ಕಳೆದ ಐದು ವರ್ಷದ ಅವಧಿಯಲ್ಲಿ ಶಿರಸಿ ನ್ಯಾಯಾಲಯ 50ಕ್ಕೂ ಅಧಿಕ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.
ಮುಂಡಗೋಡಿನ ಜನಮೆಚ್ಚಿದ ಶಿಕ್ಷಕ ಎಂ ಎಫ್ ಮಳಗಿಕರ್ ಅವರ ಪುತ್ರರಾಗಿರುವ ರಾಜೇಶ ಮಳಗಿಕರ್ ಅವರಿಗೆ ಉಪನ್ಯಾಸಕರಾಗಬೇಕು ಎಂಬ ಕನಸಿತ್ತು. ತಂದೆ ಮರಣದ ನಂತರ ದೂರದ ಊರಿನ ಶಿಕ್ಷಣ ಅವರಿಗೆ ಸವಾಲಾಯಿತು. ಹೀಗಾಗಿ ಶಿರಸಿಯಲ್ಲಿ ರಾಜೇಶ ಮಳಗಿಕರ್ ಅವರು ಕಾನೂನು ಪದವಿ ಪೂರೈಸಿದ್ದು, ಅದಾದ ನಂತರ ಹಾವೇರಿಯ ಹಾನಗಲ್’ಗೆ ಹೋಗಿ ವಕೀಲ ವೃತ್ತಿ ಜೀವನ ಶುರು ಮಾಡಿದರು. ಅದಾದ ನಂತರ ಅಲ್ಲಿನ ಕಾನೂನು ಸೇವಾ ಸಮಿತಿ ಸದಸ್ಯರಾಗಿ ನೇಮಕವಾದರು. ನೊಂದವರಿಗೆ ನೆರವು ನೀಡುವ ಅವರ ಜನಪರ ನಿಲುವು ಕಕ್ಷಿದಾರರನ್ನು ಆಕರ್ಷಿಸಿತು. ತಾಳ್ಮೆಯಿಂದ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಒದಿಗಿಸಿಕೊಡುವ ಮಾರ್ಗವೂ ರಾಜೇಶ ಮಳಗಿಕರ್ ಅವರನ್ನು ಮುನ್ನಡೆಸಿತು.
ವಕೀಲ ವೃತ್ತಿ ಶುರು ಮಾಡಿದ ಕೆಲವೇ ವರ್ಷಗಳಲ್ಲಿ ರಾಜೇಶ ಮಳಗಿಕರ್ ಅವರು ಪ್ರಸಿದ್ಧಿಪಡೆದಿದ್ದರು. ತಮ್ಮ ಅನುಭವ, ಅಂತರಾಳದ ಕೌಶಲ್ಯ ಹಾಗೂ ತಪ್ಪಿತಸ್ಥರನ್ನು ತಕ್ಷಣ ಗುರುತಿಸುವ ಚಾಣಾಕ್ಷತನದಿಂದ ಅವರು ಹೆಸರು ಮಾಡಿದ್ದರು. ಈ ನಡುವೆ ಸರ್ಕಾರಿ ಅಭಿಯೊಜಕ ಹುದ್ದೆಗೆ ಅರ್ಜಿ ಕರೆಯಲಾಗಿದ್ದು, ತಮ್ಮ ಅದೃಷ್ಟ ಪರೀಕ್ಷೆಗಾಗಿ ರಾಜೇಶ ಮಳಗಿಕರ್ ಅವರು ಅರ್ಜಿ ಹಾಕಿದರು. ಲಿಖಿತ ಪರೀಕ್ಷೆ, ಸಂದರ್ಶನ ಎದುರಿಸಿದ ನಂತರ ರಾಜೇಶ ಮಳಗಿಕರ್ ಅವರ ಪ್ರತಿಭೆಗೆ ಸರ್ಕಾರ ವೇದಿಕೆ ಕಲ್ಪಿಸಿತು. ಧಾರವಾಡ, ಗದಗ, ಲಕ್ಷಿಶ್ವರ, ಕುಂದಗೋಳ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿದ ನಂತರ ರಾಜೇಶ ಮಳಗಿಕರ್ ಅವರು ಶಿರಸಿಗೆ ಬಂದರು. 2021ರಲ್ಲಿ ಶಿರಸಿ ನ್ಯಾಯಾಲಯದಲ್ಲಿ ಅವರು ಕರ್ತವ್ಯ ಶುರು ಮಾಡಿದ್ದು, ಈವರೆಗೆ 52 ಪ್ರಕರಣಗಳಲ್ಲಿ ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
