ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರ ವಿರುದ್ಧ ದಾಖಲಾದ ಕೊಲೆ ಯತ್ನ ಪ್ರಕರಣ ರಾಜಕೀಯ ತಿರುವುಪಡೆದಿದೆ. ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರು ಜಿ ಜಿ ಶಂಕರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಬ್ಬರು ಸೇರಿ `ರಾಜಕೀಯ ಕಾರಣಕ್ಕಾಗಿ ಬಿಜೆಪಿ ಮುಖಂಡ ಜಿ ಜಿ ಶಂಕರ್ ಅವರ ವಿರುದ್ಧ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲಿಸಿದೆ’ ಎಂದು ದೂರಿದ್ದಾರೆ.
`ನಾನು ನನ್ನ ಉದ್ಯಮ ನಡೆಸಿ ಬಂದವನು. ಇಸ್ಪೀಟ್, ಓಸಿ, ಕೋಳಿ ಅಂಕ, ಜೂಜು ನಡೆಸುವವನಲ್ಲ. ಅದಾಗಿಯೂ ನನ್ನ ಹತ್ತಿಕ್ಕುವ ಪ್ರಯತ್ನ ನಡೆದಿದೆ’ ಎಂದು ಬಿಜೆಪಿ ಮುಖಂಡರೂ ಆಗಿರುವ ಜಿ ಜಿ ಶಂಕರ್ ಅವರು ಅಳಲು ತೋಡಿಕೊಂಡಿದ್ದಾರೆ. `ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಬಿಜೆಪಿಗರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ. ಜಾಗದ ವಿಷಯವಾಗಿ ನಡೆದ ಗಲಾಟೆಯನ್ನು ತಿರುಚಿ ಜಿ ಜಿ ಶಂಕರ್ ಅವರ ವಿರುದ್ಧ ರಾಜಕೀಯ ದ್ವೇಷದಿಂದ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ’ ಎಂದು ದಿನಕರ ಶೆಟ್ಟಿ ಹಾಗೂ ಸುನೀಲ ನಾಯ್ಕ ಅವರು ಒಮ್ಮತದಿಂದ ಮಾತನಾಡಿದ್ದಾರೆ. `ಅದರಲ್ಲಿಯೂ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಉಸಿರುಗಟ್ಟಿಸುವ ವಾತಾವರಣವಿದೆ. ಜಿ ಜಿ ಶಂಕರ್ ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಸಚಿವರ ಸಂಚಿದೆ’ ಎಂದು ಸುನೀಲ ನಾಯ್ಕ ಅವರು ಹೇಳಿದ್ದಾರೆ.
`ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ನ ಗುಂಡಾಗಿರಿಗೆ ಅವಕಾಶ ನೀಡುವುದಿಲ್ಲ. ಅಮಾಯಕ ಉದ್ಯಮಿಗಳು ಮತ್ತು ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ’ ಎಂದು ಶಾಸಕ ದಿನಕರ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. `ಹಿಂದಿನ ಶಾಸಕರಾದ ಶಿವಾನಂದ ನಾಯ್ಕ ಅಥವಾ ಜೆ. ಡಿ ನಾಯ್ಕ ಅವರ ಕಾಲದಲ್ಲಿ ಇಂಥ ದ್ವೇಷದ ರಾಜಕಾರಣ ನಡೆದಿರಲಿಲ್ಲ. ಮಂಕಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಜನರು ಅಹಂಕಾರದ ರಾಜಕಾರಣಕ್ಕೆ ಈಗಾಗಲೇ ಉತ್ತರ ನೀಡಿದ್ದಾರೆ. ಪೊಲೀಸರು ಇದೇ ರೀತಿ ಮುಂದುವರಿದರೆ ಸಾವಿರಾರು ಕಾರ್ಯಕರ್ತರೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. `ಪೊಲೀಸರು ತನ್ನೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ದೂರು ನೀಡಲು ಹೋದಾಗ ಪೊಲೀಸರು ಹಗುರವಾಗಿ ಮಾತನಾಡಿಸಿ, ರಾತ್ರಿಯಿಡೀ ಠಾಣೆಯಲ್ಲಿ ಕೂಡಿಸಿ ದೂರು ಸ್ವೀಕರಿಸದೆ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ನಾಗರತ್ನ ಹಳ್ಳೇರ ಅವರು ದೂರಿದ್ದಾರೆ.
