ಸದಾಶಿವಗಡದ ನಾಗಾರಾಜ ಹಡಪದ ಅವರು ಬೆಂಗಳೂರಿನ ವಿನೋದ ಕುಮಾರ ಅವರ ಜೊತೆ ಸೇರಿ ಗಾಂಜಾ ವ್ಯಾಪಾರ ಶುರು ಮಾಡಿದ್ದಾರೆ. ದಿನವಿಡೀ ದುಡಿದು ಅವರು 250ರೂ ಸಂಪಾದಿಸಿದ್ದಾರೆ!
ಕಾರವಾರದ ಸದಾಶಿವಗಡದ ತಾರಿವಾಡದಲ್ಲಿ ನಾಗರಾಜ ಮಲ್ಲಿಕಾರ್ಜುನ ಹಡಪದ ಅವರು ವಾಸವಾಗಿದ್ದಾರೆ. 26 ವರ್ಷದ ಅವರಿಗೆ ಅದೇ ವಯಸ್ಸಿನ ವಿನೋದಕುಮಾರ ಅವರು ಪರಿಚಯವಾಗಿದ್ದಾರೆ. ಬೆಂಗಳೂರಿನ ವಿನೋದಕುಮಾರ ಅವರು ಸದಾಶಿವಗಡದ ತಾರಿವಾಡದಲ್ಲಿಯೇ ವಾಸವಾಗಿದ್ದು, ಸಮಾನ ಮನಸ್ಕ ಹಾಗೂ ಸಮಾನ ವಯಸ್ಕರಾದ ಅವರಿಬ್ಬರು ಸೇರಿ ಮಾದಕ ವ್ಯಸನ ಮಾರಾಟಕ್ಕೆ ಮುಂದಾಗಿದ್ದಾರೆ.
ಜುಲೈ 27ರಂದು 25 ಸಾವಿರ ರೂಪಾಯಿ ಮೌಲ್ಯದ 450 ಗ್ರಾಂ ಗಾಂಜಾಹಿಡಿದ ಅವರಿಬ್ಬರು ಕಾರವಾರದ ಬಿಣಗಾಗೆ ಹೋಗಿದ್ದಾರೆ. ಬಜಾಜ್ ಪಲ್ಸರ್ ಬೈಕಿನಲ್ಲಿ ಸುತ್ತಾಡಿದ ಅವರು ಅಲ್ಲಿನ ರಾಮನಗರ ರಸ್ತೆಯ ಬಳಿ ನಿಂತು ಕೆಲ ಪ್ರಮಾಣದ ಗಾಂಜಾವನ್ನು ಮಾರಾಟ ಮಾಡಿದ್ದಾರೆ. ಇದರಿಂದ 250ರೂ ಸಂಪಾದಿಸಿದ್ದು, ಉಳಿದ ಗಾಂಜಾವನ್ನು ಮಾರಾಟ ಮಾಡಿ ಶ್ರೀಮಂತರಾಗುವ ಕನಸು ಕಂಡಿದ್ದಾರೆ. ಆದರೆ, ಅಷ್ಟರಲ್ಲಿಯೇ ಅಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಸೈ ನಿಹಾಲ್ ಖಾನ್ ಅವರು ಬಂದಿದ್ದಾರೆ.
ಅನುಮಾನಾಸ್ಪದ ರೀತಿ ವರ್ತಿಸುತ್ತಿದ್ದ ನಾಗಾರಾಜ ಹಡಪದ ಹಾಗೂ ವಿನೋದ ಕುಮಾರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ಬಳಿಯಿರುವ ಗಾಂಜಾ, 250ರೂ ಹಣ ಹಾಗೂ ಮೊಬೈಲನ್ನು ಜಪ್ತು ಮಾಡಿದ್ದಾರೆ. ನಿಷೇಧಿತ ವಸ್ತು ಮಾರಾಟಕ್ಕೆ ಮುಂದಾದ ಕಾರಣ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.