ಬೇಡ್ತಿ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಯ ವಿರುದ್ಧದ ಹೋರಾಟ ಜೋರಾಗಿದೆ. ನಿಸರ್ಗವನ್ನು ಉಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಉತ್ತರ ಕನ್ನಡ ಜನ ಒಂದಾಗಿದ್ದು, ಅವೈಜ್ಞಾನಿಕ ಯೋಜನೆಯ ವಿರುದ್ಧ ಸಾವಿರ ಸಾವಿರ ಸಂಖ್ಯೆಯಲ್ಲಿ ಆಂದೋಲನ ನಡೆಸಿದ್ದಾರೆ. ಭಾನುವಾರ ಮಧ್ಯಾಹ್ನ ಶಿರಸಿಯಲ್ಲಿ ನಡೆದ ಸಮಾವೇಶದಲ್ಲಿ ಜನ ಒಕ್ಕೂರಲಿನಿಂದ ನದಿ ತಿರುವು ಯೋಜನೆ ವಿರೋಧಿಸಿದ್ದಾರೆ.
ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಯೋಜನೆ ವಿರುದ್ಧ ಹೋರಾಟ ನಡೆಯುತ್ತಿದೆ. `ಪರಿಸರ ಉಳಿಸಲು ಹೋರಾಟ ಅನಿವಾರ್ಯವಾಗಿದ್ದು, ಜನರ ಭಾವನೆಗೆ ಸರ್ಕಾರ ಸ್ಪಂದಿಸದೇ ಇದ್ದರೆ ಚುನಾವಣೆ ಬಹಿಷ್ಕಾರ ಅನಿವಾರ್ಯ’ ಎಂದು ಸೋಂದಾ ಶ್ರೀಗಳು ಹೇಳಿದ್ದಾರೆ. ಈ ಜನಾಕ್ರೋಶ ಅರಿತ ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಇದೀಗ ತಮ್ಮ ನಿಲುವು ಬದಲಿಸಿದ್ದಾರೆ. ಆಂತರಿಕವಾಗಿ ಯೋಜನೆ ಪರವಾಗಿದ್ದ ಮುಖಂಡರು ಸಹ ಇದೀಗ ಬಹಿರಂಗವಾಗಿ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಲು ಶುರು ಮಾಡಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ ಜನರನ್ನು ನೋಡಿದ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದ್ದು, `ಯಾವುದೇ ಕಾರಣಕ್ಕೂ ನದಿ ನೀರು ತಿರುವು ಯೋಜನೆಯನ್ನು ಬೆಂಬಲಿಸುವುದಿಲ್ಲ’ ಎಂದು ಶ್ರೀಗಳ ಮುಂದೆ ಪ್ರಮಾಣ ಮಾಡಿದ್ದಾರೆ. ಶಾಸಕ-ಸಚಿವ-ಸಂಸದರು ಸೇರಿ ಈ ಜನಧ್ವನಿಯನ್ನು ಸರ್ಕಾರಕ್ಕೆ ಮುಟ್ಟಿಸಿದರೆ ಮಾತ್ರ ಯೋಜನೆ ಸ್ಥಗಿತವಾಗುವ ಸಾಧ್ಯತೆಯಿದ್ದು, ಈ ಎಲ್ಲಾ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಯೇ? ಎನ್ನುವುದರ ಬಗ್ಗೆ ಮುಂದಿನ ಚರ್ಚೆ ಶುರುವಾಗಿದೆ.
`ನದಿಗಳಿಗೆ ಸಹ ಬದುಕುವ ಹಕ್ಕಿದೆ. ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆ ದಿಕ್ಕಿನ ಕಡೆ ತಿರುಚುವುದು ಸರಿಯಲ್ಲ. ನದಿಗಳ ಸಹಜ ಅರಿವಿಗೆ ಅಡ್ಡಿಪಡಿಸುವುದು ಅಪರಾಧ’ ಎಂದು ಸ್ವರ್ಣವಲ್ಲಿ ಶ್ರೀಗಳು ಪ್ರತಿಪಾದಿಸಿದ್ದಾರೆ. `ಕುಡಿಯುವ ನೀರಿನ ಯೋಜನೆ ಹೆಸರಿನಲ್ಲಿ ಬೇರೆ ಹುನ್ನಾರ ನಡೆಯುವ ಅನುಮಾನ ಕಾಡುತ್ತಿದೆ. ಜಿಲ್ಲೆಯ ಸಂಪತ್ತು ಲೂಟಿ ಮಾಡುವ ಯೋಜನೆಯನ್ನು ಎಲ್ಲರೂ ಸೇರಿ ವಿರೋಧಿಸಬೇಕು’ ಎಂದು ಶಿರಳಗಿಯ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ. `ಸ್ವರ್ಣವಲ್ಲಿ ಶ್ರೀಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವು ಬದ್ಧ. ನೀರಿನ ವಿಷಯದಲ್ಲಿ ಪ್ರತಿಯೊಬ್ಬರು ಸಾತ್ವಿಕ ಹೋರಾಟ ನಡೆಸುತ್ತಿದ್ದು, ಸರ್ಕಾರ ಜನರ ಭಾವನೆ ಅರ್ಥ ಮಾಡಿಕೊಳ್ಳಬೇಕು’ ಎಂದು ಜಡೆ ಸಂಸ್ಥಾನದ ಮಹಾಂತ ಮಹಾಸ್ವಾಮೀಜಿ ಹೇಳಿದ್ದಾರೆ. `ನದಿ ತಿರುವು ಎಂಬುದು ಪೃಕೃತಿ ಮೇಲಿನ ಹಿಂಸಾಚಾರ. ಪಶ್ಚಿಮಘಟ್ಟಕ್ಕೆ ಗಾಯ ಆದರೆ ಅದರ ನೋವನ್ನು ಜಗತ್ತೇ ಅನುಭವಿಸಲಿದೆ’ ಎಂದು ನೆಲಮಾವು ಮಠದ ಮಾಧವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ನಡೆದ ಪ್ರಕೃತಿ ವಿಕೋಪಗಳ ಬಗ್ಗೆಯೂ ಅವರು ವಿವಿಧ ನಿದರ್ಶನಗಳನ್ನು ನೀಡಿದ್ದಾರೆ. `ನಾಗರಿಕತೆಯ ಉಳಿಯುವಿಕೆಗೆ ನದಿ ಸಂರಕ್ಷಣೆ ಅನಿವಾರ್ಯ. ನದಿಗಳಿಗೆ ತೊಂದರೆ ನೀಡಲು ಮುಂದಾದರೆ ಅದನ್ನು ಎಂದಿಗೂ ಸಹಿಸುವುದಿಲ್ಲ’ ಎಂದು ಸೋಂದಾ ಸ್ವಾದಿ ಜೈನ ಮಠದ ಬಟ್ಟಕಳಂಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ. `ನದಿಗಳಿಗೆ ಹಿಂಸೆ ನೀಡುವ ಇಂಥ ಯೋಜನೆ ಕೂಡಲೇ ನಿಲ್ಲಿಸಬೇಕು’ ಎಂದು ಸರ್ಕಾರದ ನಿಲುವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
`ನಿಮ್ಮೆಲ್ಲರ ಹಾಗೇ ನಾನು ಸಹ ಕೃಷಿಕ. ರೈತರು ಜಮೀನು ಕಳೆದುಕೊಂಡಾಗ ಆಗುವ ನೋವು ನನಗೆ ಅರಿವಿದೆ. ರೈತರ ಜೀವನದ ಜೊತೆ ಆಟವಾಡುವ ಯೋಜನೆ ಬರಲು ಬಿಡುವುದಿಲ್ಲ’ ಎಂದು ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ವಾಗ್ದಾನ ಮಾಡಿದ್ದಾರೆ. `ಜಿಲ್ಲೆಯ ಜನ ಈಗಾಗಲೇ ಸಾಕಷ್ಟು ತ್ಯಾಗ ಮಾಡಿದ್ದಾರೆ. ಮತ್ತೆ ಕೊಡುವುದಕ್ಕೆ ಜನರಲ್ಲಿ ಏನೂ ಉಳಿದಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ’ ಎಂದು ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. `ಸರ್ಕಾರ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಯೋಜನೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಬೇಕು. ಸ್ಥಳೀಯರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಆಗ್ರಹಿಸಿದ್ದಾರೆ. `ಪರಿಸರ ಧಾರಣಾ ಸಾಮರ್ಥ್ಯ ಅರಿಯದೇ ಯೋಜನೆ ರೂಪಿಸುವುದು ಸರಿಯಲ್ಲ. ನದಿ ತಿರುವು ವಿರುದ್ಧ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮುಂದಿನ ಪೀಳಿಗೆಯ ರಕ್ಷಣೆಗಾಗಿ ಯೋಜನೆ ವಿರೋಧಿಸುವುದು ಅನಿವಾರ್ಯ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೇಡವಾದ ಹಾಗೂ ಪರಿಸರಕ್ಕೆ ಮಾರಕವಾದ ಯೋಜನೆಗೆ ಸರ್ಕಾರವೂ ಆಸಕ್ತಿವಹಿಸಿಲ್ಲ. ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡುವುದೇ ನಮ್ಮ ಧ್ಯೇಯ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಜಿಲ್ಲೆಯ ಜನ ಕೇಳದಿದ್ದರೂ ಸರ್ಕಾರದವರು ಇಲ್ಲಿ ಅಣು ಸ್ಥಾವರ, ನೌಕಾನೆಲೆ ಕೊಟ್ಟಿದ್ದಾರೆ. ಆದರೆ, ಜನ ಕೇಳಿದ ಉತ್ತಮ ಆಸ್ಪತ್ರೆಯನ್ನು ಕೊಡಲು ಸಾಧ್ಯವಾಗಲಿಲ್ಲ. ಇದೀಗ ನೀರಾವರಿ ನೆಪವೊಡ್ಡಿ ನದಿ ಅಪಹರಣಕ್ಕೆ ಮುಂದಾಗಿರುವುದು ನಾಚಿಕೆಗೇಡು’ ಎಂದು ಪರಿಸರ ತಜ್ಞ ಬಿ ಎಂ ಕುಮಾರಸ್ವಾಮಿ ಆಕ್ರೋಶದ ಮಾತನಾಡಿದ್ದಾರೆ.