ಸಂಘದಲ್ಲಿ ಮಾಡಿದ ಸಾಲದ ತಲೆಬಿಸಿಯಲ್ಲಿದ್ದ ಸಿದ್ದಾಪುರದ ಸತೀಶ ನಾಯ್ಕ ಅವರು ಅದೇ ನೋವಿನಲ್ಲಿ ವಿಷ ಸೇವಿಸಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಲಿಲ್ಲ.
Advertisement. Scroll to continue reading.
ಸಿದ್ದಾಪುರದ ಹೊನ್ನೆಬಿಡಾರ ಕ್ಯಾದಗಿಯಲ್ಲಿ ಸತೀಶ ನಾಯ್ಕ ಅವರು ವಾಸವಾಗಿದ್ದರು. ಕೃಷಿಕರಾಗಿದ್ದ ಅವರು ಸರಾಯಿ ಸೇವನೆಯನ್ನು ರೂಡಿಸಿಕೊಂಡಿದ್ದರು. ನಿತ್ಯವು ಮದ್ಯ ಸೇವನೆ ಮಾಡಿ ಮನೆಗೆ ಬರುತ್ತಿದ್ದರು. ಸಂಘದ ಸಾಲ ಹಾಗೂ ಅವರಿವರ ಬಳಿ ಕೈಗಡಪಡೆದಿದನ್ನು ತೀರಿಸಲಾಗದ ನೋವಿನಲ್ಲಿ ಅವರು ಇನ್ನಷ್ಟು ಮದ್ಯ ಸೇವಿಸಲು ಶುರು ಮಾಡಿದ್ದರು.
ತಮಗಿರುವ ನೋವು, ಸಾಲಗಾರರ ಕಾಟದ ಬಗ್ಗೆ ಸತೀಶ ನಾಯ್ಕ ಅವರು ಪತ್ನಿ ಶಶಿಕಲಾ ಅವರ ಬಳಿಯೂ ಹೇಳುತ್ತಿದ್ದರು. ಸಾಲ ತೀರಿಸಲಾಗದ ಕಾರಣ ಅಕ್ಟೊಬರ್ 1ರಂದು ಅವರು ವಿಷ ಸೇವಿಸಿದರು. ಅಸ್ವಸ್ಥರಾದ ಸತೀಶ ನಾಯ್ಕ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದರು.
ಆದರೆ, ಅಲ್ಲಿಯೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ. ವೈದ್ಯರು ಸಾಕಷ್ಟು ಶ್ರಮಿಸಿದರೂ ಸತೀಶ ನಾಯ್ಕ ಅವರು ಅದಕ್ಕೆ ಸ್ಪಂದಿಸಲಿಲ್ಲ. ಪತಿ ಸಾವಿನ ಬಗ್ಗೆ ಶಶಿಕಲಾ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.