ಹಳಿಯಾಳದ ಪರಶುರಾಮ ತೋರಸ್ಕರ್ ಹಾಗೂ ಮಾಯಶ್ರೀ ತೋರಸ್ಕರ್ ದಂಪತಿ ಖರೀದಿಸಿದ ಭೂಮಿಗೆ ಕಾಲಿಡಲು ಬಿಡದೇ ಭೂ ಮಾಲಕ ಪರಶುರಾಮ ತೋರಸ್ಕರ್ ಅವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮೂವರಿಗೆ ಶಿರಸಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹಳಿಯಾಳ ತಾಲೂಕಿನ ಕರ್ಲಗಟ್ಟಾ ಗ್ರಾಮದ ಯಡುಗಾದಲ್ಲಿ ಯಮೂನಾ ಸುಂಟಗಾರ್ ಅವರು 3 ಎಕರೆ ಭೂಮಿ ಹೊಂದಿದ್ದರು. ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಅವರು ಆ ಭೂಮಿಯನ್ನು ಮಾಯಶ್ರೀ ತೋರಸ್ಕರ್ ಹಾಗೂ ಪರಶುರಾಮ ತೋರಸ್ಕರ್ ದಂಪತಿಗೆ ಮಾರಾಟ ಮಾಡಿದ್ದರು. ಆದರೆ, ಆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದ ಸಹದೇವ ತಡ್ಡಿಕರ್ ಅವರಿಗೆ ಈ ವ್ಯವಹಾರ ಇಷ್ಟವಾಗಿರಲಿಲ್ಲ. `ತಾನು ದುಡಿದ ಭೂಮಿಯನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ’ ಎಂದು ಸಹದೇವ ತಡ್ಡಿಕರ್ ಗಲಾಟೆ ಮಾಡಿದ್ದರು.
ಪರಶುರಾಮ ತೋರಸ್ಕರ್ ಹಾಗೂ ಮಾಯಶ್ರೀ ತೋರಸ್ಕರ್ ಅವರು ಕಾನೂನಿನ ಪ್ರಕಾರ ಭೂಮಿ ಖರೀದಿಸಿದ ನಂತರವೂ ಆ ದಂಪತಿಗೆ ಸಹದೇವ ತಡ್ಡಿಕರ್ ಅವರು ಪದೇ ಪದೇ ತೊಂದರೆ ಕೊಡುತ್ತಿದ್ದರು. ಆಗ, ಭೂಮಿ ಮಾರಾಟ ಮಾಡಿದ್ದ ಯಮುನಾ ಸುಂಟಗಾರ ಅವರ ಜೊತೆ ಅಲ್ಲಿದ್ದ ಸುಭಾಷ ಪಾಟೀಲ ಹಾಗೂ ಪರಶುರಾಮ ತೋರಸ್ಕರ್ ಸೇರಿ `ಈ ರೀತಿ ತೊಂದರೆ ಮಾಡಬೇಡ’ ಎಂದು ಸಹದೇವ ತಡ್ಡಿಕರ್ ಅವರಿಗೆ ಬುದ್ಧಿ ಹೇಳಿದ್ದರು. ಆದರೂ, ಸಹದೇವ ತಡ್ಡಿಕರ್ ಅವರು ಸಮಾಧಾನವಾಗದೇ ದ್ವೇಷ ಸಾಧಿಸುತ್ತಿದ್ದರು. `ಹೊಲಕ್ಕೆ ಕಾಲಿಟ್ಟರೆ ಕೊಲೆ ಮಾಡುವೆ’ ಎಂದು ಸಹದೇವ ತಡ್ಡಿಕರ್ ದಂಪತಿಗೆ ಬೆದರಿಕೆ ಒಡ್ಡಿದ್ದರು. ಪರಶುರಾಮ ತೋರಸ್ಕರ್ ಹಾಗೂ ಮಾಯಶ್ರೀ ತೋರಸ್ಕರ್ ದಂಪತಿಗೆ ಫಸಲು ಕೊಯ್ಯಲು ಸಹ ಬಿಡದೇ ಕಾಡಿಸುತ್ತಿದ್ದರು. ಈ ಬಗ್ಗೆ ಮಾಯಶ್ರೀ ತೋರಸ್ಕರ್ ಅವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೂ ಸಹದೇವ ತಡ್ಡಿಕರ್ ಅವರ ಕಾಟ ಕಡಿಮೆ ಆಗಿರಲಿಲ್ಲ.