ಡಿಸೆಂಬರ್ 9ರಂದು ಹೊನ್ನಾವರ ಮಾವಿನಕೂರ್ವಾ ಬಳಿಯ ಮಂಡಲಕೂರ್ವದ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಅವರು ಪೀಟರ್ ಎಂಬಾತರ ಸೂಚನೆ ಮೇರೆಗೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಅವರ ಮೇಲೆ ಹಲ್ಲೆ ನಡೆದಿತ್ತು. ಜೊಯವಿನ್ ಅವರ ಜೊತೆ ಅವರ ತಂದೆ ಬಸ್ತೇಂವ್ ಮೆಂಡೋನ್ಸಾ, ಪಾವ್ಲು ಡಿಕೋಸ್ತಾ ಅವರ ಮೇಲೆಯೂ ದಾಳಿ ನಡೆದಿತ್ತು. 25ಕ್ಕೂ ಅಧಿಕ ಜನ ಸೇರಿ ಜೊಯವಿನ್ ಅವರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಜಿ ಜಿ ಶಂಕರ್ ಅವರ ಕೈವಾಡವಿರುವ ಆರೋಪವ್ಯಕ್ತವಾಗಿತ್ತು. ಜಿ ಜಿ ಶಂಕರ್ ಅವರ ಜೊತೆ ಅಂಗಡಿ ಹಿತ್ತಲದ ಮೋಹನ ತಿಮ್ಮಪ್ಪ ಗೌಡ, ಅರುಣ ಮಂಜುನಾಥ ಗೌಡ, ದುರ್ಗಾಕೇರಿಯ ಕಿರಣ ಆರ್ ಹೊನ್ನಾವರಕರ್, ಹೊಂಡಗದ್ದೆಯ ಸತೀಶ ಗೋವಿಂದ ಗೌಡ ಅವರು ಇನ್ನೂ 25 ಜನರ ಜೊತೆ ಸೇರಿ ಆಕ್ರಮಣ ನಡೆಸಿದ ಬಗ್ಗೆ ದೂರು ದಾಖಲಾಗಿದ್ದು, ಇದಕ್ಕೆ ಪ್ರತಿಯಾಗಿ ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ಹೊನ್ನಾವರ ಮೂಡ್ಕಣಿಯ ನಾಗರತ್ನ ಗಣಪತಿ ಹಳ್ಳೇರ್ ಅವರು ತಮಗೆ ಬೆದರಿಕೆಯಿರುವ ಬಗ್ಗೆ ದೂರಿದ್ದರು.
ಜೋಯವಿನ್ ಮಂಡೋನ್ಸಾ ಹಾಗೂ ಪೀಟರ್ ಮಂಡೋನ್ಸಾ ಅವರ ವಿರುದ್ಧ ನಾಗರತ್ನ ಹಳ್ಳೇರ್ ಅವರು ಆರೋಪಿಸಿದ್ದರು. ಅದರ ಬೆನ್ನಲ್ಲೆ ಜೋಯವಿನ್ ಮಂಡೋನ್ಸಾ ಕಡೆಯವರು ಡಿಸೆಂಬರ್ 11ರಂದು ಸೇಫ್ ಸ್ಟಾರ್ ಸೊಸೈಟಿಯ ಅಳ್ಳಂಕಿ ಶಾಖೆಯ ಫಿಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರನ್ನು ಬೆದರಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿತ್ತು. ಈ ಎಲ್ಲದರ ನಡುವೆ ಶಾಸಕ ದಿನಕರ ಶೆಟ್ಟಿ ಹಾಗೂ ಮಾಜಿ ಶಾಸಕ ಸುನೀಲ ನಾಯ್ಕ ಅವರು ಜಿ ಜಿ ಶಂಕರ್ ಅವರ ಪರವಾಗಿ ಮಾತನಾಡಿದ್ದು, ಬಿಜೆಪಿಗರನ್ನು ಗುರಿಯನ್ನಾಗಿಸಿ ಕಾಂಗ್ರೆಸ್ ದ್ವೇಷ ಸಾಧಿಸುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ.