ಅರಣ್ಯ ಅತಿಕ್ರಮಣ: ಅರ್ಜಿ ಹಾಕಿದ ಅಜ್ಜಿಗೆ ಅನ್ಯಾಯ!
ಯಲ್ಲಾಪುರ ಹಾಗೂ ಮುಂಡಗೋಡು ಅರಣ್ಯಾಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಜ್ಜಿಯೊಬ್ಬರು ನೆಟ್ಟಿದ್ದ ಅಡಿಕೆ ಗಿಡ ಕಡಿದಿದ್ದಾರೆ. ಕುಂದರಗಿಯ ಬೆಳ್ಳಂಬಿ ಬಳಿ ಕೃಷ್ಣೆ ನಾಯ್ಕ ಅವರು ಬೆಳೆಸಿದ್ದ 33 ಅಡಿಕೆ ಗಿಡಗಳು ನೆಲಸಮವಾಗಿದೆ.
`ಕೃಷ್ಣೆ ಸಣ್ಣು ನಾಯ್ಕ ಅವರು ಅರಣ್ಯ ಜಾಗ ಅತಿಕ್ರಮಣ ಮಾಡಿ ತೋಟ ಮಾಡಿದ್ದರು. ಅಡಿಕೆ ಬೆಳೆದ ಪ್ರದೇಶಕ್ಕೆ ಅವರು ಜಿಪಿಎಸ್ ಸಹ ಮಾಡಿದ್ದರು. ಅದಾಗಿಯೂ, ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಅಡಿಕೆ ಗಿಡ ಕಡಿದಿದ್ದಾರೆ’ ಎಂಬುದು ಕುಟುಂಬದವರ ಆರೋಪ. `ಕೃಷ್ಣೆ ನಾಯ್ಕ ಅವರು ಜಿಪಿಎಸ್ ಕ್ಷೇತ್ರಹೊಂದಿದ್ದು ಸತ್ಯ. ಆದರೆ, ಆ ಕ್ಷೇತ್ರದ ಹೊರತಾಗಿಯೂ ಹೊಸದಾಗಿ ಅಡಿಕೆ ಗಿಡ ನೆಟ್ಟಿದ್ದು, ಅದನ್ನು ತೆರವು ಮಾಡಲಾಗಿದೆ’ ಎಂಬುದು ಅರಣ್ಯಾಧಿಕಾರಿಗಳ ಮಾತು. ಮುಂಡಗೋಡಿನ ಕಾತೂರು ಅರಣ್ಯಾಧಿಕಾರಿ ಕಚೇರಿಯಿಂದ 18 ಹಾಗೂ ಯಲ್ಲಾಪುರದ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಕಚೇರಿಯಿಂದ 15 ಅಡಿಕೆ ಮರ ತೆರವು ಮಾಡಲಾಗಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ.
`ಬೆಳ್ಳಂಬಿ ಗ್ರಾಮದ ಕೃಷ್ಣೇ ನಾಯ್ಕ್ ಅವರ ಕುಟುಂಬವು ಮೂರು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲಿಯೇ ವಾಸವಿದ್ದು, ಅಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಅಡಿಕೆ, ತೆಂಗು, ಹಲಸಿನ ಜೊತೆ ಅರಣ್ಯ ಗಿಡಗಳನ್ನು ಅವರು ಬೆಳೆದಿದ್ದಾರೆ. ಸಾಲ ಮಾಡಿ ಗಿಡ ಫೋಷಣೆ ಮಾಡುತ್ತಿದ್ದ ಗಿಡ ಕಟಾವು ಸರಿಯಲ್ಲ’ ಎಂಬುದು ಅರಣ್ಯ ಹಕ್ಕು ಹೋರಾಟಗಾರರ ವಾದ. `ಅತಿಕ್ರಮಮಣದಾರರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಆಗಮಿಸಿ ಮರ ಕಟಾವು ಮಾಡಿದ್ದಾರೆ’ ಎಂದು ಕೃಷ್ಣೇ ನಾಯ್ಕ ಅವರ ಪುತ್ರ ಸದಾಶಿವ ನಾಯ್ಕ ಅವರು ದೂರಿದ್ದಾರೆ.
ಆ ಭಾಗದ ಹೋರಾಟಗಾರರಾದ ಗಣಪತಿ ನಾಯ್ಕ್ ಬಾಳೆಕೊಪ್ಪ, ಮಂಜುನಾಥ್ ಎನ್. ನಾಯ್ಕ್, ಗಣಪತಿ ಪಾಟೀಲ್, ಸದಾಶಿವ ಸಣ್ಣು ನಾಯ್ಕ್ ಬೆಳ್ಳಂಬಿ, ಸೀತಾರಾಮ್ ಈಶ್ವರ್ ನಾಯ್ಕ್ ಮಾವಿನಕಟ್ಟಾ, ಪರಮೇಶ್ವರ್ ಸೋಮು ಮರಾಠಿ ಶಾನವಳ್ಳಿ, ರಾಘವೇಂದ್ರ ಶಂಕರ್ ಸಿದ್ದಿ, ಲಕ್ಷ್ಮಣ್ ಅಪ್ಪು ಸಿದ್ದಿ, ಮಂಜುನಾಥ ನಾರಾಯಣ ಮರಾಠಿ, ನರಸಿಂಹ ತಿಮ್ಮ ಮರಾಠಿ, ಈಶ್ವರ್ ಸಣ್ಣು ನಾಯ್ಕ್, ಪ್ರಶಾಂತ್ ಪಿ. ಜೈನ್ ಅಟಬೈಲ ಅವರು ಅಧಿಕಾರಿಗಳ ಕೃತ್ಯ ಖಂಡಿಸಿದ್ದಾರೆ.