ಅಕ್ರಮ ಗಣಿಗಾರಿಕೆ ನಡೆಸಲು ಅನುವು ಮಾಡಿಕೊಟ್ಟ ಅರಣ್ಯ ಅಧಿಕಾರಿ ವಿರುದ್ಧ ಅಂಕೋಲಾದ ಜನ ಸಿಡಿದೆದ್ದಿದ್ದಾರೆ. ಅಕ್ರಮ ನಡೆಸುವವರಿಗೆ ಅರಣ್ಯದಲ್ಲಿ ರಸ್ತೆ ನಿರ್ಮಿಸಲು ಅವಕಾಶ ನೀಡಿದ ಕಾರಣ ದೇವಿಗದ್ದೆ ಗ್ರಾಮಸ್ಥರು ಹಿರಿಯ ಅರಣ್ಯಾಧಿಕಾರಿಗಳಿಗೆ ಮುತ್ತಿಗೆ ಹಾಕಿದ್ದಾರೆ.
ಅಂಕೋಲಾದ ಸಗಡಗೇರಿ ಗ್ರಾಪಂ ವ್ಯಾಪ್ತಿಯ ದೇವಿಗದ್ದೆಯಲ್ಲಿ ಕಳೆದ 4 ವರ್ಷಗಳಿಂದ ಕಟ್ಟಡ ಕಲ್ಲು ಗಣಿಗಾರಿಗೆ ನಡೆಯುತ್ತಿದೆ. ಗಣಿಗಾರಿಕೆ ವೇಳೆ ಭಾರೀ ಪ್ರಮಾಣದ ಸ್ಪೋಟ ಸಂಭವಿಸುತ್ತಿದ್ದು, ಅದರ ಪರಿಣಾಮ ಮನೆಗಳಿಗೆ ಹಾನಿಯಾಗಿದೆ. ಸ್ಪೋಟದ ತೀವೃತೆಗೆ ಜಾನುವಾರುಳು ಸಹ ಸಾವನಪ್ಪಿವೆ. ಇದನ್ನು ವಿರೋಧಿಸಿ ಕಳೆದ ವರ್ಷ ಜನ ಪ್ರತಿಭಟಿಸಿದ್ದು, ಅದರ ಪರಿಣಾಮ ಗಣಿಗಾರಿಕೆ ನಿಂತಿದೆ. ಇದೆಲ್ಲದರ ನಡುವೆ ಕಳೆದ ಎರಡು ತಿಂಗಳಿನಿAದ ಮತ್ತೆ ಗಣಿ ದಣಿಗಳು ಅಲ್ಲಿಗೆ ಬಂದಿದ್ದಾರೆ. ನಿಯಮಬಾಹಿರವಾಗಿ ಕಲ್ಲುಗಳನ್ನು ಒಡೆಯುತ್ತಿದ್ದಾರೆ.
ಗಣಿಗಾರಿಕೆ ಉದ್ದೇಶದಿಂದಲೇ ಅರಣ್ಯದಲ್ಲಿ ರಸ್ತೆ ಮಾಡಲಾಗಿದೆ. ಅದೇ ರಸ್ತೆ ಮೂಲಕ ಭಾರೀ ಪ್ರಮಾಣದಲ್ಲಿ ಕಲ್ಲು ಸಾಗಾಟ ನಡೆಯುತ್ತಿದೆ. ಅರಣ್ಯ ರಸ್ತೆಯಿಂದ ಗಣಿಗಾರಿಕೆಯ ವಾಹನ ಸಾಗಾಟ ಮಾಡಲು ಅವಕಾಶ ನೀಡದಿರಲು ಎಸಿಎಫ್ ಜಯೇಶ ಹಾಗೂ ಆರ್ ಎಫ್ ಓ ದೀಪಕ ನಾಯ್ಕ ಅವರಲ್ಲಿ ಗ್ರಾಮಸ್ಥರು ಒತ್ತಾಯ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಆಗಿಲ್ಲ.
ಹೀಗಾಗಿ ಗ್ರಾಮದ ಜನ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಹಾಗೂ ಅರಣ್ಯ ಸಚಿವರಲ್ಲಿ ತಮ್ಮ ದೂರು ನೀಡಿದ್ದು, ಸ್ಥಳ ಪರಿಶೀಲನೆಗೆ ಬಂದ ಡಿಸಿಎಫ್ ರವಿಶಂಕರ ಅವರನ್ನು ಘೇರಾವ ಹಾಕಿ ಪ್ರತಿಭಟನೆ ನಡೆಸಿದ್ದಾರೆ. `ಬದುಕಲು ಸಣ್ಣ ಪುಟ್ಟ ಅರಣ್ಯ ಅತಿಕ್ರಮಣ ಮಾಡಿದರೆ ದರ್ಪದಿಂದ ತೆರವುಗೊಳಿಸುವ ಅರಣ್ಯ ಇಲಾಖೆಯವರು ಗಣಿಗಾರಿಕೆಗೆ ಮಾತ್ರ ತಮ್ಮದೇ ಜಾಗವನ್ನು ನೀಡುತ್ತಿದ್ದಾರೆ’ ಎಂದು ಜನ ದೂರಿದ್ದಾರೆ.