ರಾಜೇಶ ಮಳಗಿಕರ್ ಅವರಿಗೆ `ಉಪನ್ಯಾಸಕನಾಗಬೇಕು’ ಎಂಬ ಬಾಲ್ಯದ ಕನಸು ಹಾಗೇ ಇತ್ತು. ಹೀಗಾಗಿ ಸರ್ಕಾರಿ ಅಭಿಯೋಜಕರಾಗಿದ್ದ ಅವರು ಸರ್ಕಾರಿ ಅಧಿಕಾರಿಗಳಿಗೆ ಪಾಠ ಮಾಡಲು ಶುರು ಮಾಡಿದರು. ಶಾಲಾ-ಕಾಲೇಜುಗಳಿಗೆ ತೆರಳಿ ಕಾನೂನು ತಿಳುವಳಿಕೆ ಮೂಡಿಸುವ ಆಂದೋಲನ ನಡೆಸಿದರು. ಸರ್ಕಾರಿ ಸಿಬ್ಬಂದಿಗೆ ಅಗತ್ಯವಾಗಿ ಅನುಸರಿಸಬೇಕಾದ ನೀತಿ-ನಿಯಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ತಮ್ಮಲ್ಲಿರುವ ಕಾನೂನು ಜ್ಞಾನವನ್ನು ಉಪನ್ಯಾಸದ ಮೂಲಕ ಎಲ್ಲಾ ಕಡೆ ಪಸರಿಸುವ ಕಾಯಕ ನಡೆಸಿದರು.
ನ್ಯಾಯಾಲಯದಲ್ಲಿಯೂ ಅಷ್ಟೇ, ನೇರವಾಗಿ ಸಾಕ್ಷಿ ಲಭ್ಯವಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿ ಆಧಾರದಲ್ಲಿ ಅವರು ವಾದ ಮಾಡುತ್ತಾರೆ. ಉಪನ್ಯಾಸಕರ ಮಾದರಿಯಲ್ಲಿ ಸಾಕ್ಷಿಸಹಿತ ವಿವರಿಸಿ ಮನವರಿಕೆ ಮಾಡುತ್ತಿದ್ದಾರೆ. ಬೇರೆ ಬೇರೆ ನ್ಯಾಯಾಲಯದಲ್ಲಿನ ವಿಚಾರಣೆ ಹಾಗೂ ತೀರ್ಪುಗಳ ಬಗ್ಗೆ ಉಲ್ಲೇಖಿಸಿ ಅವರು ತಮ್ಮ ಕಕ್ಷಿದಾರರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಾರೆ. ಸುಳ್ಳು ಸಾಕ್ಷಿ ಹೇಳಿದವರನ್ನು ಸಹ ರಾಜೇಶ ಮಳಗಿಕರ್ ಅವರು ಸುಮ್ಮನೆ ಬಿಟ್ಟಿಲ್ಲ. ಮೊದಲು ಅಪರಾಧ ಕೃತ್ಯ ನೋಡಿರುವುದಾಗಿ ಹೇಳಿಕೆ ನೀಡಿ, ನಂತರ ಹೇಳಿಕೆ ತಿರುಚಿದವರನ್ನು ಸಹ ಸುಧೀರ್ಘ ವಿಚಾರಣೆ ನಡೆಸಿ ಅವರಿಂದ ಸತ್ಯಾಂಶ ಬಾಯ್ಬಿಡಿಸಿದ ಅನೇಕ ಉದಾಹರಣೆಗಳಿವೆ. ಪ್ರತಿಕೂಲ ಸಾಕ್ಷಿ ನುಡಿದ 25ಕ್ಕೂ ಅಧಿಕ ಜನರ ವಿರುದ್ಧ ಪಾಟಿ ಸವಾಲು ಹಾಕಿ ಸತ್ಯ ಹೊರತಂದಿದ್ದಾರೆ.
