ಯಲ್ಲಾಪುರ ಪಟ್ಟಣದಲ್ಲಿನ ಪಾದಚಾರಿ ಮಾರ್ಗದಲ್ಲಿ ಹೊಂಡ ಬಿದ್ದಿದ್ದು, ಆ ಹೊಂಡದಲ್ಲಿ ಜನ ಕಾಲು ಸಿಕ್ಕಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದೂರಿದರೂ ಕ್ರಮ ಜರುಗಿಸದ ಕಾರಣ ಸಾರ್ವಜನಿಕ ಸೇವಾ ಕೇಂದ್ರದವರು ಶುಕ್ರವಾರ ಹೊಂಡದ ಒಳಗೆ ಗಿಡ ನೆಟ್ಟು ಪ್ರತಿಭಟಿಸಿದ್ದಾರೆ.
ಯಲ್ಲಾಪುರ ಪಟ್ಟಣದ ಅನೇಕ ಕಡೆ ಪಾದಚಾರಿ ಮಾರ್ಗದಲ್ಲಿ ಹೊಂಡಗಳಾಗಿವೆ. ಮೊನ್ನೆ ಚರ್ಚ ಕಾಂಪ್ಲೇಕ್ಸ್ ಎದುರು ಶಾಲಾ ಬಾಲಕಿಯೊಬ್ಬರು ಆ ಹೊಂಡದಲ್ಲಿ ಕಾಲು ಸಿಕ್ಕಿಸಿಕೊಂಡಿದ್ದರು. ಅದಾದ ನಂತರ ಅಲ್ಲಿನ ಧೀರಜ ತಿನ್ನೇಕರ್ ಅವರು ಆ ಹೊಂಡಕ್ಕೆ ಕಲ್ಲು ಮುಚ್ಚಿದ್ದರು. ಆ ಕಲ್ಲು ಸಹ ಹೊಂಡದ ಆಳ ಸೇರಿದ್ದು, ಶುಕ್ರವಾರ ಮತ್ತೊಬ್ಬರು ಅದೇ ಹೊಂಡದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ತುರ್ತು ಕ್ರಮಕ್ಕೆ ಒತ್ತಾಯಿಸಿದರೂ ಕ್ರಮವಾಗದ ಕಾರಣ ಸಾರ್ವಜನಿಕ ಸೇವಾ ಕೇಂದ್ರದವರು ಈ ದಿನ ಹೊಂಡದಲ್ಲಿ ಗಿಡ ನಾಟಿ ಮಾಡಿ ಪ್ರತಿಭಟಿಸಿದರು. ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಪಟ್ಟಣ ಪಂಚಾಯತ ಸಿಬ್ಬಂದಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. `ಪಟ್ಟಣದ ಅನೇಕ ಕಡೆ ಹೊಂಡ ಬಿದ್ದಿದೆ. ಸದ್ಯ ಯಲ್ಲಾಪುರ ಜಾತ್ರೆ ಆಗಮಿಸಲಿದ್ದು, ಸಾವಿರಾರು ಜನ ಅದೇ ಪಾದಚಾರಿ ಮಾರ್ಗದಿಂದ ಸಂಚರಿಸುತ್ತಾರೆ. ಜಾತ್ರೆಗೆ ಬರುವ ಭಕ್ತರು ಹೊಂಡಕ್ಕೆ ಬೀಳದ ಹಾಗೇ ತಪ್ಪಿಸಲು ತುರ್ತು ಕ್ರಮ ಜರುಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಧೀರಜ ತಿನ್ನೇಕರ್ ಅವರ ಜೊತೆ ಜಾನಿ ಫರ್ನಾಂಡಿಸ್ ಹಾಗೂ ಮಾರಿಯಾ ವಡ್ಡರ್ ಇದ್ದರು.