ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಂಡ ಚಂದ್ರಶೇಖರ ಹಸ್ಲೇರ್ ಅವರಿಗೆ ವಾರ್ಷಿಕ 5 ಲಕ್ಷ ರೂ ಆದಾಯವೇ ಇರಲಿಲ್ಲ. ಅದಾಗಿಯೂ ಅವರು ವರ್ಷಕ್ಕೆ 5 ಲಕ್ಷ ರೂ ಕಂತು ಪಾವತಿಯ ಒಂದುವರೆ ಕೋಟಿ ರೂ ಮೌಲ್ಯದ ಜೀವ ವಿಮೆಗೆ ಪ್ರಯತ್ನಿಸಿದ್ದು, ಅದಾಗಿ ವರ್ಷದೊಳಗೆ ಅವರು ವಿಚಿತ್ರವಾಗಿ ಸಾವನಪ್ಪಿದ್ದಾರೆ!
ಸಿದ್ದಾಪುರದ ಕುಡಗುಂದ ಬಳಿಯ ಆಲವಳ್ಳಿಯಲ್ಲಿ ವೀರಭದ್ರ ಹಸ್ಲೇರ್ ಅವರು ವಾಸವಾಗಿದ್ದಾರೆ. ವೀರಭದ್ರ ಹಸ್ಲೇರ್ ಅವರಿಗೆ ಮಂಜುನಾಥ ಹಸ್ಲೇರ್, ಚಂದ್ರಶೇಖರ ಹಸ್ಲೇರ್ ಹಾಗೂ ಉಮೇಶ ಹಸ್ಲರ್ ಎಂಬ ಮೂವರು ಮಕ್ಕಳು. ಈ ಪೈಕಿ ಉಮೇಶ ಹಸ್ಲರ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮಂಜುನಾಥ ಹಸ್ಲೇರ್ ಹಾಗೂ ಚಂದ್ರಶೇಖರ ಹಸ್ಲೇರ್ ಅವರು ಮೀನು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಆ ಕುಟುಂಬದಲ್ಲಿ ವೀರಭದ್ರ ಹಸ್ಲೇರ್ ಅವರ ಪತ್ನಿ ಸಾವಿತ್ರಿ ಹಸ್ಲರ್, ಮಗಳು ಅಕ್ಕಮ್ಮ ಹಸ್ಲೇರ್, ಮಂಜುನಾಥ ಹಸ್ಲರ್ ಅವರ ಪತ್ನಿ ಮಹಾಲಕ್ಷಿ ಹಸ್ಲೇರ್ ಹಾಗೂ ಮಗು ಮೋಕ್ಷಿತ ಹಸ್ಲೇರ್ ವಾಸವಾಗಿದ್ದರು. ಜನವರಿ 7ರ ನಸುಕಿನಲ್ಲಿ ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ನಡೆದ ಕಾರು ಅಪಘಾತದಲ್ಲಿ ಮಂಜುನಾಥ ಹಸ್ಲೇರ್ ಹಾಗೂ ಚಂದ್ರಶೇಖರ ಹಸ್ಲೇರ್ ಸುಟ್ಟು ಕರಕಲಾಗಿದ್ದಾರೆ.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಖಲಾದ ಪ್ರಕರಣದಲ್ಲಿ ಪ್ರಮೋದ ನಾಯ್ಕ ಅವರ ಬೈಕುಪಡೆದು ಹೋಗಿದ್ದ ಚಂದ್ರಶೇಖರ ಹಸ್ಲೇರ್ ಅವರು ಪ್ರಮೋದ ನಾಯ್ಕ ಅವರ ಮಧ್ಯಸ್ಥಿಕೆಯಲ್ಲಿಯೇ ಉದಯ ಮಡಿವಾಳ ಅವರ ಕಾರು ಖರೀದಿಸಿದ ಉಲ್ಲೇಖವಿದೆ. ಸಿದ್ದಾಪುರ ಚಂದ್ರಘಟಕಿಯ ಪ್ರಮೋದ ನಾಯ್ಕ ಅವರು ವಿಮಾ ಪ್ರತಿನಿಧಿಯಾಗಿದ್ದು, ಚಂದ್ರಶೇಖರ ಹಸ್ಲೇರ್ ಅವರ ಹೆಸರಿನಲ್ಲಿ ಜೀವ ವಿಮೆ ಮಾಡಿಸಲು ನಾನಾ ಕಡೆ ಓಡಾಟ ಮಾಡಿರುವ ಸಂಗತಿ ಹೊರಬಿದ್ದಿದೆ. ವಿಮಾ ಕಂಪನಿಯೊoದರ ಎಜೆಂಟ್ ಆಗಲು ಅರ್ಜಿ ಸಲ್ಲಿಸಿದ್ದ ಪ್ರಮೋದ ನಾಯ್ಕ ಅವರು ತಾವು ಕೆಲಸಕ್ಕೆ ಸೇರಿದ ದಿನವೇ 5 ಲಕ್ಷ ರೂ ವಿಮಾ ಕಂತಿನ ಪಾಲಿಸಿ ತಂದಿದ್ದರು. ಸಾಮಾನ್ಯವಾಗಿ ಕಂಪನಿಗೆ ಸೇರಿದ ಹೊಸತರಲ್ಲಿ ಎಜೆಂಟರು 10-20 ಸಾವಿರ ರೂ ಕಂತಿನ ಪಾಲಿಸಿ ತರುತ್ತಿದ್ದು, ಪ್ರಮೋದ ನಾಯ್ಕ ಅವರು 5 ಲಕ್ಷ ರೂ ವಿಮಾ ಕಂತಿನ ಪಾಲಿಸಿ ತಂದ ಕಾರಣ ಕಂಪನಿ ಪ್ರತಿನಿಧಿಗಳು ಹುಬ್ಬೇರಿಸಿದ್ದರು.
