ಶಿರಸಿಯ ಉಮೇಶ ನಾಯ್ಕ ಅವರ ಮಾಲಿಕತ್ವದ ತೋಟಕ್ಕೆ ಕಳೆ ಹೊಡೆಯಲು ಹೊರಟಿದ್ದ ರಾಘವೇಂದ್ರ ಪೂಜಾರಿ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಪಂಡೀತ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಟಿ ಎಸ್ ಎಸ್ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ.
ಶಿರಸಿಯ ಹುಲೆಕಲ್ ಬಳಿಯ ಬೆಳ್ಳದ್ದದಲ್ಲಿ ರಾಘವೇಂದ್ರ ಸೀನಾ ಪೂಜಾರಿ (43) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಬೇರೆ ಬೇರೆ ಊರುಗಳಿಗೆ ಸಂಚರಿಸಿ ನಿತ್ಯದ ದುಡಿಮೆ ಮಾಡುತ್ತಿದ್ದರು. ಅದರಂತೆ ಜನವರಿ 3ರಂದು ಉಮೇಶ ನಾಯ್ಕ ಅವರ ಹೊಲಕ್ಕೆ ಕಳೆ ಹೊಡೆಯಲು ಅವರು ಬೈಕ್ ಮೇಲೆ ಹೊರಟಿದ್ದರು. ಸೋಂದಾ ಪಂಚಾಯತ ವ್ಯಾಪ್ತಿಯ ಬೆಳ್ಳದ್ದ ಕರ್ಕೊಳ್ಳಿ ಕಚ್ಚಾ ರಸ್ತೆಯ ಕಡೆಗುಂಟಾ ಮಾರ್ಗವಾಗಿ ರಾಘವೇಂದ್ರ ಪೂಜಾರಿ ಅವರು ಸಂಚರಿಸುತ್ತಿದ್ದರು.
ಬಹುಬೇಗ ಕೆಲಸದ ಸ್ಥಳ ಸೇರಬೇಕು ಎಂಬ ನಿಟ್ಟಿನಲ್ಲಿ ರಾಘವೇಂದ್ರ ಪೂಜಾರಿ ಅವರು ವೇಗವಾಗಿ ಬೈಕ್ ಓಡಿಸಿದ್ದು, ಆ ಬೈಕ್ ನಿಯಂತ್ರಣ ತಪ್ಪಿತು. ಪರಿಣಾಮ ರಾಘವೇಂದ್ರ ಪೂಜಾರಿ ಅವರಿದ್ದ ಬೈಕು ಅಲ್ಲಿದ್ದ ಅನೇಕ ಮರಗಳಿಗೆ ಬಡಿಯಿತು. ಇದರಿಂದ ರಾಘವೇಂದ್ರ ಪೂಜಾರಿ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಅಪಘಾತ ನೋಡಿದ ಜನ ಅವರನ್ನು ಪಂಡೀತ್ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದರು. ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಘವೇಂದ್ರ ಪೂಜಾರಿ ಅವರನ್ನು ಟಿ ಎಸ್ ಎಸ್ ಆಸ್ಪತ್ರೆಗೆ ಕರೆತರಲಾಯಿತು.
ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದರು. ರಾಘವೇಂದ್ರ ಪೂಜಾರಿ ಅವರ ಸಹೋದರ ಸತೀಶ ಪೂಜಾರಿ ಅವರು ಈ ವಿಷಯ ವಿವರಿಸಿದರು.
`ಸಂಚಾರಿ ನಿಯಮ ಪಾಲಿಸಿ. ಸುರಕ್ಷಿತವಾಗಿ ವಾಹನ ಓಡಿಸಿ’