ಸಿದ್ದಾಪುರದ ಸಹೋದರರಿಬ್ಬರು ಹೊನ್ನಾವರದಲ್ಲಿ ಭೀಕರ ಕಾರು ಅಪಘಾತದಲ್ಲಿ ಸಾವನಪ್ಪಿದ್ದು, ಆ ಸಾವಿನ ಬಗ್ಗೆ ಅನೇಕರು ಸಂಶಯವ್ಯಕ್ತಪಡಿಸಿದ್ದಾರೆ. ಸಾವಿನ ಸಮಗ್ರ ತನಿಖೆಗಾಗಿ ಕುಟುಂಬದವರ ಜೊತೆ ಹಸ್ಲರ ಕ್ಷೇಮಾಭಿವೃದ್ಧಿ ಸಂಘದವರು ಆಗ್ರಹಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಹಾಗೂ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಕೆಯಾಗಿದೆ. ಸಿದ್ದಾಪುರದ ವಾಜಗೋಡ ಪಂಚಾಯತ್ ಕುಡಗುಂದ ನಿವಾಸಿಗಳಾದ ಚಂದ್ರಶೇಖರ ವೀರಭದ್ರ ಹಸ್ಲರ ಹಾಗೂ ಅವರ ಸಹೋದರ ಮಂಜುನಾಥ ವೀರಭದ್ರ ಹಸ್ಲರ ಅವರು ಜನವರಿ 6ರಂದು ಶಿರಸಿಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಅಂದು ಮಧ್ಯಾಹ್ನ ಮಂಜುನಾಥ್ ಅವರು ತಮ್ಮ ಪತ್ನಿಗೆ ಕರೆ ಮಾಡಿ, ತಾವು ಸಿದ್ಧಾಪುರದಲ್ಲಿ ತಮ್ಮನಾದ ಚಂದ್ರಶೇಖರ ಹಾಗೂ ಚಂದ್ರಘಟಗಿಯ ಪ್ರಮೋದ ಎಂಬುವವರ ಜೊತೆ ಇರುವುದಾಗಿ ತಿಳಿಸಿದ್ದರು. ಆದರೆ ಅದಾದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂಬುದನ್ನು ಕುಟುಂಬದವರು ಹೇಳಿದ್ದಾರೆ.
`ಚಂದ್ರಶೇಖರ ಅವರಿಗೆ ಕಾಲಿಗೆ ಪೆಟ್ಟಾಗಿದ್ದರಿಂದ ಅವರಿಗೆ ಕಾರು ಚಲಾಯಿಸಲು ಸಾಧ್ಯವಿರಲಿಲ್ಲ. ಹಾಗಿದ್ದಲ್ಲಿ ಅಂದು ಕಾರು ಚಲಾಯಿಸುತ್ತಿದ್ದವರು ಯಾರು? ಇಬ್ಬರ ಶವಗಳು ಕಾರಿನ ಹಿಂಬದಿಯ ಸೀಟಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹೇಗೆ? ಅಪಘಾತವಾದರೆ ಚಾಲಕನ ಸೀಟಿನಲ್ಲಿ ಶವವಿರಬೇಕಿತ್ತಲ್ಲವೇ? ಅಂದು ಇವರ ಜೊತೆಗಿದ್ದ ಎನ್ನಲಾದ ಪ್ರಮೋದ ಎಂಬ ವ್ಯಕ್ತಿ ಈಗ ಎಲ್ಲಿ ಹೋದರು? ಘಟನಾ ಸ್ಥಳಕ್ಕೆ ಅವರು ಬಾರದಿರುವುದು ಮತ್ತು ಅವರ ಮೊಬೈಲ್ ಸಂಪರ್ಕಕ್ಕೆ ಸಿಗದಿರುವುದು ಹಲವು ಅನುಮಾನಕ್ಕೆ ಕಾರಣ’ ಎಂದು ವಿವರಿಸಿದ್ದಾರೆ.
ಇದನ್ನು ಓದಿ: ಆ ಕಾರಿನ ಸುತ್ತ ಅನುಮಾನದ ಹುತ್ತ!
ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರಕರ್ ಅವರು `ದಲಿತ ಕುಟುಂಬದ ಇಬ್ಬರ ಸಾವಾಗಿದ್ದು ದಲಿತರಿಗೆ ರಕ್ಷಣೆ ಇಲ್ಲದಾಗಿದೆ. ಶಿರಸಿಗೆ ಹೋಗಿ ಬರುವುದಾಗಿ ಹೇಳಿ ಹೋದ ಸಹೋದರರು ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಮಗ್ರ ತನಿಖೆ ಅಗತ್ಯ’ ಎಂದಿದ್ದಾರೆ. `ಪರಿಶಿಷ್ಟ ಜಾತಿಯ ಈ ಇಬ್ಬರು ಸಹೋದರರ ಸಾವು ಅಸಹಜವಾಗಿದ್ದು, ಇದರ ಹಿಂದೆ ದೊಡ್ಡ ಸಂಚು ಇರುವ ಸಾಧ್ಯತೆಯಿದೆ. ಆದ್ದರಿಂದ ಈ ಪ್ರಕರಣವನ್ನು ಕೇವಲ ಅಪಘಾತ ಎಂದು ಪರಿಗಣಿಸದೇ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು’ ಎಂದು ಹಸ್ಲರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವೆಂಕಟ್ರಮಣ ಹಸ್ಲರ್, ಅಧ್ಯಕ್ಷ ಮಂಜುನಾಥ್ ಕನ್ನ ಹಸ್ಲರ್, ಸಂದೇಶ್ ಹಸ್ಲರ್, ತಾಲೂಕಾ ಅಧ್ಯಕ್ಷ ಅಣ್ಣಪ್ಪ ಹಸ್ಲರ್, ಸಾಮಾಜಿಕ ಧುರೀಣರಾದ ವಸಂತ್ ನಾಯ್ಕ, ಮಂಜುನಾಥ್ ನಾಯ್ಕ ತ್ಯಾರ್ಸಿ, ವಿನಾಯಕ್ ನಾಯ್ಕ ದೊಡ್ಗದ್ದೆ, ಎಚ್ ಕೆ ಶಿವಾನಂದ ಸೇರಿದಂತೆ ಗ್ರಾಮಸ್ಥರು ಹೇಳಿದ್ದಾರೆ.