ಶಿರಸಿ ಮಾರಿಕಾಂಬಾ ಜಾತ್ರೆಗೆ ಶಾಸಕ ಭೀಮಣ್ಣ ನಾಯ್ಕ ಅವರು ವಿಶೇಷ ಅನುದಾನ ತಂದಿರುವುದಾಗಿ ಹೇಳಿದ್ದು, ಆ ವಿಷಯದ ಬಗ್ಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮತ್ತೆ ಮಾತನಾಡಿದ್ದಾರೆ. `ಜಾತ್ರೆಗೆ ಸಂಬoಧಿಸಿ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಬಂದಿಲ್ಲ. ಅದಾಗಿಯೂ, ಕಾಂಗ್ರೆಸ್ಸಿನವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ದೂರಿದ್ದಾರೆ.
ಶಿರಸಿಗೆ ಬರುವ ಅನುದಾನ ಬೇರೆ, ಸಿದ್ದಾಪುರಕ್ಕೆ ಬರುವ ಅನುದಾನ ಬೇರೆ. ಆದರೆ, ಜಾತ್ರೆಗೆ ಬಂದ ಅನುದಾನ ಸಿದ್ದಾಪುರದಲ್ಲಿ ಅಭಿವೃದ್ಧಿ ಮಾಡಿರುವ ಬಗ್ಗೆ ಕಾಂಗ್ರೆಸ್ಸಿಗರು ಹೇಳಿದ್ದು, ಇದರಿಂದ ನಾವೆಲ್ಲರೂ ನಂಬಿರುವ ಶ್ರೀ ಮಾರಿಕಾಂಬಾ ದೇವಿಗೆ ಅಪಚಾರ ಮಾಡಿದ ಹಾಗಾಗಿದೆ’ ಎಂದವರು ಹೇಳಿದ್ದಾರೆ. `ಭೀಮಣ್ಣ ನಾಯ್ಕ ಅವರು ಮಾರಿಕಾಂಬಾ ದೇವಿಗೆ ತಪ್ಪುಗಾಣಿಕೆ ಅರ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಕಳೆದ ಜಾತ್ರೆಗೆಂದು ಶಾಸಕ ಭೀಮಣ್ಣನವರು 5 ಕೋಟಿ ಕೇಳಿದ್ದರು. ಅದರಲ್ಲಿ 3.5 ಕೋಟಿ ರೂಪಾಯಿ ರಾಜ್ಯ ಸರಕಾರದಿಂದ ಬಿಡುಗಡೆಯಾಗಿದೆ ಎಂದು ಕಾಂಗ್ರೆಸಿನವರು ಹೇಳಿದ್ದಾರೆ. ಆದರೆ, ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದಾಗ ಜಾತ್ರೆಗೆ ಅನುದಾನ ಬಂದಿಲ್ಲ ಎಂದು ಗೊತ್ತಾಗಿದೆ. ಜಾತ್ರೆ ಹೆಸರಿನಲ್ಲಿ ಅನುದಾನ ತಂದಿರುವುದಾಗಿ ಫ್ಲೆಕ್ಸ್ ಹಾಕಿಸಿ ಭೀಮಣ್ಣ ನಾಯ್ಕ ಅವರು ಆ ಅವಧಿಯಲ್ಲಿ ಪ್ರಚಾರ ಪಡೆದಿದ್ದು ಸರಿಯಲ್ಲ’ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ವಿರುದ್ಧವೂ ಅನಂತಮೂರ್ತಿ ಹೆಗಡೆ ವಾಗ್ದಾಳಿ ನಡೆಸಿದರು. `ಪ್ರದೀಪ ಶೆಟ್ಟಿಯವರು ಶಿಕ್ಷಿತರು. ಯಾರ ಬಳಿ ಹೇಗೆ ಮಾತನಾಡಬೇಕು ಎಂಬುದನ್ನು ಕಲಿತುಕೊಂಡರೆ ಒಳ್ಳೆಯದು’ ಎಂದು ಸಲಹೆ ನೀಡಿದರು. `ಜನಹಿತಕ್ಕಾಗಿ ಹೋರಾಟ ಮಾಡುವವರ ಮೇಲೆ ಅನಗತ್ಯ ಆರೋಪ ಮಾಡುವುದು ಪ್ರದೀಪ ಶೆಟ್ಟಿ ಅವರಿಗೆ ಒಳ್ಳೆಯದಲ್ಲ. ಅಧಿಕೃತ ದಾಖಲೆ ಇಲ್ಲದೇ ನಾನು ಯಾವ ಆರೋಪವನ್ನು ಮಾಡುವುದಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಸ್ಪಷ್ಟಪಡಿಸಿದರು. `ಭೀಮಣ್ಣ ನಾಯ್ಕ ಅವರ ಮಾತನ್ನು ಅರಣ್ಯ ಸಿಬ್ಬಂದಿ ಸಹ ಕೇಳುತ್ತಿಲ್ಲ. ರೈತರ ತೋಟ ನಾಶ ಮಾಡಿದರೂ ಅದಕ್ಕೆ ಭೀಮಣ್ಣ ನಾಯ್ಕ ಅವರು ಕ್ರಮ ಜರುಗಿಸಿಲ್ಲ. ಅಧಿಕಾರಿಗಳ ಮೇಲಿನ ಹಿಡಿತವನ್ನು ಶಾಸಕರು ಕಳೆದುಕೊಂಡಿದ್ದಾರೆ’ ಎಂದರು. `ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಬೇಡ್ತಿ ಯೋಜನೆ ಬಗ್ಗೆ ಮಾತನಾಡಿದರೂ, ಪಕ್ಕದಲ್ಲಿದ್ದ ಭೀಮಣ್ಣ ನಾಯ್ಕ ಅದನ್ನು ವಿರೋಧಿಸಲಿಲ್ಲ’ ಎಂದು ಕುಟುಕಿದರು.