ಈ ನಡುವೆ ಭೂಮಿ ಅಭಿವೃದ್ಧಿಗಾಗಿ ಪರಶುರಾಮ ತೋರಸ್ಕರ್ ಮುಂದಾದರು. ಆ ಭೂಮಿಯಲ್ಲಿದ್ದ ಸಹದೇವ ತಡ್ಡಿಕರ್ ಅವರ ತಂದೆಯ ಸ್ಮಾರಕ ಕಟ್ಟೆಯನ್ನು ತೆರವು ಮಾಡಿದರು. ತಂದೆಯ ಸ್ಮಾರಕ ಕಟ್ಟೆ ತೆರವು ಆಗಿದನ್ನು ಅರಿತು ಸಹದೇವ್ ತಡ್ಡಿಕರ್ ಅವರು ಸಿಡಿಮಿಡಿಕೊಂಡಿದ್ದು, ಪರಶುರಾಮ ತೋರಸ್ಕರ್ ಅವರನ್ನು ಕೊಲ್ಲುವುದಕ್ಕಾಗಿ ತಂತ್ರ ರೂಪಿಸಿದರು. ಕೊಲೆ ಮಾಡುವ ಕಾರ್ಯಾಚರಣೆಗಾಗಿ ಸಹದೇವ ತಡ್ಡಿಕರ್ ಅವರು ಸದಾನಂದ ಪಾಟೀಲ ಹಾಗೂ ರಾಮಾ ಹುಬ್ಬಳ್ಳಿಕರ್ ಅವರ ನೆರವುಪಡೆದರು. 2023 ಮೇ 11ರಂದು ಪರಶುರಾಮ ತೋರಸ್ಕರ್ ಅವರು ಕೊರ್ಲಕಟ್ಟಾ ಗ್ರಾಮಕ್ಕೆ ಸ್ಕೂಟಿ ಮೇಲೆ ಹೋಗುತ್ತಿದ್ದರು. ಅಲ್ಲಿದ್ದ ಮಾವಿನ ಮರದ ಕೆಳಗೆ ಅಡಗಿ ಕುಳಿತಿದ್ದ ಆ ಮೂವರು ಒಬ್ಬರೇ ಇದ್ದ ಪರಶುರಾಮ ತೋರಸ್ಕರ್ ಅವರನ್ನು ಅಡ್ಡಗಟ್ಟಿದ್ದರು. ಅನಗತ್ಯವಾಗಿ ಜಗಳ ಶುರು ಮಾಡಿದರು. ಈ ವೇಳೆ ಪರಶುರಾಮ ತೋರಸ್ಕರ್ ಅವರು ತಮಗೆ ಅಪಾಯ ಎದುರಾದ ಬಗ್ಗೆ ವಕೀಲ ರಮೇಶ ಬಿಂಗಿ ಅವರಿಗೆ ಫೋನ್ ಮಾಡಿದರು.
ಆ ಫೋನ್ ಕರೆ ಕಟ್ ಆಗುವಷ್ಟರಲ್ಲಿಯೇ ಸದಾನಂದ ಪಾಟೀಲ ಹಾಗೂ ರಾಮಾ ಹುಬ್ಬಳ್ಳಿಕರ್ ಸೇರಿ ಪರಶುರಾಮ ತೋರಸ್ಕರ್ ಅವರ ಕೈ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಸಿಟ್ಟಿನಲ್ಲಿದ್ದ ಸಹದೇವ ತಡ್ಡಿಕರ್ ಅವರು ಕಬ್ಬಿಣದ ಕೊಡಲಿಯಿಂದ ಪರಶುರಾಮ ತೋರಸ್ಕರ್ ಅವರ ಕಾಲು ತುಂಡರಿಸಿದರು. `ಆತ ಇಲ್ಲಿಯೇ ಸಾಯಲಿ’ ಎಂದು ಕೂಗಿ ಹೇಳಿದ ಆ ಮೂವರು ಪರಶುರಾಮ ತೋರಸ್ಕರ್ ಅವರ ಮೊಬೈಲನ್ನು 11 ತುಂಡುಗಳನ್ನಾಗಿಸಿದರು. ಅದಾದ ನಂತರ ಆ ಮೂವರು ಅಲ್ಲಿಂದ ಪರಾರಿಯಾದರು. ಸಾಕಷ್ಟು ನರಳಾಟ ನಡೆಸಿದ ಪರಶುರಾಮ ತೋರಸ್ಕರ್ ರಕ್ತಸ್ರಾವದಿಂದಾಗಿ ಅಲ್ಲಿಯೇ ಕೊನೆಯುಸಿರೆಳೆದರು.