ಆ ಬಗ್ಗೆ ವಿಮಾ ಕಂಪನಿಯವರು ವಿಚಾರಣೆ ನಡೆಸಿದಾಗ ವಿಮೆಗಾಗಿ ಅರ್ಜಿ ಸಲ್ಲಿಸಿದ ಚಂದ್ರಶೇಖರ್ ಹಸ್ಲೇರ್ ಅವರು ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವುದು ಗೊತ್ತಾಗಿತ್ತು. 5 ಲಕ್ಷ ರೂ ಆದಾಯವೇ ಇಲ್ಲದ ವ್ಯಕ್ತಿ 5 ಲಕ್ಷ ರೂ ವಿಮಾ ಕಂತು ಪಾವತಿ ಮಾಡಲು ಬಂದಿದನ್ನು ನೋಡಿ ಕಂಪನಿಯವರು ಆ ಅರ್ಜಿಯನ್ನು ತಿರಸ್ಕರಿಸಿದ್ದರು. ವಿಮೆ ಕೋರಿ ಕಂಪನಿಗೆ ಶೇ 50ರಷ್ಟು ಹಣ ಪಾವತಿ ಆಗಿದ್ದರೂ ಅದನ್ನು ಕಂಪನಿಯವರು ಹಿಂತಿರುಗಿಸಿದ್ದರು. ತಮ್ಮ ಮೂಲಕ ಬಂದ ವಿಮಾ ಅರ್ಜಿ ತಿರಸ್ಕಾರವಾಗಿರುವ ಬಗ್ಗೆ ಪ್ರಮೋದ ನಾಯ್ಕ ಅವರು ತಕರಾರು ಸಲ್ಲಿಸಿದ್ದರು. `ನೀವು ವಿಮೆ ಕೊಡದಿದ್ದರೆ ಬೇರೆ ಕಂಪನಿಯಲ್ಲಿ ಮಾಡಿಸುವೆ’ ಎಂದು ಸವಾಲು ಹಾಕಿದ್ದರು. ಅದಾದ ನಂತರ ಚಂದ್ರಶೇಖರ್ ಹಸ್ಲೇರ್ ಹೆಸರಿನಲ್ಲಿ ಮತ್ತೊಂದು ಕಂಪನಿ ವಿಮೆ ಮಾಡಿದ ಅನುಮಾನವಿದ್ದು, ಅದು ತನಿಖೆಯಿಂದ ಗೊತ್ತಾಗಬೇಕಿದೆ.
