`ತನ್ನ ಹೋರಾಟ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಅಲ್ಲ. ಆಡಳಿತ ವ್ಯವಸ್ಥೆಯ ವಿರುದ್ಧ’ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. ಆ ಮೂಲಕ ತಮ್ಮ ವಿರುದ್ಧ ಸಿಡಿದೆದ್ದ ಭೀಮಣ್ಣ ನಾಯ್ಕ ಅವರ ಅಭಿಮಾನಿ ಬಳಗದವರನ್ನು ಸಮಾಧಾನ ಮಾಡುವ ಮಾತನಾಡಿದ್ದಾರೆ.
`ತಾನೂ ಎಂದಿಗೂ ಶಾಸಕ ಭೀಮಣ್ಣ ನಾಯ್ಕ ಅವರ ಕುರಿತು ಅಸಂವಿಧಾನಿಕ ಪದ ಬಳಕೆ ಮಾಡಿಲ್ಲ. ಭೀಮಣ್ಣ ನಾಯ್ಕ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಶಾಸಕರಾದ ಕಾರಣ ಜನರ ಸಮಸ್ಯೆಗಳ ಬಗ್ಗೆ ಮಾತ್ರ ಪ್ರಶ್ನೆ ಮಾಡಿದ್ದು, ಅವರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿಲ್ಲ’ ಎಂದು ಸಹ ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ನನ್ನ ಹೋರಾಟ ಎಂದಿಗೂ ವ್ಯಕ್ತಿಯ ವಿರುದ್ಧವಲ್ಲ. ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ವಿರುದ್ಧ ಮಾತ್ರ’ ಎಂದವರು ಪುನರುಚ್ಚರಿಸಿದ್ದಾರೆ.
`ಭೀಮಣ್ಣ ನಾಯ್ಕ ಅಭಿಮಾನಿ ಬಳಗದವರ ಆರೋಪದಲ್ಲಿ ಸತ್ಯವಿಲ್ಲ. ನಾನು ವೈದ್ಯರನ್ನು ಅವಮಾನಿಸಿಲ್ಲ. ಅದಾಗಿಯೂ, ತನ್ನ ಮಾತು ತಿರುಚುವ ಪ್ರಯತ್ನ ನಡೆದಿದೆ’ ಎಂದು ಅನಂತಮೂರ್ತಿ ಹೆಗಡೆ ಅವರು ಸ್ಪಷ್ಟನೆ ನೀಡಿದ್ದಾರೆ. `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಮಾಡುವ ಹಕ್ಕು ಹೊಂದಿದ್ದಾರೆ. ಆಸ್ಪತ್ರೆಯ ಅವ್ಯವಸ್ಥೆಗಳ ಕುರಿತು ಧ್ವನಿ ಎತ್ತಿರುವುದು ಜನರ ಹಿತದೃಷ್ಟಿಯಿಂದ ಮಾತ್ರ’ ಎಂದವರು ಹೇಳಿದ್ದಾರೆ.