60 ವರ್ಷಗಳಿಂದ ಅದೇ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಲಿಂಗ ನಾಯ್ಕ ಅವರ ಕುಟುಂಬಕ್ಕೆ `ಆ ಜಾಗವನ್ನು ಖಾಲಿ ಮಾಡಿ’ ಎಂದು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. `ಬೆಳೆದು ನಿಂತ ಅಡಿಕೆ ಮರಗಳ ಜೊತೆ ಮನೆಯನ್ನು ತೆರವು ಮಾಡಿ’ ಎಂದು ಸೂಚಿಸಿದ್ದಾರೆ. `ಒಂದು ವಾರದ ಒಳಗೆ ತೆರವು ಮಾಡದೇ ಇದ್ದರೆ ಒಕ್ಕಲೆಬ್ಬಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಸಿದ್ದಾಪುರದ ಇಟಗಿ ಬಳಿಯ ಸುತ್ತಲಮನೆ ಸಮೀಪದ ಗಾಲಮಾಂವದಲ್ಲಿ ಲಿಂಗ ಪುಟ್ಟ ನಾಯ್ಕ ಅವರು ಆರು ದಶಕದಿಂದ ವಾಸವಾಗಿದ್ದಾರೆ. ಅಲ್ಲಿಯೇ ಅವರು ಅಡಿಕೆ-ತೆಂಗಿನ ತೋಟ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಕ್ಯಾದಗಿ ವಲಯದ ಅರಣ್ಯಾಧಿಕಾರಿಗಳು ಇದೀಗ ಏಕಾಏಕಿ ಅವರನ್ನು ಅಲ್ಲಿಂದ ತೆರವು ಮಾಡಲು ಮುಂದಾಗಿದ್ದಾರೆ. `ಜಾಗ ಖಾಲಿ ಮಾಡಿ’ ಎಂದು ಲಿಂಗ ನಾಯ್ಕ ಅವರಿಗೆ ನೋಟಿಸ್ ನೀಡಿದ್ದು, ಲಿಂಗ ನಾಯ್ಕ ಅವರ ಪತ್ನಿ ಲೀಲಾವತಿ ನಾಯ್ಕ ಅವರು ದಿಕ್ಕೇ ತೋಚದ ಹಾಗೇ ಕೂತಿದ್ದಾರೆ.
ಲಿಂಗ ನಾಯ್ಕ ಅವರು ಹೆಚ್ಚಿಗೆ ಓದಿದವರಲ್ಲ. ಸರ್ಕಾರದ ಆದೇಶ-ಸುತ್ತೋಲೆ ಬಗ್ಗೆ ಅವರಿಗೆ ಅರಿವಿಲ್ಲ. 1978ರ ಪೂರ್ವದಿಂದಲೂ ಅವರು ಅರಣ್ಯ ಅತಿಕ್ರಮಣ ಪ್ರದೇಶದಲ್ಲಿ ವಾಸವಾಗಿದ್ದು, ಅಜ್ಞಾನದಿಂದಾಗಿ ಅವರು ಆ ಅವಧಿಯಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ನಂತರ ಅರಣ್ಯ ಹಕ್ಕು ಕಾಯ್ದೆ ಅಡಿ ಅವರು ಅರ್ಜಿ ಸಲ್ಲಿಸಿದ್ದರೂ ಅದನ್ನು ಅಧಿಕಾರಿಗಳು ಪರಿಗಣಿಸುತ್ತಿಲ್ಲ. 50 ವರ್ಷದ ಮರಗಳ ಜೊತೆ ವಾಸದ ಮನೆಯನ್ನು ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. `ಎಲ್ಲವನ್ನು ಬಿಟ್ಟು ಹೋಗುವುದೆಲ್ಲಿ?’ ಎಂದು ಆ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ.
ಶನಿವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸ್ಥಳಕ್ಕೆ ಭೇಟಿ ನೀಡಿದರು. ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮಚಂದ್ರ ನಾಯ್ಕ ತ್ಯಾಗಲಿಮನೆ, ಕೆ ಬಿ ನಾಯ್ಕ ಸುತ್ತಮನೆ, ನಾರಾಯಣ ನಾಯ್ಕ ಗಾಳುಮನೆ, ರಾಮಚಂದ್ರ ನಾಯ್ಕ ಮುಂಡಗೇತಗ್ಗು, ರವಿ ನಾಯ್ಕ, ಗೋವಿಂದ ಗೌಡ ಕಿಲವಳ್ಳೀ, ಗಣಪತಿ ಗೌಡ ಮಕ್ಕಿಗದ್ದೆ ಮುಂತಾದವರು ಲಿಂಗ ನಾಯ್ಕ ಅವರ ಕುಟುಂಬಕ್ಕೆ ಸಮಾಧಾನ ಮಾಡಿದರು. `ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಧೈರ್ಯ ಹೇಳಿದರು.