ಆಗಿನ ಹಳಿಯಾಳ ಪೊಲೀಸ್ ಉಪನಿರೀಕ್ಷಕ ವಿನೋದ ಎಸ್ ಕೆ ಅವರು ಪ್ರಕರಣ ದಾಖಲಿಸಿದ್ದು, ಸಹದೇವ ತಡ್ಡಿಕರ್ ಬಂಧಿಸಿದರು. ವೃತ್ತ ನಿರೀಕ್ಷಕ ಸುರೇಶ ಪಿ ಶಿಂಗಿ ವಿಚಾರಣೆ ನಡೆಸಿದರು. ಈಗಿನ ಪೊಲೀಸ್ ಉಪನಿರೀಕ್ಷಕ ಬಸವರಾಜ ಮಬನೂರು ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಪೊಲೀಸ್ ಸಿಬ್ಬಂದಿ ಹನುಮಂತ ಬಾರ್ಕಿ ಅವರು ಸಕಾಲಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆತಂದು ಸಹಕಾರ ನೀಡಿದರು. ಸರ್ಕಾರಿ ನ್ಯಾಯವಾದಿ ರಾಜೇಶ ಎಂ ಮಳಗಿಕರ್ ವಾದ ಮಂಡಿಸಿ `ಕೊಲೆಗೆಟುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು `ಇಂಥ ತಪ್ಪು ಮಾಡಲು ಜನ ಭಯಪಡಬೇಕು. ಸಮಾಜದಲ್ಲಿನ ಅಪರಾಧ ಪ್ರಮಾಣ ಕಡಿಮೆ ಆಗಲು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ವಾದಿಸಿದರು.
ಶಿರಸಿ ನಗರದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಪ್ರಕರಣದ ಸಮಗ್ರ ಅಧ್ಯಯನ ನಡೆಸಿದರು. ಖರೀದಿಸಿದ ಆಸ್ತಿಯಲ್ಲಿ ಹಕ್ಕು ಸಾಧಿಸಲು ತೊಂದರೆ ನೀಡಿದಲ್ಲದೇ, ಖರೀದಿದಾರರ ಕೊಲೆ ಮಾಡಿದ ಕಾರಣ ಸಹದೇವ ಹನುಮಂತ ತಡ್ಡೀಕರ್, ಸದಾನಂದ ಅನಂತ ಪಟೇಲ್ ಹಾಗೂ ರಾಮಾ ಮಾರುತಿ ಹುಬ್ಬಳ್ಳಿಕರ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಜೊತೆಗೆ ಪ್ರತಿಯೊಬ್ಬರಿಗೂ 25 ಸಾವಿರ ರೂ ದಂಡವಿಧಿಸಿದ್ದು, ಆ ದಂಡದ ಮೊತ್ತವನ್ನು ಪರಶುರಾಮ ತೋರಸ್ಕರ್ ಅವರ ಪತ್ನಿ ಮಾಯಶ್ರೀ ತೋರಸ್ಕರ್ ಹಾಗೂ ಅವರ ಮಕ್ಕಳಾದ ಪ್ರಮೋದ ತೋರಸ್ಕರ್ ಮತ್ತು ವಿನಾಯಕ ತೋರಸ್ಕರ್ ಅವರಿಗೆ ಪರಿಹಾರ ನೀಡುವಂತೆ ಆದೇಶ ಪ್ರಕಟಿಸಿದರು.