ಈ ಎಲ್ಲದರ ನಡುವೆ ಹೊನ್ನಾವರದ ಸುಳೇಮರ್ಕಿ ತಿರುವಿನಲ್ಲಿ ನಡೆದ ಕಾರು ದುರಂತದಲ್ಲಿ ಸಿದ್ದಾಪುರದ ಚಂದ್ರಶೇಖರ ಹಸ್ಲೇರ್ (30) ಅವರ ಜೊತೆ ಅವರ ಅಣ್ಣ ಮಂಜುನಾಥ ಹಸ್ಲೇರ್ (35) ಸಹ ಸುಟ್ಟು ಕರಕಲಾಗಿದ್ದಾರೆ. ಸಿದ್ದಾಪುರದ ಕುಡಗುಂದ ಬಳಿಯ ಅಳವಳ್ಳಿ ತಮ್ಮ ಉಮೇಶ ಹಸ್ಲರ್ ಅವರು ನೀಡಿದ ದೂರಿನ ಪ್ರಕಾರ, ಜನವರಿ 6ರಂದು ಚಂದ್ರಶೇಖರ ಹಸ್ಲರ್ ಅವರು ತಾಳಗುಪ್ಪಾದಲ್ಲಿರುವ ಸಂಬoಧಿಕರ ಮನೆಯಲ್ಲಿದ್ದರು. ಆ ದಿನ ಬೆಳಗ್ಗೆ 7 ಗಂಟೆಗೆ ಪ್ರಮೋದ ನಾಯ್ಕ ಅವರ ಬೈಕುಪಡೆದು ಮಂಜುನಾಥ ಹಸ್ಲರ್ ಅವರು ಚಂದ್ರಶೇಖರ ಹಸ್ಲೇರ್ ಅವರನ್ನು ಮನೆಗೆ ಕರೆತಂದಿದ್ದರು. 10.30ಕ್ಕೆ ಮತ್ತೆ ಪ್ರಮೋದ ನಾಯ್ಕ ಅವರ ಬೈಕಿನಲ್ಲಿ ಶಿರಸಿಗೆ ಹೋಗುವುದಾಗಿ ಹೊರಟ ಅವರಿಬ್ಬರು ಮಧ್ಯಾಹ್ನ ಮನೆಗೆ ಮರಳಲಿಲ್ಲ. ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರು ಕುಮಟಾದ ಉದಯ ಮಡಿವಾಳ ಅವರ ಮಾರುತಿ ಜನ್ ಕಾರು ಖರೀದಿಸಿದ್ದು, ಅದಕ್ಕೆ ಸಹ ಪ್ರಮೋದ ನಾಯ್ಕ ಮಧ್ಯಸ್ಥಿಕೆವಹಿಸಿದ್ದರು. ಜನವರಿ 7ರ ನಸುಕಿನಲ್ಲಿ ಆ ಕಾರು ಸುಟ್ಟು ಕರಕಲಾಗಿದ್ದು ಹಾಗೂ ಅದರಲ್ಲಿ ಇಬ್ಬರು ಶವವಾಗಿರುವ ವಿಷಯವನ್ನು ಸಹ ಪ್ರಮೋದ ನಾಯ್ಕ ಅವರೇ ಉಮೇಶ ಹಸ್ಲರ್ ಅವರಿಗೆ ತಿಳಿಸಿದ್ದರು.
ಪ್ರಮೋದ ನಾಯ್ಕ ಅವರು ಉಮೇಶ ಹಸ್ಲರ್ ಅವರಿಗೆ ನೀಡಿದ ಮಾಹಿತಿ ಪ್ರಕಾರ, ಕಾರಿನ ಹಣ ಬಾಕಿ ಪಾವತಿ, ಕಾರು ವರ್ಗಾವಣೆ ಹಾಗೂ ಮೀನು ವ್ಯಾಪಾರ ವಿಷಯವಾಗಿ ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲೇರ್ ಅವರು ಹೊರಟಿದ್ದರು. ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಅವರು ಸುಟ್ಟು ಶವವಾದರು. ಈ ವಿಷಯ ಅರಿತು ಜನವರಿ 7ರಂದು ಬೆಳಗ್ಗೆ 8 ಗಂಟೆಗೆ ಸಿದ್ದಾಪುರ ಚಂದ್ರಘಟಕಿಯ ಪ್ರಮೋದ ನಾಯ್ಕ ಅವರು ಈ ವಿಷಯವನ್ನು ಉಮೇಶ ಹಸ್ಲರ್ ಅವರಿಗೆ ತಿಳಿಸಿದ್ದು, ಉಮೇಶ ಹಸ್ಲರ್ ಅವರು ತಂದೆ ವೀರಭದ್ರ ಹಸ್ಲರ್ ಊರಿನವರಾದ ನಾಗರಾಜ ಹಸ್ಲರ್, ಗಣಪತಿ ಹಸ್ಲರ್, ದಿನೇಶ ಹಸ್ಲರ್ ಜೊತೆ ಘಟನಾ ಸ್ಥಳಕ್ಕೆ ಹೋಗಿದ್ದರು. ನಸುಕಿನ 2-4 ಗಂಟೆ ಅವಧಿಯಲ್ಲಿ ಕಾರು ಅಪಘಾತಕ್ಕೀಡಾಗಿರುವುದನ್ನು ಅವರು ಅಂದಾಜಿಸಿದ್ದು, ಇನ್ನೂ ಬೆಳಕು ಹರಿಯದ ಆ ವೇಳೆಯಲ್ಲಿ ಅಣ್ಣ-ತಮ್ಮಂದಿರು ಹೋಗಿದ್ದೇಕೆ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.