`ಕಾರವಾರದ ಕದಂಬ ನೌಕಾನೆಲೆಯಲ್ಲಿ ಲಂಚದ ಹಾವಳಿ ವಿಪರೀತವಾಗಿದೆ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೇ ಹೇಳಿದ್ದಾರೆ. `ಅಲ್ಲಿನ ಅಧಿಕಾರಿಗಳ ಹಪಾಹಪಿತನದಿಂದ ನಿರಾಶ್ರಿತರು ಸಮಸ್ಯೆಗೆ ಒಳಗಾಗಿದ್ದಾರೆ’ ಎಂದವರು ಅಳಲು ತೋಡಿಕೊಂಡಿದ್ದಾರೆ.
`ನೌಕಾನೆಲೆಯಿAದ ಸ್ಥಳೀಯರಿಗೆ ಹಾಗೂ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಪ್ರಸ್ತುತ ಪರಿಸ್ಥಿತಿ ತದ್ವಿರುದ್ಧವಾಗಿದೆ. ಉದ್ಯೋಗದ ವಿಷಯದಲ್ಲಿ ಸ್ಥಳೀಯರಿಗೆ ಅನ್ಯಾಯವಾಗಿದ್ದು, ಅರ್ಹ ಸ್ಥಳೀಯರಿಗೆ ಕೆಲಸ ಸಿಗುತ್ತಿಲ್ಲ. ಲಂಚಪಡೆದು ಬೇರೆ ಬೇರೆಯವರಿಗೆ ಉದ್ಯೋಗ ನೀಡಲಾಗುತ್ತಿದೆ. ಶೇ 60ರಷ್ಟು ಸ್ಥಳೀಯರನ್ನು ನೇಮಿಸಿಕೊಳ್ಳುವ ಬದಲು ಲಂಚ ನೀಡಿದವರಿಗೆ ಉದ್ಯೋಗ ನೀಡಲಾಗುತ್ತಿದೆ’ ಎಂದವರು ದೂರಿದರು.
`ಒಡಿಶಾ ಮತ್ತು ಆಂಧ್ರಪ್ರದೇಶದ ನೂರಾರು ಯುವಕರಿಗೆ ತರಬೇತಿ ನೀಡಿ ಅವರನ್ನು ಇಲ್ಲಿ ಖಾಯಂ ಉದ್ಯೋಗಿಯನ್ನಾಗಿ ನೇಮಿಸಲಾಗಿದೆ. ನೌಕಾನೆಲೆಯ ಕೆಲವು ಅಧಿಕಾರಿಗಳು ಹಾಗೂ ಸಂಘಟನೆಗಳು ಕೈಜೋಡಿಸಿ ಸ್ಥಳೀಯರ ಹಕ್ಕನ್ನು ಕಸಿದುಕೊಳ್ಳುತ್ತಿವೆ. ಅಲ್ಲಿ ಕೆಲಸ ಮಾಡುತ್ತಿರುವ ಕೆಲವೇ ಕೆಲವು ಸ್ಥಳೀಯ ನೌಕರರನ್ನು ಅವರ ಜಾತಿ ಮತ್ತು ಭೂಮಿ ಕಳೆದುಕೊಂಡವರು ಎಂಬ ಕಾರಣಕ್ಕೆ ಅವಮಾನಿಸುವ, ಹೀಗಳೆಯುವ ಅನಿಷ್ಠ ಪದ್ಧತಿ ನೌಕಾನೆಲೆಯ ಒಳಗೆ ನಡೆಯುತ್ತಿದೆ. ಜಮೀನು ನೀಡಿ ಬೀದಿ ಪಾಲಾದವರನ್ನು ಕೀಳುಮಟ್ಟದ ದೃಷ್ಟಿಯಿಂದ ನೋಡುವ ಅಧಿಕಾರಿಗಳ ವರ್ತನೆಯು ಅಮಾನವೀಯವಾಗಿದೆ’ ಎಂದವರು ಆಕ್ರೋಶವ್ಯಕ್ತಪಡಿಸಿದರು.
`9 ವರ್ಷಗಳ ಹಿಂದೆ ನೀಡಿದ ಭರವಸೆಯಂತೆ ನೌಕಾನೆಲೆಯ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶ ನೀಡುತ್ತಿಲ್ಲ. ಕಾನೂನಿನಲ್ಲಿ ಅವಕಾಶವಿದ್ದರೂ ಅಧಿಕಾರಿಗಳು ಮೀನುಗಾರರನ್ನು ಒಳಗೆ ಬಿಡದೆ ಕಿರುಕುಳ ನೀಡುತ್ತಿದ್ದಾರೆ. ನೌಕಾನೆಲೆಯ ಒಳಭಾಗದಲ್ಲಿ ಸಣ್ಣ ಮೀನುಗಳು ಈಗ ದೈತ್ಯ ಗಾತ್ರಕ್ಕೆ ಬೆಳೆದಿವೆ. ಆದರೆ ಅವುಗಳನ್ನು ಹಿಡಿಯಲು ಸ್ಥಳೀಯ ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ’ ಎಂದು ವಿನೋದ ಕುಡ್ತಲಕರ್ ಅವರು ವಿವರಿಸಿದರು. `ನೌಕಾನೆಲೆಯಲ್ಲಿ ನಡೆಯುವ ಗುತ್ತಿಗೆ ಕಾಮಗಾರಿಗಳಲ್ಲೂ ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ನೀಡದೇ ಎಲ್ಲಾ ಗುತ್ತಿಗೆಗಳನ್ನು ಹೊರರಾಜ್ಯದವರಿಗೇ ನೀಡಲಾಗುತ್ತಿದೆ. ಭೂಮಿ ಕಳೆದುಕೊಂಡ ಕುಟುಂಬಗಳ ಜೀವನೋಪಾಯಕ್ಕೆ ಭಾರಿ ಹಿನ್ನಡೆಯಾಗಿದ್ದು, ವಯೋಮಿತಿ ಮೀರಿದ ನಿರಾಶ್ರಿತರಿಗೂ ಉದ್ಯೋಗ ನೀಡುವ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು. ವಿನೋದ ನಾಯ್ಕ ಹಾಗೂ ಪವನ್ ದುರ್ಗೇಕರ್ ಅವರು ಹೋರಾಟದ ಎಚ್ಚರಿಕೆ ನೀಡಿದರು.