`ಅಂಕೋಲಾದ ವಕೀಲ ನಾರಾಯಣ ನಾಯಕ ಅವರಿಂದ 4 ಲಕ್ಷ ರೂ ನಷ್ಟವಾಗಿದೆ’ ಎಂದು 70 ವರ್ಷದ ಶಾಲಿನಿ ಗೋಳಿಕಟ್ಟಿ ದೂರಿದ್ದಾರೆ. `ಆ ಮಹಿಳೆ ಹಾಗೂ ಅವರ ಪುತ್ರಿ ಸ್ಪೂರ್ತಿ ಎಸ್ ಆರ್ ಅವರಿಂದ ತಮಗೂ 2 ಲಕ್ಷ ರೂ ಹಾನಿ ಆಗಿದೆ’ ಎಂದು ನಾರಾಯಣ ನಾಯಕ ಅವರು ಆರೋಪಿಸಿದ್ದಾರೆ.
ಅಂಕೋಲಾದ ಸೂರ್ವೆಯ ನಾರಾಯಣ ರಾಮಕೃಷ್ಣ ನಾಯಕ ಅವರು ಆ ಭಾಗದಲ್ಲಿ ಪ್ರಸಿದ್ಧ ವಕೀಲರಾಗಿದ್ದಾರೆ. ಅವರ ವಿರುದ್ಧ ಇದೀಗ ನಿವೃತ್ತ ಸರ್ಕಾರಿ ನೌಕರರಾದ ಶಾಲಿನಿ ಗಣಪತಿ ಗೋಳಿಕಟ್ಟಿ ಅವರು ತಿರುಗಿ ಬಿದ್ದಿದ್ದಾರೆ. `ತಮ್ಮ ಹಿಡಿತದಲ್ಲಿರುವ ಜಮೀನಿಗೆ ನುಗ್ಗಿ ವಕೀಲರು ದಾಂಧಲೆ ನಡೆಸಿದ್ದಾರೆ’ ಎಂಬುದು ಬೆಳಗಾವಿಯಲ್ಲಿ ವಾಸವಾಗಿರುವ ಶಾಲಿನಿ ಗೋಳಿಕಟ್ಟಿ ಅವರ ಆರೋಪ. `ಶಾಲಿನಿ ಹಾಗೂ ಸ್ಪೂರ್ತಿ ಸೇರಿ ಇತನ್ನ ಜಮೀನಿಗೂ ನುಗ್ಗಿ ಕಪೌಂಡ್ ಒಡೆದಿದ್ದಾರೆ’ ಎಂಬುದು ನಾರಾಯಣ ನಾಯಕ ಅವರ ದೂರು.
ಅಂಕೋಲಾದ ಸೂರ್ವೆಯಲ್ಲಿ ನಾರಾಯಣ ನಾಯಕ ಅವರ ಜಮೀನಿದೆ. ಅದರ ಸಮೀಪವೇ ಸ್ಪೂರ್ತಿ ಅವರ ಹೆಸರಿನಲ್ಲಿಯೂ ಭೂಮಿಯಿದೆ. ಡಿಸೆಂಬರ್ 25ರಂದು ಸ್ಪೂರ್ತಿ ಎಸ್ ಆರ್ ಅವರ ಹೆಸರಿನ ಜಮೀನಿಗೆ ನಾರಾಯಣ ನಾಯಕ ಅವರು ನುಗ್ಗಿದ್ದು, ಜೆಸಿಬಿ ಯಂತ್ರಗಳನ್ನು ಬಳಸಿ ಆ ಜಮೀನಿನ ರೂಪ ಬದಲಿಸಿದ್ದಾರೆ. ತೋಟದ ಸುತ್ತಲಿನ ಕಪೌಂಡ್ ಒಡೆದ ಕಾರಣ ಸ್ಪೂರ್ತಿ ಎಸ್ ಆರ್ ಅವರಿಗೆ 4 ಲಕ್ಷ ರೂ ಹಾನಿಯಾಗಿದೆ. ಇದನ್ನು ಪ್ರಶ್ನಿಸಿದ ಸ್ಪೂರ್ತಿ ಅವರ ತಾಯಿ ಶಾಲಿನಿ ಗೋಳಿಕಟ್ಟಿ ಅವರಿಗೆ ನಿಂದಿಸಿದ್ದಾರೆ. `ಇದು ನನ್ನ ಜಾಗ, ಏನೂ ಬೇಕಾದರೂ ಮಾಡುವೆ’ ಎಂದು ನಾರಾಯಣ ನಾಯಕ ಅವರು ಹೇಳಿದ್ದು, ಅದರಿಂದ ಆ ವೇಳೆ ಶಾಲಿನಿ ಗೋಳಿಕಟ್ಟಿ ಅವರು ಬೆದರಿದ್ದಾರೆ.
ನಾರಾಯಣ ನಾಯಕ ಅವರ ಬೈಗುಳವನ್ನು ಶಾಲಿನಿ ಗೋಳಿಕಟ್ಟಿ ಅವರಿಂದ ಸಹಿಸಲಾಗಲಿಲ್ಲ. ಹೀಗಾಗಿ ಅವರು ಸಹ ನಾರಾಯಣ ನಾಯಕ ಅವರಿಗೆ ಬುದ್ದಿ ಕಲಿಸಲು ಮುಂದಾಗಿದ್ದು, ಜನವರಿ 6ರಿಂದ 8ರ ಅವಧಿಯಲ್ಲಿ ಶಾಲಿನಿ ನಾಯಕ ಅವರು ಆ ಭೂಮಿ ಬಳಿ ಜೆಸಿಬಿ ಸದ್ದು ಮಾಡಿಸಿದ್ದಾರೆ. ತಮ್ಮ ಆಳುಗಳನ್ನು ಬಿಟ್ಟು ನಾರಾಯಣ ನಾಯಕ ಅವರ ಜಮೀನಿನ ಕಪೌಂಡ್ ಒಡೆದು ಹಾಕಿದ್ದಾರೆ. ಪಶ್ಚಿಮ ದಿಕ್ಕಿನಲ್ಲಿರುವ ಪಗಾರ್ ಬಿಟ್ಟು ಉಳಿದವೆಲ್ಲವನ್ನು ನೆಲಸಮ ಮಾಡಿಸಿದ್ದಾರೆ. ಇದರಿಂದ ನಾರಾಯಣ ನಾಯಕ ಅವರಿಗೂ 2 ಲಕ್ಷ ರೂ ನಷ್ಟವಾಗಿದೆ.
ಸದ್ಯ ನಾರಾಯಣ ನಾಯಕ ಅವರ ತಪ್ಪಿನ ಬಗ್ಗೆ ಶಾಲಿನಿ ಗೋಳಿಕಟ್ಟಿ ಅವರು ಪೊಲೀಸ್ ದೂರು ನೀಡಿದ್ದಾರೆ. ಶಾಲಿನಿ ಗೋಳಿಕಟ್ಟಿ ಹಾಗೂ ಅವರ ಪುತ್ರಿ ಸ್ಪೂರ್ತಿ ಸೇರಿ ಮಾಡಿದ ಅವಾಂತರದ ಬಗ್ಗೆ ನಾರಾಯಣ ನಾಯಕ ಅವರು ದೂರಿದ್ದಾರೆ. ಎರಡು ಕಡೆಯವರ ಮಾತು ಆಲಿಸಿದ ಅಂಕೋಲಾ ಪೊಲೀಸರು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.