ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಶುಕ್ರವಾರ ಉತ್ತರ ಕನ್ನಡ ಪ್ರವಾಸ ಮಾಡಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿದ್ದಾರೆ. ಅದರೊಂದಿಗೆ ಅಂಕೋಲಾದ ಆಂದ್ಲೆಯಲ್ಲಿರುವ ದೇವಿ ಜಗದೀಶ್ವರಿ ದೇಗುಲದಲ್ಲಿ ಒಂದುವರೆ ತಾಸುಗಳ ಕಾಲ ಏಕಾಂತ ಪೂಜೆ ನಡೆಸಿದ ಅವರು ನಂತರ ದೇವಿಯಲ್ಲಿ ತಮ್ಮ ಭವಿಷ್ಯದ ರಾಜಕೀಯದ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
Advertisement. Scroll to continue reading.
ಇದಕ್ಕೂ ಮುನ್ನ ಗೋಕರ್ಣದ ತಾಮಗ್ರಗೌರಿ ಮಂದಿರದಲ್ಲಿ ರಾಮಚಂದ್ರ ನಿರ್ವಾಣೇಶ್ವರ ಅವರು ಸ್ವಾಗತ ಪೂಜೆ ನೆರವೇರಿಸಿದ್ದು, `ಡಿಕೆ ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿ’ ಎಂದು ಆಶಿಸಿದರು. ಮಹಾಗಣಪತಿ ಮಂದಿರದಲ್ಲಿ ಪೂಜೆ ನೇರವೇರಿಸುತ್ತಿರುವ ವೇಳೆ ಗಣೇಶನಿಗೆ ಅರ್ಪಿಸಿದ ಹೂವು ಬಲಗಡೆಯಿಂದ ಕಳೆಗೆ ಬಿದ್ದು ಪ್ರಸಾದವಾಗಿದ್ದನ್ನು ನೋಡಿದ ಜನ `ಡಿಕೆ ಶಿವಕುಮಾರ ಅವರಿಗೆ ದೇವರ ಅಭಯ ದೊರೆತಿದೆ’ ಎಂದು ಭಾವಿಸಿದರು. ಅದಾದ ನಂತರ `ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದರು.
ಅಂಕೋಲಾದ ದೇವಿಯ ಸನ್ನಿಧಿಯಲ್ಲಿ ಕುಳಿತು ಗಂಭೀರವಾಗಿ `ಪ್ರಶ್ನಾಕಾರ್ಯ’ದಲ್ಲಿ ತೊಡಗಿದ್ದು ಅಲ್ಲಿ ಅವರು ನಾಗದೇವತೆ ಹಾಗೂ ತುಳಸಿಗೂ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ತಮ್ಮ ಭೇಟಿಯ ಉದ್ದೇಶವನ್ನು ಬಿಚ್ಚಿಟ್ಟರು. `ಐದು ವರ್ಷಗಳ ಹಿಂದೆ ಕುಟುಂಬದ ಕೆಲಸದ ನಿಮಿತ್ತ ಈ ಪುಣ್ಯ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಮಾಡಿದ್ದೆ. ತಾಯಿಯ ದಯೆಯಿಂದ ಆ ಕೆಲಸ ಈಗ ಈಡೇರಿದೆ. ಅಂದೇ ಮತ್ತೆ ಇಲ್ಲಿಗೆ ಬರುತ್ತೇನೆ ಎಂದು ಹರಕೆ ಹೊತ್ತಿದ್ದೆ. ಅದರಂತೆ ಇಂದು ಬಂದು, ಮತ್ತೆ ಆಶೀರ್ವಾದ ಮಾಡುವಂತೆ ತಾಯಿಯಲ್ಲಿ ಕೇಳಿಕೊಂಡಿದ್ದೇನೆ’ ಎಂದು ಹೇಳಿದರು. `ಮುಖ್ಯಮಂತ್ರಿ ಸ್ಥಾನದ ಇಚ್ಛೆ ಹಾಗೂ ಅಧಿಕಾರ ಹಸ್ತಾಂತರದ ದಿನಾಂಕ ನಿಗದಿ ಆಗಿದೆಯೇ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಡಿಕೆಶಿ ಯಾವುದೇ ಉತ್ತರ ನೀಡಲಿಲ್ಲ.
ಡಿಕೆಶಿಯೇ ಮುಖ್ಯಮಂತ್ರಿ!
`ಉಪಮುಖ್ಯಮoತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಹ ಹೇಳಿದರು.
`ಡಿಕೆ ಶಿವಕುಮಾರ ಅವರು ಸಿಎಂ ಅಲ್ಲ ಎನ್ನಲು ನಾವ್ಯಾರು? ಹೈಕಮಾಂಡ್ ಏನು ನಿಶ್ಚಯ ಮಾಡಿದೆಯೋ ಅದರಂತೆ ಎಲ್ಲವೂ ನಡೆಯುತ್ತದೆ. ಡಿಕೆಶಿ ಅವರು ಗೋಕರ್ಣದಲ್ಲಿ ಮಹಾಬಲೇಶ್ವರ ಮತ್ತು ವಿಘ್ನೇಶ್ವರನ ದರ್ಶನ ಪಡೆದಿದ್ದಾರೆ. ನಾವು ದೇವರನ್ನು ನಂಬಿ ಕೆಲಸ ಮಾಡುವವರು, ದೇವರ ಆಶೀರ್ವಾದದ ಮೇಲೆ ನಂಬಿಕೆ ಇಟ್ಟವರು. ಆದರೆ ಬಿಜೆಪಿಗರು ಕೇವಲ ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರು’ ಎಂದು ಮಂಕಾಳು ವೈದ್ಯ ಅವರು ಹೇಳಿದರು.