ಕುಮಟಾ ಲುಕ್ಕೇರಿಯ ಗಣಪತಿ ಅಂಬಿಗ ಅವರ ಕುಟುಂಬದವರು ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಆ ಬಹಿಷ್ಕಾರದ ಬಿಸಿಯಿಂದ ನೊಂದ ಗಣಪತಿ ಅಂಬಿಗ ಅವರು ನ್ಯಾಯಕ್ಕಾಗಿ ಸರ್ಕಾರದ ಮೊರೆ ಹೋಗಿದ್ದಾರೆ.
ಕುಮಟಾದ ಲುಕ್ಕೇರಿ ಗ್ರಾಮದಲ್ಲಿ ಮೀನುಗಾರ ಅಂಬಿಗ ಸಮಾಜದ 76 ಮನೆಗಳಿವೆ. ಆ ಊರಿನಲ್ಲಿ ಎಲ್ಲರೂ ಪರಸ್ಪರ ಸಹಕಾರದಿಂದ ಜೀವನ ನಡೆಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಹೋಳಿ ಹಬ್ಬದ ಅವಧಿಯಲ್ಲಿ ನಡೆದ ವಿದ್ಯಮಾನವೊಂದು ಗಣಪತಿ ಅಂಬಿಗ ಅವರ ಕುಟುಂಬಕ್ಕೆ ಸಮಸ್ಯೆ ಮಾಡಿಕೊಟ್ಟಿದೆ. ಗಣಪತಿ ಅಂಬಿಗ ಅವರ ಮನೆ ಮುಂದಿನ ಜಮೀನಿನಲ್ಲಿ ಇನ್ನಿತರ ಕೆಲ ಮನೆಯವರ ಶೌಚಾಲಯದ ಪೈಪ್ ಹಾದು ಹೋಗಿದ್ದು, ಆ ಪೈಪ್ ಒಡೆದ ಬಗ್ಗೆ ಧ್ವನಿ ಎತ್ತಿರುವುದೇ ಗಣಪತಿ ಅಂಬಿಗ ಅವರ ಕುಟುಂಬದವರ ಬಹಿಷ್ಕಾರಕ್ಕೆ ಮೂಲ ಕಾರಣ.
`ಪೈಪ್ ಲೈನ್ ಒಡೆದು ದುರ್ವಾಸನೆ ಬರುತ್ತಿದ್ದು, ಅದನ್ನು ತೆರವು ಮಾಡಿ’ ಎಂದು ಗಣಪತಿ ಅಂಬಿಗ ಅವರು ಗ್ರಾಮ ಪಂಚಾಯತಗೆ ಮನವಿ ನೀಡಿದ್ದಾರೆ. ಅದನ್ನು ಸಹಿಸದ ಕೆಲವರು `ಗಣಪತಿ ಅಂಬಿಗ ಅವರ ಮಗನ ನಡತೆ ಸರಿಯಿಲ್ಲ’ ಎಂದು ಊರಿನಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಅವರ ಮಗ ಕೇಶವ ಅಂಬಿಗ ಅವರ ಮದುವೆಗೂ ಕಲ್ಲು ಹೊಡೆದಿದ್ದಾರೆ. ಜೊತೆಗೆ ಕೆಲ ಮುಖಂಡರೇ ಗಣಪತಿ ಅಂಬಿಗ ಅವರಿಗೆ ಬಹಿಷ್ಕಾರ ಹಾಕಿದ್ದು, `ತಾವು ಹೇಳಿದ ಹಾಗೇ ಕೇಳಿದರೆ ಮಾತ್ರ ಬಹಿಷ್ಕಾರ ಹಿಂಪಡೆಯುತ್ತೇವೆ’ ಎಂದು ಬೆದರಿಸಿದ್ದಾರೆ.
