ರಫೀಕ್ ನೀಡಿದ ಕಾಟ ವಿರೋಧಿಸಿದ ಕಾರಣ ಕೊಲೆಯಾದ ರಂಜಿತಾ ಕುಟುಂಬಕ್ಕೆ ಬಿಜೆಪಿ 5 ಲಕ್ಷ ರೂ ಪರಿಹಾರ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರವೂ ಸಂತ್ರಸ್ತ ಕುಟುಂಬಕ್ಕೆ 8.25 ಲಕ್ಷ ರೂ ನೆರವು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಭಾನುವಾರ ಯಲ್ಲಾಪುರಕ್ಕೆ ಆಗಮಿಸಿದ್ದಾರೆ. ರಂಜಿತಾ ಅವರ ಮನೆಗೆ ಭೇಟಿ ನೀಡಿದ ಅವರು ಪಕ್ಷದ ನಿಧಿಯಿಂದ ಹಣಕಾಸು ಸಹಾಯ ಮಾಡಿದ್ದಾರೆ. ನಂತರ ಮಾತನಾಡಿದ ಅವರು `ಸಂತ್ರಸ್ತ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕು. ಜೊತೆಗೆ 2 ಎಕರೆ ಕೃಷಿ ಭೂಮಿ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ. `ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಸಚಿವರು ಸಿದ್ಧ ಉತ್ತರ ಕೊಡಲು ಮಾತ್ರ ಸೀಮಿತರಾಗಿದ್ದಾರೆ. ತನಿಖೆಗೂ ಪೂರ್ವದಲ್ಲಿಯೇ ಲವ್ ಜಿಹಾದ್ ಅಲ್ಲ ಎಂದು ಆಡಳಿತ ಪಕ್ಷ ಹೇಳುತ್ತಿದ್ದು, ಹಿಂದು ಮಹಿಳೆಯ ಪರ ಧ್ವನಿ ಎತ್ತುವ ಬಿಜೆಪಿಯನ್ನು ಕೋಮುವಾದಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು.
ಸಂತ್ರಸ್ತ ಕುಟುಂಬಕ್ಕೆ ಸರ್ಕಾರದ ಪರವಾಗಿ ಶಾಸಕ ಶಿವರಾಮ ಹೆಬ್ಬಾರ್ 8.25 ಲಕ್ಷ ರೂ ಪರಿಹಾರ ವಿತರಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಈ ಹಣ ನೀಡಲಾಗಿದ್ದು, ಕುಟುಂಬದವರಿಗೂ ಅವರು ಧೈರ್ಯ ಹೇಳಿದ್ದಾರೆ. `ದಲಿತ ಮಹಿಳೆ ಹತ್ಯೆ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವ ಹಾಗಾಗಿದೆ. ಇಂಥ ಕೃತ್ಯ ಎಂದಿಗೂ ಮರುಕಳಿಸಬಾರದು’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೋಲಿಸ್ ಅಧಿಕಾರ ದೀಪನ್ ಎಂ ಎನ್, ಶಿರಸಿ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ ಇನ್ನಿತರರು ಸರ್ಕಾರಿ ನೆರವು ನೀಡುವ ವೇಳೆ ಇದ್ದರು.