ಡಾಕ್ಟರ್ ಆಗಬೇಕು ಎಂದು ಕನಸು ಕಂಡಿದ್ದ ಕಲ್ಯಾಣಿ ಅವರ ಬದುಕು ಗೊಕರ್ಣ ಸಮುದ್ರದಲ್ಲಿ ಅಂತ್ಯವಾಗಿದೆ. ಕೇರಳದ ಕಲ್ಯಾಣಿ ಅವರು ತಮ್ಮ ಸಹಪಾಠಿಗಳ ಜೊತೆ ಗೋಕರ್ಣಕ್ಕೆ ಬಂದಿದ್ದು, ಕಡಲತೀರದಲ್ಲಿ ಆಟವಾಡುವಾಗ ಅರಬ್ಬಿ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ಸಾಕಷ್ಟು ಹುಡುಕಾಟದ ನಂತರ ಅವರ ಶವ ಸಿಕ್ಕಿದೆ.
ಕೇರಳದ ಕಲ್ಯಾಣಿ (22) ಅವರು ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದರು. ಅಲ್ಲಿನ 11 ಜನರ ಜೊತೆ ಅವರು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಸಂಜೆ ಕಡಲತೀರದಲ್ಲಿ ಆಟವಾಡುವ ವೇಳೆ ಕಲ್ಯಾಣಿ ಅವರು ಕೊಚ್ಚಿ ಹೋಗಿದ್ದು, ಅವರ ಜೊತೆ ಇನ್ನೊಬ್ಬರು ಸಹ ಸಮುದ್ರ ಪಾಲಾಗಿದ್ದರು. ಆ ವೇಳೆ ಅಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಒಬ್ಬರನ್ನು ರಕ್ಷಿಸಿದ್ದರು.
ಸಮುದ್ರದ ನೀರು ಕುಡಿದಿದ್ದ ಮಹಮದ್ ಅಲಿ ಅವರನ್ನು ರಕ್ಷಣಾ ಸಿಬ್ಬಂದಿ ದಡಕ್ಕೆ ತಂದಿದ್ದು, ಅವರನ್ನು ಆಂಬುಲೆನ್ಸಿನ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಕಲ್ಯಾಣಿ ಅವರ ಹುಡುಕಾಟ ನಡೆದರೂ ಅವರು ಸಿಗಲಿಲ್ಲ. ಅಂಕೋಲಾ ತಾಲೂಕ ಆರೋಗ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಅಲಿ ಅವರಿಗೆ ಚಿಕಿತ್ಸೆ ನೀಡಿ ಜೀವ ಕಾಪಾಡಿದರು. ಈ ನಡುವೆ ಸಮುದ್ರ ಪಾಲಾದ ಕಲ್ಯಾಣಿ ಅವರ ಹುಡುಕಾಟಕ್ಕೆ ಅಗ್ನಿಶಾಮಕ ಸಿಬ್ಬಂದಿಯೂ ಬಂದರು. ಸಾಕಷ್ಟು ಶೋಧದ ನಂತರ ರಾತ್ರಿ ಅವರ ಶವ ಸಿಕ್ಕಿತು.
ಕಾರವಾರದ ಶವಾಗಾರದಲ್ಲಿ ಕಲ್ಯಾಣಿ ಅವರ ದೇಹವಿರಿಸಲಾಗಿದೆ. ಪೊಲೀಸರು ಸ್ಥಳ ಭೇಟಿ ಮಾಡಿದ್ದಾರೆ. ಕಲ್ಯಾಣಿ ಅವರ ಕುಟುಂಬದವರು ಆಗಮಿಸುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ಶವ ಹಸ್ತಾಂತರ ನಡೆಯಲಿದೆ.
`ಅಪಾಯಕಾರಿ ಸ್ಥಳದಲ್ಲಿ ಅತಿಯಾದ ಮೋಜು ಒಳಿತಲ್ಲ’