ಕುಡಿದು ವಾಹನ ಚಲಾಯಿಸಿದವರನ್ನು ಬೆದರಿಸಿ ಹಣಪಡೆದಿದ್ದ ಪೊಲೀಸ್ ಅಧಿಕಾರಿಯೊಬ್ಬರ ತಲೆದಂಡವಾಗಿದೆ. ಪೊಲೀಸ್ ಅಧಿಕಾರಿ ಜೊತೆ ಸಿಬ್ಬಂದಿಯೊಬ್ಬರನ್ನು ಸರ್ಕಾರ ಅಮಾನತು ಮಾಡಿದೆ.
Advertisement. Scroll to continue reading.
ಕೆಲ ದಿನದ ಹಿಂದೆ ಭಟ್ಕಳ ಗ್ರಾಮೀಣ ಠಾಣೆಯ ಪಿಐ ಮಂಜುನಾಥ್ ಲಿಂಗಾರೆಡ್ಡಿ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿದವರನ್ನು ತಡೆದಿದ್ದರು. ವಾಹನ ಚಾಲಕರಿಂದ 15 ಸಾವಿರ ರೂ ದಂಡ ವಸೂಲಿ ಮಾಡಿದ್ದರು. ಆದರೆ, ಆ ದಂಡವನ್ನು ಸರ್ಕಾರಕ್ಕೆ ಪಾವತಿಸಿರಲಿಲ್ಲ. ಈ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಉನ್ನತ ತನಿಖೆಗೆ ಆದೇಶವಾಗಿತ್ತು. ಈ ಬೆನ್ನಲ್ಲೆ ಮಂಜುನಾಥ ಲಿಂಗಾರೆಡ್ಡಿ ಅವರ ವಿರುದ್ಧ ಇನ್ನೂ ಅನೇಕ ಭ್ರಷ್ಟಾಚರ ಆರೋಪಗಳು ಕೇಳಿ ಬಂದಿದ್ದವು.
ಮೇಲಧಿಕಾರಿಗಳು ಸಹ ಮಂಜುನಾಥ ಲಿಂಗರೆಡ್ಡಿ ಅವರಿಗೆ ಸಾಕಷ್ಟು ಎಚ್ಚರಿಕೆ ನೀಡಿದ್ದರು. ಆದರೂ, ಸುಧಾರಣೆ ಕಂಡಿರಲಿಲ್ಲ. ಇದೇ ವೇಳೆ ಹಣಪಡೆದ ಆರೋಪ ಎದುರಾಗಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವ್ಯಕ್ತಿಯಿಂದ ಸ್ವೀಕರಿಸಿದ ಹಣ ಸರ್ಕಾರಕ್ಕೆ ಪಾವತಿಯಾಗದೇ ಇರುವುದು ಗೊತ್ತಾಯಿತು. ಪ್ರಾಥಮಿಕ ತನಿಖೆಯಲ್ಲಿ ಸಹ ಈ ಅಕ್ರಮ ಸಾಭೀತಾಯಿತು. ಈ ಹಿನ್ನಲೆ ಪಿಐ ಮಂಜುನಾಥ ಲಿಂಗರೆಡ್ಡಿ ಅಮಾನತಾದರು.
ಇದೇ ಪ್ರಕರಣದಲ್ಲಿ ಪಿಐಗೆ ಸಹಕರಿಸಿದ್ದ ಆರೋಪದ ಅಡಿ ಭಟ್ಕಳ ಗ್ರಾಮೀಣ ಠಾಣೆಯ ಸಿಬ್ಬಂದಿ ಅಶೋಕ ನಾಯ್ಕ ಸಹ ಅಮಾನತು ಆಗಿದ್ದಾರೆ. `ದೂರು ನೀಡಬೇಡಿ’ ಎಂದು ಅಶೋಕ ನಾಯ್ಕ ಬೆದರಿಸಿದ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಈ ಇಬ್ಬರ ವಿರುದ್ಧವೂ ತನಿಖೆ ಮುಂದುವರೆದಿದೆ.