ ಆರು ಜನರ ಹೆಸರನ್ನು ಅವರು ಹೈಕಮಾಂಡ್’ಗೆ ಕಳುಹಿಸಲಿದ್ದಾರೆ. ಆಕಾಂಕ್ಷಿಗಳ ಅರ್ಹತೆ, ಹಿನ್ನಲೆ ಹಾಗೂ ಅವರಿಂದ ಪಕ್ಷಕ್ಕೆ ಆಗಬಹುದಾದ ಲಾಭ-ನಷ್ಟ ನೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕಾತಿ ಮಾಡಲಿದೆ.