ಸಣ್ಣಪುಟ್ಟ ಸಮಸ್ಯೆಗಳಿಗೂ ಜನರಿಂದ ಬೈಸಿಕೊಳ್ಳುವ ಗ್ರಾಮ ಪಂಚಾಯತ ಸದಸ್ಯರು ಆಡಳಿತ ವಿಷಯದಲ್ಲಿ ತಾವು ಅನುಭವಿಸುವ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಪ್ರತಿಭಟಿಸಿದ್ದಾರೆ. ಯಲ್ಲಾಪುರದ ಗಾಂಧೀ ಕುಟೀರದಲ್ಲಿ ಗಾಂಧೀಜಿ ಅವರ ಭಾವಚಿತ್ರದ ಮುಂದೆ ಗ್ರಾ ಪಂ ಪ್ರತಿನಿಧಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗ್ರಾಮ ಪಂಚಾಯತಗಳಿಗೆ ಅನುದಾನ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಅವರು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ. ಚುನಾಯತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಂ ಕೆ ಭಟ್ಟ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸಮಸ್ಯೆಗಳ ಪಟ್ಟಿ ರವಾನಿಸಿದ್ದು, ತುರ್ತು ಪರಿಶೀಲನೆಗಾಗಿ ಒತ್ತಾಯಿಸಿದ್ದಾರೆ.
`15ನೇ ಹಣಕಾಸನ್ನು ತರಿಸಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಬದಲಾವಣೆ ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ತಾ ಪಂ ಇಒ ರಾಜೇಶ ಧನವಾಡಕರ್ ಅವರ ಮೂಲಕ ಸರ್ಕಾರಕ್ಕೆ ಲಿಖಿತ ಪತ್ರವನ್ನು ಸಲ್ಲಿಸಿದ್ದಾರೆ. `ರಾಜ್ಯದ ಎಲ್ಲ ಪಂಚಾಯತಿಗಳಲ್ಲಿ 15ನೇ ಹಣಕಾಸು ಬರದೇ ಯಾವ ಕೆಲಸವೂ ನಡೆಯುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಿದ್ದು, ಕಟ್ಟುನಿಟ್ಟಾದ ನಿಯಮಗಳಿಂದ ಕೆಲಸ ಆಗುತ್ತಿಲ್ಲ’ ಎಂದವರು ವಿವರಿಸಿದ್ದಾರೆ.
`ಉದ್ಯೋಗ ಖಾತರಿ ಕಾಮಗಾರಿಯ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ಕೂಲಿ ಹಣವನ್ನು ಹೆಚ್ಚಿಸಬೇಕು. ಒಂದು ಎಕರೆ ಒಳಗಿನ ಭೂಮಿ ಹೊಂದಿದ ರೈತರಿಗೂ ಕೃಷಿ ಬಾವಿಯ ಸೌಲಭ್ಯ ನೀಡಬೇಕು. ಅತಿಕ್ರಮಣದಾರರಿಗೂ ವೈಯಕ್ತಿಕ ಸೌಲಭ್ಯ ದೊರೆಯುವಂತೆ ಆಗಬೇಕು. ಸಾರ್ವಜನಿಕ ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೆ ಅವಕಾಶ ನೀಡಬೇಕು. ಸಾರ್ವಜನಿಕ ಶೌಚಾಲಯಕ್ಕೆ ಅವಕಾಶವನ್ನು ನೀಡಬೇಕು. ಸಾರ್ವಜನಿಕ ಗೋಡಾನ್ ನಿರ್ಮಾಣ ಕಾಮಗಾರಿಗಳನ್ನು ವಿಶೇಷ ಕಾಮಗಾರಿಯಾಗಿ ಪರಿವರ್ತಿಸಬೇಕು. ಮೂರು ವರ್ಷದೊಳಗೆ ಕಾಮಗಾರಿ ಅನುಷ್ಠಾನ ಮಾಡಲು ಅವಕಾಶ ನೀಡಬೇಕು. ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ.40 ಅನುದಾನ ನೀಡುವ ನಿರ್ಧಾರ ಸರಿಯಲ್ಲ’ ಎಂಬ ವಿಷಯವನ್ನು ಗಮನಕ್ಕೆ ತಂದಿದ್ದಾರೆ.
ಪ್ರಮುಖರಾದ ಸುಬ್ಬಣ್ಣ ಕುಂಟೆಕುಳಿ, ಕೆ ಟಿ ಹೆಗಡೆ, ಗಜಾನನ ಭಟ್ಟ, ಸುಬ್ಬಣ್ಣ ಉದ್ದಾಬೈಲ, ರಾಮಕೃಷ್ಣ ಗಾಂವ್ಕರ, ಗಣೇಶ ಹೆಗಡೆ, ಪರಮೇಶ್ವರ ಗಾಂವ್ಕರ ಇತರರಿದ್ದರು.