`ಪ್ರಸಿದ್ಧ ಉಳವಿ ಚೆನ್ನಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಜನವರಿ 25ರಿಂದ ಫೆಬ್ರವರಿ 5ರವರೆಗೆ ನಡೆಯಲಿದೆ. ಅದ್ಧೂರಿಯಾಗಿ ಜಾತ್ರೆ ನಡೆಸಲು ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಸಂಜಯ ಕಿತ್ತೂರು ಅವರು ಹೇಳಿದ್ದಾರೆ.
ಪತ್ರಕರ್ತರ ಜೊತೆ ಮಾತನಾಡಿದ ಅವರು `ಜನವರಿ 25ರಂದು ಬೆಳಿಗ್ಗೆ 7 ಗಂಟೆಗೆ ಷಟಸ್ಥಲ ಧ್ವಜಾರೋಹಣ ನಡೆಯಲಿದ್ದು, ಸಂಜೆ 8 ಗಂಟೆಗೆ ರಥಗಳ ಪೂಜೆ ಹಾಗೂ ಸೀಮೆ ಕಟ್ಟುವ ಮಹಾ ಪೂಜೆ ಜರುಗಲಿದೆ. ಜನವರಿ 26ರಂದು ಪಲ್ಲಕ್ಕಿ ಉತ್ಸವ, 27ರಂದು ಭೂಮಿಪೂಜೆ, 28ರಂದು ಉತ್ಸವ ಮೂರ್ತಿ ಪ್ರತಿಷ್ಠಾಪನೆ, 29ರಂದು ಪಲ್ಲಕ್ಕಿ ಉತ್ಸವ ಹಾಗೂ ರಕ್ಷಾ ದೇವಿ ಸಣ್ಣ ರಥೋತ್ಸವ ನಡೆಯಲಿದೆ. 30ರಂದು ವೀರಭದ್ರೇಶ್ವರ ಸಣ್ಣ ರಥೋತ್ಸವ, 31ರಂದು ಎತ್ತಿಕಾಯುವ ಬಸವಣ್ಣನ ರಥೋತ್ಸವ ಜರುಗಲಿದೆ’ ಎಂಬ ಮಾಹಿತಿ ನೀಡಿದರು. `ಫೆಬ್ರವರಿ 1ರಂದು ಸರ್ವ ದೇವಾನುದೇವತೆಗಳ ಸಣ್ಣ ರಥೋತ್ಸವ ನಡೆಯಲಿದ್ದು, ಫೆ 2ರಂದು ರಾತ್ರಿ 8 ಗಂಟೆಗೆ ಚೆನ್ನಬಸವೇಶ್ವರ ರಥಾರೋಹಣ ನಡೆಯಲಿದೆ. ಫೆ 3ರಂದು ಮಹಾ ರಥೋತ್ಸವ, ಫೆ 4ರಂದು ಕುಸ್ತಿ ಕಾರ್ಯಕ್ರಮ ನಡೆಯಲಿದ್ದು, ಫೆ 5ರಂದು ಓಕಳಿ ಸಣ್ಣ ರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ’ ಎಂದು ವಿವರಿಸಿದರು.
`ಪ್ರತಿವರ್ಷದಂತೆ ಈ ಬಾರಿ ಕೂಡ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಉಳವಿ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನೂರಾರು ಭಕ್ತರು ಚಕ್ಕಡಿ ಗಾಡಿಗಳ ಮೂಲಕ ದೇವರಿಗೆ ಪೂಜೆ ಸಲ್ಲಿಸಲಿದ್ದು, ಜಾತ್ರೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಮಾಹಿತಿ ನೀಡಿದರು.
`ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಬೀದಿ ದೀಪ, ರಸ್ತೆ ದುರಸ್ತಿ, ಕುಡಿಯುವ ನೀರು ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಅವರು ಹೇಳಿದರು. `ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದ್ದು, 15 ಮೊಬೈಲ್ ಶೌಚಾಲಯಗಳಿಗಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಸುಮಾರು 2000 ಚಕ್ಕಡಿ ಗಾಡಿಗಳು ಆಗಮಿಸುವ ನಿರೀಕ್ಷೆಯಿದ್ದು, ಮದ್ಯ ಹಾಗೂ ಪ್ಲಾಸ್ಟಿಕ್ ಮುಕ್ತ ಜಾತ್ರೆಗಾಗಿ ಜಾಗೃತಿ ಮೂಡಿಸಲಾಗಿದೆ’ ಎಂದರು. ಉಳವಿ ಚೆನ್ನಬಸವೇಶ್ವರ ಟ್ರಸ್ಟ್ ಉಪಾಧ್ಯಕ್ಷ ಪ್ರಕಾಶ ಕಿತ್ತೂರು, ಸದಸ್ಯ ವಿರೇಶ ಕಂಬಳಿ, ಸಿದ್ದಾರೂಢ ಪಾಟೀಲ ಎಲ್ಲರನ್ನು ಜಾತ್ರೆಗೆ ಆಮಂತ್ರಿಸಿದರು.