`1978ರ ಪೂರ್ವದಲ್ಲಿದ್ದ ಅರ್ಹ ಅರಣ್ಯ ಒತ್ತುವರಿದಾರರ ಪ್ರಕರಣಗಳನ್ನು ಮರು ಸಮೀಕ್ಷೆ ಮಾಡಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ. ಈ ಕುರಿತು ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಅರಣ್ಯ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
`ಸಮೀಕ್ಷೆಯ ಸಂದರ್ಭದಲ್ಲಿ ಕೈಬಿಟ್ಟುಹೋಗಿರುವ 1978 ರ ಪೂರ್ವದ ಅರ್ಹ ಒತ್ತುವರಿದಾರರ ಪ್ರಕರಣಗಳನ್ನು ಮರುಸಮೀಕ್ಷೆಯಿಂದ ಮಂಜೂರಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಜರುಗಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. `ಕೈಬಿಟ್ಟು ಹೋಗಿರುವ ಎಲ್ಲ ಅರ್ಹ ಪ್ರಕರಣಗಳನ್ನು ಮರು ಸಮೀಕ್ಷೆಯಿಂದ ಗುರುತಿಸಲು ಹಾಗೂ ಕೇಂದ್ರ ಸರ್ಕಾರದ ಮಂಜೂರಿಗೆ ಅಗತ್ಯ ಪ್ರಸ್ತಾವ ಸಲ್ಲಿಸಲು 13-3-2015ರಂದೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಸಂಬoಧಪಟ್ಟ ಇಲಾಖೆಗಳು ಈವರೆಗೆ ಮರುಸಮೀಕ್ಷೆಯನ್ನು ಮಾಡಿಲ್ಲ. ಅರ್ಹರನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆಯನ್ನೂ ಸಹ ಕಳಿಸಿಲ್ಲ. ಇದರಿಂದ ರಾಜ್ಯದಲ್ಲಿ ಸಾವಿರಾರು ಅರ್ಹ ರೈತರು ಅಧಿಭೋಗದ ಹಕ್ಕಿನಿಂದ ವಂಚಿತರಾಗಿದ್ದಾರೆ’ ಎಂದವರು ಕಳವಳವ್ಯಕ್ತಪಡಿಸಿದ್ದಾರೆ.
`ಈ ದಿಶೆಯಲ್ಲಿ ಪ್ರಶ್ನಿಸಿದರೆ ಸರಕಾರದ ಮಟ್ಟದಲ್ಲಿ ಆಗಿರುವ ನಿರ್ಣಯದ ಬಗ್ಗೆ ಸುತ್ತೋಲೆ ಇರುವದು ನಿಜ. ಆದರೆ, ತಮಗೆ ಇನ್ನೂ ಸರ್ಕಾರದಿಂದ ಅದೀಕ್ರತ ಆದೇಶ ಬಂದಿಲ್ಲ ಎನ್ನುವದಾಗಿ ಕೆಲವು ಅಧಿಕಾರಿಗಳು ಹೇಳುತ್ತಿದ್ದಾರೆ. ಬಹುಪಾಲು ಅರಣ್ಯ ಪ್ರದೇಶ ಹೊಂದಿರುವ ಪಶ್ಚಿಮಘಟ್ಟದ ಅಂಚಿನಲ್ಲಿರುವ ಉತ್ತರಕನ್ನಡ, ಶಿವಮೊಗ್ಗ ಸಹಿತ ಕರಾವಳಿ, ಮಲೆನಾಡು, ಜಿಲ್ಲೆಗಳಲ್ಲಿ ಅಲ್ಲಿನ ಲಕ್ಷಾಂತರ ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಬಡಜನರು ತಮ್ಮ ವಸತಿ ಮತ್ತು ಜೀವನೋಪಾಯಕ್ಕೆ ತಲೆತಲಾಂತರದಿoದ ಅರಣ್ಯ ಭೂಮಿಯನ್ನು ಅವಲಂಬಿಸಿದ್ದಾರೆ. 15-5-1996ರಲ್ಲಿ ಕೇಂದ್ರ ಸರ್ಕಾರವು 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಡಿ 1978ಪೂರ್ವದ ಒತ್ತುವರಿ ಪ್ರಕರಣಗಳನ್ನು ಗುರುತಿಸಿ, ಮಂಜೂರಿಗೆ ಶಿಫಾರಸು ಮಾಡಲು ಸೂಚಿಸಿತ್ತು. ಆದರೆ ಅರ್ಹರನ್ನು ಗುರುತಿಸುವ ಅಂದಿನ ಸಮೀಕ್ಷೆ ಸಮರ್ಪಕವಾಗಿ ನಡೆಯದೇ ರಾಜ್ಯದಲ್ಲಿ ಸಾವಿರಾರು ಅರ್ಹ ಪ್ರಕರಣಗಳು ಕೈಬಿಟ್ಟು ಹೋಗಿರುವ ಬಗ್ಗೆ ಅಂದಿನ ಕಂದಾಯ ಸಚಿವ ಆರ್ ವಿ ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸರ್ಕಾರದ ಉನ್ನತಾಧಿಕಾರ ಮಟ್ಟದ ಸಭೆಯ ನಡವಳಿಯಲ್ಲಿ ಉಲ್ಲೇಖವಾಗಿದೆ’ ಎಂಬ ಅಂಶವನ್ನು ಅವರು ಗಮನಕ್ಕೆ ತಂದಿದ್ದಾರೆ.
`ಕೈ ಬಿಟ್ಟುಹೋದ ಅರ್ಹ ಪ್ರಕರಣಗಳನ್ನು ಗುರುತಿಸಿ, ಮಂಜೂರಿಗೆ ಕೇಂದ್ರ ಸರ್ಕಾರಕ್ಕೆ ಅಗತ್ಯ ಪ್ರಸ್ತಾವ ಸಲ್ಲಿಸಬೇಕೆಂದು ನಿರ್ಣಯವಾಗಿತ್ತು. ಆದರೆ ಸರ್ಕಾರದ ಅಂದಿನ ನಿರ್ಣಯವನ್ನು ಈವರೆಗೂ ಅನುಷ್ಠಾನಕ್ಕೆ ಬಾರದೇ ಇರುವುದರಿಂದ ಸರ್ಕಾರ ಈ ವಿಚಾರವನ್ನು ಪುನರ್ ಪರಿಶೀಲಿಸಲು ಹಾಗೂ 1978ರ ಪೂರ್ವದ ಕೈಬಿಟ್ಟುಹೋದ ಅರಣ್ಯ ಭೂಮಿ ಒತ್ತುವರಿದಾರರ ಅರ್ಹ ಪ್ರಕರಣಗಳನ್ನು ಮರುಸಮೀಕ್ಷೆಯಿಂದ ಗುರುತಿಸಿ, ಮಂಜೂರಿಸಲು ಸರ್ಕಾರ ಅಗತ್ಯ ಮದ್ಯಪ್ರವೇಶ ಮಾಡಬೇಕು’ ಎಂದು ಚಂದ್ರಕಾoತ ಕೊಚರೇಕರ ಆಗ್ರಹ ಪಡಿಸಿದ್ದಾರೆ.