ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕುಮಟಾ ಶಾಸಕ ದಿನಕರ ಶೆಟ್ಟಿ ಗಂಭೀರ ಸಭೆ ನಡೆಸಿದ್ದು, ಆ ಸಭೆಗೆ ಹಾಜರಾಗಿದ್ದ ಕೆಲ ಅಧಿಕಾರಿಗಳು ನಿದ್ದೆ ಮಾಡಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಸಭೆಯಲ್ಲಿ ಆಕಳಿಸುತ್ತಿದ್ದು, ಬಹುತೇಕ ಅಧಿಕಾರಿಗಳು ಮೊಬೈಲ್ ಮಾಯೆಯೊಳಗೆ ಮಗ್ನರಾಗಿರುವುದು ಕಾಣಿಸಿತು.
ಕುಮಟಾದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಮಂಗಳವಾರ ಶಾಸಕ ದಿನಕರ ಶೆಟ್ಟಿ ಅಧಿಕಾರಿಗಳ ಸಭೆ ನಡೆಸಿದರು. ಈ ತ್ರೈಮಾಸಿಕ ಸಭೆಗೆ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಆಗಮಿಸಿದ್ದರು. ಹೀಗಾಗಿ ಸಭೆ ಶುರುವಾಗುತ್ತಲೇ ಆಕಳಿಕೆ ಶಬ್ದ ಕೇಳಿದ್ದು, ಕೆಲ ಸಮಯದ ನಂತರ ಗೊರಕೆ ಸದ್ದು ಸಹ ಶುರುವಾಯಿತು. ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ಗಾಡವಾದ ನಿದ್ದೆಗೆ ಹೋಗಿದ್ದರು. ಅವರ ಕೈಯಲ್ಲಿದ್ದ ಫೈಲು-ಪೆನ್ನು ಒಮ್ಮೆ ಜಾರಿದ್ದು, ಅದನ್ನು ಸರಿಪಡಿಸಿಕೊಂಡು ಮತ್ತೆ ನಿದ್ದೆಗೆ ಜಾರಿದರು. ಅವರ ಹಿಂದಿನ ಸಾಲಿನಲ್ಲಿದ್ದ ಅಧಿಕಾರಿಯೂ ಸಹ ನಿದ್ದೆಯ ಮಂಪರಿನಲ್ಲಿದ್ದರು. ಅವರನ್ನು ನೋಡಿದ ಇನ್ನಷ್ಟು ಅಧಿಕಾರಿಗಳು ಸಭೆಯ ಬಗ್ಗೆ ಗಮನಹರಿಸಿದೇ ತಮ್ಮ ಪಾಡಿಗೆ ತಾವಿದ್ದರು. ತಾವು ಪ್ರತಿನಿಧಿಸುವ ಇಲಾಖೆ ವಿಷಯ ಬಂದಾಗ ಮಾತ್ರ ನಿದ್ದೆಯಲ್ಲಿದ್ದ ಅಧಿಕಾರಿಗಳು ಎಚ್ಚರವಾಗಿ ಮಾತನಾಡಿದ್ದು, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾರ್ಯಗತವಾಗಬೇಕಾದ ವಿಷಯಗಳು ಗಾಳಿಯಲ್ಲಿ ಹಾರಿ ಹೋದವು.
