ಗಗನಸಖಿ ಆಗಬೇಕು ಎಂದು ಕನಸು ಕಂಡಿದ್ದ ರಿಶೇಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ್ ಕೋಠಾರಕರ್ ಪರಾರಿ ಪ್ರಕರಣ ಮತ್ತೊಂದು ಸ್ವರೂಪಪಡೆದಿದೆ. ಆರೋಪಿ ಬಂಧನ ಹಾಗೂ ಸಮಗ್ರ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಸಾವಿರಾರು ಜನರ ಮುಂದೆ ರಿಶೇಲ್ ಡಿಸೋಜಾ ಅವರ ತಾಯಿ ರೀನಾ ಡಿಸೋಜಾ ಕಣ್ಣೀರು ಸುರಿಸಿದ್ದಾರೆ. `ತಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು’ ಎಂದವರು ಒತ್ತಾಯಿಸಿದ್ದಾರೆ.
`ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ್ ಕೋಠಾರಕರ್ ಅವರ ಕಾಟದಿಂದಲೇ ರಿಶೇಲ್ ಡಿಸೋಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೀಶೆಲ್ ಅವರ ದೇಹದ ಮೇಲೆ ಗಾಯದ ಗುರುತುಗಳಿದ್ದು, ಸಾವಿಗೂ ಮುನ್ನ ಅತ್ಯಾಚಾರ ನಡೆದಿದೆ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ. `ರೀಶೆಲ್ ದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸಬೇಕು. ದೇಹದ ಮೇಲಿದ್ದ ಗಾಯದ ಗುರುತನ್ನು ಲವ್ ಬೈಟ್ ಎಂದು ವೈದ್ಯರು ನಮೂದಿಸಿದ್ದು, ಆ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
ಮಂಗಳವಾರ ಮಿತ್ರ ಸಮಾಜದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿದ್ದು, ಪ್ರತಿಭಟನಾಕಾರರ ಪರ ಶಾಸಕ ಸತೀಶ್ ಸೈಲ್ ಸಹ ಮಾತನಾಡಿದ್ದಾರೆ. ಸಾವಿರಾರು ಜನ ರಿಶೇಲ್ ಸಾವಿಗೆ ಕಾರಣರಾದವರ ವಿರುದ್ಧ ಘೋಷಣೆ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. `ಪೊಲೀಸರು ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸಿದ್ದಾರೆ’ ಎಂದು ಸಹ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ. `ರೀಶೆಲ್ ಸಾವು ಸಂಭವಿಸಿ 11 ದಿನ ಕಳೆದರೂ ಆರೋಪಿ ಸಿಕ್ಕಿಲ್ಲ. ಈ ಪ್ರಕರಣ ತನಿಖೆಗೆ ಎಸ್ ಐ ಟಿ ರಚಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ದೀಪನ್ ಎಂ ಎನ್ ಪ್ರತಿಭಟನಾಕಾರರ ಅಳಲು ಆಲಿಸಿದ್ದಾರೆ. ಮರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸಿಕ್ಕಿದೆ.