ಭಟ್ಕಳದಲ್ಲಿ ನಡೆದ ಭೀಕರ ಅಪಘಾತದಲ್ಲಿ ಯುವಕರಿಬ್ಬರು ಸಾವನಪ್ಪಿದ್ದಾರೆ. ಭಟ್ಕಳದ ವೆಂಕಟಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಈ ದುರಂತ ನಡೆದಿದೆ.
ಭಟ್ಕಳದ ಆಜಾದ್ ನಗರದ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪೈ ಅವರ ಮಗ ಬಿಲಾಲ್ ಹಾಗೂ ಅಬ್ದುಲ್ ಸಲಾಮ್ ಅಕ್ರಮಿ ಅವರ ಮಗ ಆಯನ್ ಅವಘಡದಲ್ಲಿ ಕೊನೆಯುಸಿರೆಳೆದವರಾಗಿದ್ದಾರೆ. ಮಧ್ಯರಾತ್ರಿ ಸುಮಾರಿಗೆ ಅವರಿಬ್ಬರು ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವಾಹನವು ರಾಷ್ಟ್ರೀಯ ಹೆದ್ದಾರಿಯ ವೆಂಕಟಾಪುರ ಮಾರ್ಗವನ್ನು ತಲುಪಿದಾಗ ಅದು ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆಗ, ಬಿಲಾಲ್ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆಯನ್ ಅವರು ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದಾರೆ.
ಸದ್ಯ ಕಾರು ನಿಯಂತ್ರಣ ತಪ್ಪಿ ಅಪಘಾತ ನಡೆದ ಬಗ್ಗೆ ಮಾಹಿತಿಯಿದೆ. ಅದಾಗಿಯೂ, ಅಪಘಾತದ ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜೆಲ್ಲಿ ಕಲ್ಲುಗಳು ಕಾಣಿಸಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ. .ಅಪಘಾತ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಮೂರು ಸಿಸಿ ಕ್ಯಾಮರಾಗಳಿದ್ದು, ಅಪಘಾತಕ್ಕೆ ಕಾರಣವಾದ ಘಟನೆಗಳ ನಿಖರವಾದ ಕಾರಣ ತಿಳಿಯಲು ಸಹಾಯವಾಗುವ ಸಾಧ್ಯತೆಗಳಿವೆ.