ಅಕ್ರಮ ಮದ್ಯ ಮಾರಾಟ ಸೇರಿ ಇನ್ನಿತರ ಕಾರ್ಯಾಚರಣೆ ನಡೆಸುವ ಹೊಣೆಹೊತ್ತಿದ್ದ ಅಬಕಾರಿ ಇಲಾಖೆ ಇನ್ಸಪೆಕ್ಟರ್ ಜ್ಯೋತಿಶ್ರೀ ಅವರು ಸಭೆಗೆ ಆಗಮಿಸಿದ ಕೆಲವೇ ಕ್ಷಣದಲ್ಲಿ ನಿದ್ದೆಗೆ ಜಾರಿದರು. ಅಕ್ಕಪಕ್ಕದಲ್ಲಿದ್ದವರು ಎರಡು ಬಾರಿ ಅವರನ್ನು ಎಬ್ಬಿಸಿದರೂ ಸಹ ಕೆಲ ಸಮಯ ಕಣ್ಣು ತೆರೆದ ಅವರು ಮತ್ತೆ ಕಣ್ಮುಚ್ಚಿ ಧೀರ್ಘವಾದ ಉಸಿರಾಟ ನಡೆಸಿದರು. ಹಿಂದಿನ ಸಾಲಿನಲ್ಲಿ ಕೂತಿದ್ದ ಹಿಂದುಳಿದ ವರ್ಗಗಳ ಇಲಾಖೆಯ ಗಜಾನನ ಭಟ್ಟ ಅವರು ಸಭೆಗೆ ಬರುವಾಗ ಆಕಳಿಸುತ್ತಿದ್ದು, ಸಭೆಯಲ್ಲಿ ಕಣ್ಮುಚ್ಚಿ ಕುಳಿತಿದ್ದರು. ಅದೇ ಸಾಲಿನಲ್ಲಿದ್ದ ಮತ್ತಿಬ್ಬರು ಅಧಿಕಾರಿಗಳು ಪದೇ ಪದೇ ಮೊಬೈಲ್ ನೋಡುತ್ತಿರುವುದು ಕಾಣಿಸಿತು. ಒತ್ತಡದಿಂದ ಕೆಲಸ ಮಾಡುವ ಅಧಿಕಾರಿಗಳು ಆಯಾಸವಾಗಿ ನಿದ್ರೆಗೆ ಜಾರಿದರೂ ಶಾಸಕ ದಿನಕರ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಿಲ್ಲ. ಸಭೆಯ ಶಿಸ್ತು ಕಾಪಾಡದ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಅವರು ಸಹ ಅಸಮಧಾನಹೊರಹಾಕಲಿಲ್ಲ. ವೇದಿಕೆಯಲ್ಲಿದ್ದ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಭಟ್ಟ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಾ.ಪಂ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ್ ಸಹ ಈ ವಿಷಯ ನೋಡಿಯೂ ಸುಮ್ಮನಿದ್ದರು.
`ಕರಾವಳಿ ಭಾಗದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಸಮಗ್ರ ಅಧ್ಯಯನ ಅಗತ್ಯ’ ಎಂದು ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಸೂಚಿಸಿದರು. `ಈ ಬಗ್ಗೆ ತಜ್ಷರಿಂದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ’ ಎಂದು ದಿನಕರ ಶೆಟ್ಟಿ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಡಯಾಲಿಸೀಸ್ ಮಾಡಿಸಿಕೊಳ್ಳಲು ಬರುವವರ ಅಂಕಿ-ಸAಖ್ಯೆ ಪರಿಶೀಲನೆ ಮಾಡಿದ ಅವರು ಆಸ್ಪತ್ರೆಯ ಆಡಳಿತಾಧಿಕಾರಿ ಗಣೇಶ ನಾಯ್ಕ ಅವರಿಂದ ಇನ್ನಷ್ಟು ಮಾಹಿತಿಪಡೆದರು. `ಹೃದಯ ರೋಗ ಸಮಸ್ಯೆ ಸಹ ಕರಾವಳಿ ಭಾಗದಲ್ಲಿ ಹೆಚ್ಚಾಗಿದೆ’ ಎಂದು ಗಣೇಶ ನಾಯ್ಕ ಅವರು ಮಾಹಿತಿ ನೀಡಿದರು. ಪಶು ಸಿಬ್ಬಂದಿ ಕೊರತೆ, ಕೆಎಸ್ಆರ್ಟಿಸಿ ಓಡಿಸುವ ಡಕೋಟಾ ಬಸ್ಸು, ಬೆಂಗಳೂರಿನಿoದ ಬರುವ ಖಾಸಗಿ ಬಸ್ಸುಗಳಲ್ಲಿ ಲಗೇಜ್ ಭರ್ತಿ ಮಾಡುವಿಕೆ, ಮನೆ ಮನೆಗೆ ವಿದ್ಯುತ್ ಸಂಪರ್ಕ, ಅರಣ್ಯ, ಕೃಷಿ, ಲೋಕೋಪಯೋಗಿ, ತೋಟಗಾರಿಕೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.