ಕಾರವಾರ ನಗರಸಭೆ ಸದಸ್ಯ ಸತೀಶ ಕೋಳಂಬಕರ್ ಹತ್ಯೆ ಪ್ರಕರಣದ ಆರೋಪಿಗಳು ಆಸ್ಪತ್ರೆಯಲ್ಲಿ ಆರಾಮಾಗಿದ್ದಾರೆ. ಅಲ್ಲಿಯೇ ಅವರಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಕೊಟ್ಟಿರುವ ಬಗ್ಗೆ ಸತೀಶ್ ಅವರ ಪುತ್ರಿ ಪೂರ್ಣಿಮಾ ಕೋಳಂಬಕರ ದೂರಿದ್ದಾರೆ.
ಕಾರವಾರದ ಸಂತೆ ಪೇಟೆಯಲ್ಲಿ ಸತೀಶ ಕೋಳಂಕರ್ ಅವರ ಕೊಲೆ ನಡೆದಿತ್ತು. ನಿತೇಶ ತಾಂಡೇಲ ಎಂಬಾತರು ಹಲವು ಬಾರಿ ಹಾಕು ಇರಿದು ಹತ್ಯೆ ಮಾಡಿದ್ದರು. ಪೊಲೀಸರು ನಿತೇಶ ತಾಂಡೇಲ್ ಅವರನ್ನು ಬಂಧಿಸಿದ್ದರು. ಆದರೆ, ಕಳೆದ 45 ದಿನಗಳಿಂದ ನಿತೇಶ ತಾಂಡೇಲ್ ಆಸ್ಪತ್ರೆಯಲ್ಲಿದ್ದಾರೆ. ಸ್ನೇಹಿತರನ್ನು ಭೇಟಿಯಾಗುತ್ತಾರೆ. ಬಿರಿಯಾನಿ ಸೇರಿ ವಿವಿಧ ಊಟ ಸರಬರಾಜಾಗುತ್ತಿದೆ ಎಂಬುದು ಪೂರ್ಣಿಮಾ ಕೋಳಂಬಕರ ಅವರ ದೂರು.
`ಸತೀಶ ಕೋಳಂಬಕರ ಅವರು ಸಮಾಜ ಸೇವಕರಾಗಿದ್ದರು. ನಗರಸಭೆಗೆ ಸಹ ಅವರು ಆಯ್ಕೆಯಾಗಿದ್ದರು. ಅಕ್ರಮಗಳನ್ನು ಸಹಿಸುತ್ತಿರಲಿಲ್ಲ. ಹೀಗಾಗಿ ಅವರನ್ನು ಮಾರುಕಟ್ಟೆಯ ನಡುವೆ ಎಲ್ಲರ ಮುಂದೆ ಕೊಲೆ ಮಾಡಲಾಗಿದೆ’ ಎಂದು ಪೂರ್ಣಿಮಾ ಕೋಳಂಬಕರ್ ಅಳಲು ತೋಡಿಕೊಂಡರು. `ಸತೀಶ ಅವರ ಹತ್ಯೆಯಾದ ಬಳಿಕ ನಿತೇಶ ತಾಂಡೇಲ ಅವರು ಬೈತಖೋಲದ ದರ್ಶನ ಎನ್ನುವವರಿಗೆ ಹತ್ಯೆಯ ಫೋಟೊ ಕಳಿಸಿದ್ದಾರೆ. ಗೇಮ್ ಇಸ್ ಡನ್ ಎನ್ನುವ ಸಂದೇಶ ರವಾನಿಸಿದ್ದಾರೆ. ದರ್ಶನಗೆ ಸಹ ಈ ಪ್ರಕರಣದಲ್ಲಿ ಸಂಬAಧವಿದ್ದು, ದರ್ಶನ್ ಸ್ಥಳದಲ್ಲಿರಲಿಲ್ಲ ಎಂಬ ಕಾರಣ ನೀಡಿ ಪ್ರಕರಣ ಬಿಡುಗಡೆ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
`ದರ್ಶನರನ್ನು ಸಹ ಸೂಕ್ತ ತನಿಖೆಗೆ ಒಳಪಡಿಸಬೇಕು. ಸತೀಶ ಕೋಳಂಬಕರ ಅವರನ್ನು ರೌಡಿ ಶೀಟರ್ ಎಂದು ಗುರುತಿಸಿದ್ದು ಸರಿಯಲ್ಲ’ ಎಂದು ಹೇಳಿದರು. `ಆರೋಪಿಯನ್ನು ಶಿಕ್ಷೆಯಿಂದ ತಪ್ಪಿಸಲು ಹುನ್ನಾರ ನಡೆಯುತ್ತಿದೆ. ತಕ್ಷಣ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಹೊರ ಜಿಲ್ಲೆಯ ಜೈಲಿನಲ್ಲಿ ಇರಿಸಬೇಕು’ ಎಂದು ಒತ್ತಾಯಿಸಿದರು.