ರಾಜೇಶ ಮಳಗಿಕರ್ ಅವರು ಯಾವುದೇ ದೂರಾದರೂ ಮೊದಲು ಆ ದೂರಿನ ಸತ್ಯಾಸತ್ಯತೆ ಅರಿಯುತ್ತಾರೆ. ನಂತರ ಅದಕ್ಕೆ ಸಂಬAಧಿಸಿದ ದಾಖಲೆ ನೋಡಿ ವಾದ ಮಂಡಿಸುತ್ತಾರೆ. ಕೆಳ ನ್ಯಾಯಾಲಯದಲ್ಲಿ ನ್ಯಾಯ ಸಿಗದೇ ಇದ್ದರೆ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ನೊಂದವರಿಗೆ ನ್ಯಾಯ ಕೊಡಿಸುತ್ತಿದ್ದಾರೆ. ಅತ್ಯಂತ ಕ್ಲಿಷ್ಟಕರ ಪ್ರಕರಣಗಳನ್ನು ಸಹ ನಿರಂತರ ಅಧ್ಯಯನ, ಸಮರ್ಥ ವಾದದಿಂದ ಅವರು ಗೆದ್ದಿದ್ದಾರೆ. ಸಾಕ್ಷಿ ಕೊರತೆ ಕಾರಣದಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಗಳನ್ನು ಸಹ ಸಾಂದರ್ಭಿಕ ಸಾಕ್ಷಿಗಳಲ್ಲಿ ಸಿಲುಕಿಸಿ ವಾದ ಮಾಡಿದ್ದಾರೆ. ದಾಂಡೇಲಿ ನ್ಯಾಯವಾದಿ ಅಜೀತ ನಾಯಕ ಹಾಗೂ ಅರಣ್ಯಾಧಿಕಾರಿ ಮಧನ ನಾಯಕ ಕೊಲೆ ಪ್ರಕರಣ,
ಮುಂಡಗೋಡು ಟಿಬೇಟಿಯನ್ ಕ್ಯಾಂಪಿನ ದರೋಡೆ ಪ್ರಕರಣ, ಶ್ರೀಗಂಧ ಕಳ್ಳತನ ಪ್ರಕರಣ, ಹಳಿಯಾಳದ ಅರಣ್ಯ ವೀಕ್ಷಕನ ಕೊಲೆ ಪ್ರಕರಣ, ಸಿದ್ದಾಪುರದ ಹಿರೆಕೈ ಕೊಲೆ ಪ್ರಕರಣ, ಬಿಜೆಪಿ ಮುಖಂಡನ ಕೊಲೆ ಪ್ರಕರಣದಲ್ಲಿ ಎಸ್ ಡಿ ಪಿ ಐ ಬೆಂಬಲಿತರಿಗೆ ಶಿಕ್ಷೆ ಸೇರಿ ಉತ್ತರ ಕನ್ನಡ ಜಿಲ್ಲೆಯ 52 ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿದ್ದಾರೆ. ಅವರ ಈ ಪ್ರಾಮಾಣಿಕ ಸೇವೆಗೆ ಹತ್ತು-ಹಲವು ಪ್ರಶಸ್ತಿಗಳು ಸಿಕ್ಕಿವೆ.