`ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ನಕಲಿ ವೈದ್ಯರ ನೇಮಕ ಮಾಡಿದ್ದರೆ ಅಂಥವುಗಳನ್ನು ಪತ್ತೆ ಮಾಡಿ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಿ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ ನೊಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆ ನಡೆಸಿದ ಅವರು `ಖಾಸಗಿ ನರ್ಸಿಂಗ್ ಕೇಂದ್ರಗಳು ತಮ್ಮಲ್ಲಿ ನೇಮಕ ಮಾಡಿಕೊಳ್ಳುವ ವೈದ್ಯರ ನೈಜ ದಾಖಲೆಗಳನ್ನು ಪರಿಶೀಲಿಸದೇ ನಕಲಿ ವೈದ್ಯರು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಲ್ಲಿ ಅಂತಹ ಸಂಸ್ಥೆಗಳ ವಿರುದ್ಧ ಮೊದಲ ಬಾರಿಗೆ ನಿಯಮಾನುಸಾರ ದಂಢ ವಿಧಿಸಬೇಕು. ಪುನ: ಅಂಥವು ಮುಂದುವರೆದಲ್ಲಿ ದಂಡ ಮತ್ತು ಜೈಲುಶಿಕ್ಷೆ ವಿಧಿಸುವುದಕ್ಕಾಗಿ ಪ್ರಕರಣ ದಾಖಲು ಮಾಡಬೇಕು’ ಎಂದು ಸೂಚಿಸಿದರು.
ನಕಲಿ ವೈದ್ಯರ ವಿರುದ್ದ ಕೂಡಾ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು `ಒಮ್ಮೆ ಪತ್ತೆಯಾದ ನಕಲಿ ವೈದ್ಯರು ನಂತರದಲ್ಲಿ ತಮ್ಮ ಕೇಂದ್ರದ ಹೆಸರು ಮತ್ತು ವಿಳಾಸ ಬದಲಿಸಿಕೊಂಡು ಜಿಲ್ಲೆಯ ಇತರೇ ಭಾಗದಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಅಧಿಕವಾಗಿದೆ. ಈ ಬಗ್ಗೆ ವ್ಯಾಪಕ ತಪಾಸಣೆಗಳನ್ನು ಕೈಗೊಂಡು, ಜಿಲ್ಲೆಯಲ್ಲಿ ನಕಲಿ ವೈದ್ಯರು ಕಂಡು ಬಾರದಂತೆ ಎಚ್ಚರವವಹಿಸಬೇಕು’ ಎಂದು ನಿರ್ದೇಶನ ನೀಡಿದರು. `ಪ್ರಸ್ತುತ ಜಿಲ್ಲೆಯಲ್ಲಿ ನೊಂದಣಿಯಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನವೀಕರಣ ಮಾಡುವ ಸಂದರ್ಭದಲ್ಲಿ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸುವಂತೆ ಮತ್ತು ಹೊಸದಾಗಿ ಅನುಮತಿ ಕೋರುವ ಸಂಸ್ಥೆಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಎಲ್ಲಾ ಷರತ್ತುಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡು ಅನುಮತಿಯನ್ನು ನೀಡಬೇಕು’ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ನೀರಜ್ ಬಿ ವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ ಪ್ರವೀಣ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಅಶ್ವಿನಿ ಬೋರ್ಕರ್, ಐಎಂಎ ಅಧ್ಯಕ್ಷ ಡಾ ಸುರೇಶ್ ಭಟ್, ಮಹಿಳಾ ಸಾಮಾಜಿಕ ಕಾರ್ಯಕರ್ತೆ ಯಶೋಧಾ ಹೆಗಡೆ ಹಾಗೂ ಆರೋಗ್ಯ ಇಲಾಖೆಯ ವಿವಿಧ ತಾಲೂಕುಗಳ ವೈದ್ಯರು ಉಪಸ್ಥಿತರಿದ್ದರು.