ಗಣಪತಿ ಅಂಬಿಗ ಅವರ ದೂರಿನ ಪ್ರಕಾರ, ಅವರ ಕುಟುಂಬದವರ ಬಳಿ ಯಾರೂ ಮಾತನಾಡುವ ಹಾಗಿಲ್ಲ. ಮಾತನಾಡಿದರೆ ಅಂಥವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಮುಖಂಡರು ಹೇಳಿದ್ದಾರೆ. ಬಹಿಷ್ಕಾರ ಹಿಂಪಡೆಯಬೇಕು ಎಂದಾದರೆ ಗಣಪತಿ ಅಂಬಿಗ ಅವರು ಎಲ್ಲಾ ಮನೆಗಳಿಗೂ ತೆಂಗಿನ ಕಾಯಿ ಹೋಳು ಹಂಚಬೇಕು ಎಂದು ತಾಕೀತು ಮಾಡಿದ ಬಗ್ಗೆ ಆರೋಪಿಸಲಾಗಿದೆ. ಊರಿನ ಮುಖಂಡರ ಬೆದರಿಕೆ ಭಯದಿಂದ ಗಣಪತಿ ಅಂಬಿಗ ಅವರ ಕುಟುಂಬದವರನ್ನು ಊರಿನ ಜನ ದೂರವಿಟ್ಟಿದ್ದಾರೆ.
ಅಧಿಕಾರಿಗಳ ವಿರುದ್ಧ ಆಕ್ಷೇಪ:
ಗಣಪತಿ ಅಂಬಿಗ ಅವರು ತಮಗಾದ ಅನ್ಯಾಯದ ಬಗ್ಗೆ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಅಧಿಕಾರಿಗಳು ಸಹ ಮುಖಂಡರ ಮಾತನ್ನೇ ಪುನರುಚ್ಚರಿಸಿದ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ದೂರಿದ್ದಾರೆ. ಕೇಶವ ಅಂಬಿಗ ಅವರ ಮನೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಭೇಟಿ ನೀಡಿ ಸಮಸ್ಯೆ ಆಲಿಸಿದ್ದು, ಈ ಬಗ್ಗೆ ಮಾನವ ಹಕ್ಕು ಆಯೋಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ. `ಸುಗ್ಗಿ ಕಾರ್ಯಕ್ರಮದ ಅವಧಿಯಲ್ಲಿ ಆದ ಜಗಳದಿಂದ ಕುಟುಂಬವೊoದು ಬಹಿಷ್ಕಾರಕ್ಕೆ ಒಳಗಾಗಿದೆ. ಆ ಕುಟುಂಬದವರು ಸಾರ್ವಜನಿಕ ಬಾವಿಯ ನೀರು ಬಳಸಬಾರದು. ಆ ಮಕ್ಕಳು ಶಾಲೆಯಲ್ಲಿಯೂ ಇನ್ನಿತರ ಮಕ್ಕಳ ಜೊತೆ ಬೆರೆಯಬಾರದು’ ಎಂದು ಫಾರ್ಮಾನು ಹೊರಡಿಸಿದ ಬಗ್ಗೆ ದೂರಲಾಗಿದೆ.
`ಬಹಿಷ್ಕಾರ ತೆಗೆಯಬೇಕಾದರೆ 50 ಸಾವಿರ ರೂ ದಂಡದ ಜೊತೆ ಎಲ್ಲಾ ಮನೆಗಳಿಗೂ ತೆಂಗಿನ ಕಾಯಿ ಹಂಚುವAತೆ ತಾಕೀತು ಮಾಡಲಾಗಿದ್ದು, ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಹಾಗೂ ಪಿಐ ಯೋಗೇಶ್ ಅವರು ಮನೆಗೆ ಬಂದು ಮಾತುಕಥೆ ಮಾಡಿದ್ದಾರೆ. ಆದರೆ, ಅವರು ಸಹ ತೆಂಗಿನಕಾಯಿ ಚೂರು ಹಂಚಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಆಗ್ನೇಲ್ ರೋಡಿಗ್ರಿಸ್ ಅವರು ವಿವರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ್ ನಾಯ್ಕ್, ನಿವೃತ್ತ ಸರಕಾರಿ ಅಧಿಕಾರಿ ನಾಗೇಶ್, ಹನುಮು ಪಟಗಾರ, ಗಣಪತಿ ಪಟಗಾರ, ಸಂಜಯ ಬಾಡ್ಕರ, ಸ್ಟೈಫನ್ ನರೋನ, ಈಶ್ವರ ನಾಯ್ಕ, ತಿಮ್ಮು ಗೌಡ, ಸುಬ್ಬಿ ಅಂಬಿಗ ಅವರು ಈ ವೇಳೆ ಇದ್ದರು.